ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಗುರುವಾರ ಮಧ್ಯಾಹ್ನ ಲೋಕಭವನಕ್ಕೆ ತೆರಳಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಸಂಪುಟ ಸಹೋದ್ಯೋಗಿಗಳ ಜತೆ ಗುರುವಾರ ಉಪಾಹಾರ ಕೂಟ ನಡೆಸಿದ ಸಿದ್ದರಾಮಯ್ಯ ಅವರು, ಬಳಿಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಆಪ್ತ ಸಚಿವರೊಂದಿಗೆ ಜತೆ ಲೋಕಭವನಕ್ಕೆ ತೆರಳಿದರು.
ಬೆಂಗಳೂರು : ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಗುರುವಾರ ಮಧ್ಯಾಹ್ನ ಲೋಕಭವನಕ್ಕೆ ತೆರಳಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಸಂಪುಟ ಸಹೋದ್ಯೋಗಿಗಳ ಜತೆ ಗುರುವಾರ ಉಪಾಹಾರ ಕೂಟ ನಡೆಸಿದ ಸಿದ್ದರಾಮಯ್ಯ ಅವರು, ಬಳಿಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಆಪ್ತ ಸಚಿವರೊಂದಿಗೆ ಜತೆ ಲೋಕಭವನಕ್ಕೆ ತೆರಳಿದರು.
ರಾಜ್ಯಪಾಲ ಥಾವರ್ಚಂದ್ ಗೆಹಲೋತ್ ಅವರ ಅನುಪಸ್ಥಿತಿ ಹಿನ್ನೆಲೆಯಲ್ಲಿ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪ್ರಭುಶಂಕರ್ ಅವರಿಗೆ ರಾಜೀನಾಮೆ ಸಲ್ಲಿಸಿದರು.
ಉಪಾಹಾರ ಕೂಟದಲ್ಲಿ ಸಚಿವರೊಂದಿಗೆ ತಮ್ಮ ನಿರ್ಧಾರ ಪ್ರಕಟಿಸಿದ ಸಿದ್ದರಾಮಯ್ಯ ಅವರು, ಸರ್ಕಾರಿ ಕಾರು ತ್ಯಜಿಸಿ ಸಚಿವ ಬೈರತಿ ಸುರೇಶ್ ಅವರ ಖಾಸಗಿ ಕಾರಿನಲ್ಲಿ ಲೋಕಭವನಕ್ಕೆ ತೆರಳಿದರು. ರಾಜೀನಾಮೆ ಸಲ್ಲಿಸಿದ ಬಳಿಕ ಅದೇ ಕಾರಿನಲ್ಲಿ ಅಧಿಕೃತ ನಿವಾಸ ಕಾವೇರಿಗೆ ವಾಪಸಾದ ಅವರು ಸುದ್ದಿಗೋಷ್ಠಿ ನಡೆಸಿ ರಾಜೀನಾಮೆ ಸಲ್ಲಿಸಿರುವುದಾಗಿ ಪ್ರಕಟಿಸಿದರು.
ರಾಜ್ಯಪಾಲರು ಅಂಗೀಕರಿಸಬೇಕು:
ರಾಜೀನಾಮೆ ಸಲ್ಲಿಸಿರುವ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಲೋಕಭವನ ಕಚೇರಿಗೆ ರಾಜೀನಾಮೆ ಸಲ್ಲಿಸಿದ್ದೇನೆ. ರಾಜ್ಯಪಾಲರು ವಾಪಸಾದ ಬಳಿಕ ನನ್ನ ರಾಜೀನಾಮೆ ಅಂಗೀಕರಿಸುವ ಪೂರ್ಣ ವಿಶ್ವಾಸವಿದೆ. ನಿಯಮಾನುಸಾರ ಅವರು ರಾಜೀನಾಮೆ ಅಂಗೀಕಾರ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಒಬ್ಬರು ಮುಖ್ಯಮಂತ್ರಿ ರಾಜೀನಾಮೆ ನೀಡಿದರೆ ಅಂಗೀಕರಿಸಿ ಮುಂದಿನ ಮುಖ್ಯಮಂತ್ರಿಗೆ ಅವಕಾಶ ಮಾಡಿಕೊಡಬೇಕು ಎಂಬುದು ರಾಜ್ಯಪಾಲರ ಜವಾಬ್ದಾರಿ. ನಾವು 2023ರ ಚುನಾವಣೆಯಲ್ಲಿ 135 ಸ್ಥಾನ ಪಡೆದಿದ್ದು, ಒಟ್ಟು 136 ಸ್ಥಾನಗಳ ಬಲ ಹೊಂದಿದ್ದೇವೆ. ಇದರ ಜತೆಗೆ ನಾವು ಇಬ್ಬರು ಪಕ್ಷೇತರ ಬೆಂಬಲವನ್ನೂ ಪಡೆದಿದ್ದು, ಸಂಪೂರ್ಣ ಬಹುಮತ ಹೊಂದಿದ್ದೇವೆ.
ಹೀಗಾಗಿ ಮುಂದಿನ ಮುಖ್ಯಮಂತ್ರಿ ನೇಮಕಕ್ಕೆ ಅವಕಾಶ ಮಾಡಿಕೊಡಬೇಕಾಗಿರುವುದು ಸಂವಿಧಾನ ಬದ್ಧ ಜವಾಬ್ದಾರಿ. ಹೀಗಾಗಿ ರಾಜ್ಯಪಾಲರ ರಾಜೀನಾಮೆ ಅಂಗೀಕರಿಸಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ಲೋಕಭವನಕ್ಕೆ ತೆರಳಿ ರಾಜೀನಾಮೆ
ಲೋಕಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸುವ ವೇಳೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಡಾ.ಜಿ. ಪರಮೇಶ್ವರ್, ಎಂ.ಬಿ. ಪಾಟೀಲ್, ಎಚ್.ಸಿ. ಮಹದೇವಪ್ಪ, ಪ್ರಿಯಾಂಕ್ ಖರ್ಗೆ, ಚಲುವರಾಯಸ್ವಾಮಿ, ಡಾ. ಶರಣ್ ಪ್ರಕಾಶ್ ಪಾಟೀಲ್, ಕೆ. ವೆಂಕಟೇಶ್, ವಿಧಾನಪರಿಷತ್ ಮುಖ್ಯಸಚೇತಕ ಸಲೀಂ ಅಹಮದ್, ಶಾಸಕರಾದ ಎನ್.ಎ. ಹ್ಯಾರಿಸ್, ಎ.ಎಸ್. ಪೊನ್ನಣ್ಣ, ಅಶೋಕ್ ಪಟ್ಟಣ್, ವಿಜಯಾನಂದ ಕಾಶಪ್ಪನವರ್, ಅಶೋಕ್ ಪಟ್ಟಣ್ ಸೇರಿದಂತೆ ಹಲವರು ಹಾಜರಿದ್ದರು.
