ಕರ್ನಾಟಕದ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಆಭರಣ ಮಳಿಗೆಯೊಂದರಲ್ಲಿ ಡಿ.28ರಂದು ನಡೆದಿದ್ದ 10 ಕೋಟಿ ರು. ಮೌಲ್ಯದ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

 ಭಾಗಲ್ಪುರ/ ದರ್ಭಾಂಗ: ಕರ್ನಾಟಕದ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಆಭರಣ ಮಳಿಗೆಯೊಂದರಲ್ಲಿ ಡಿ.28ರಂದು ನಡೆದಿದ್ದ 10 ಕೋಟಿ ರು. ಮೌಲ್ಯದ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. 

ಕರ್ನಾಟಕ ಪೊಲೀಸರ ಸಹಯೋಗದೊಂದಿಗೆ ಬಿಹಾರದ ಎಸ್‌ಟಿಎಫ್‌ ಈ ಕಾರ್ಯಾಚರಣೆ

ಬಂಧಿತರನ್ನು ಹೃಷಿಕೇಶ್‌ ಸಿಂಗ್‌ ಮತ್ತು ಪಂಕಜ್‌ ಅಲಿಯಾಸ್‌ ಸತುವಾ ಎಂದು ಗುರುತಿಸಲಾಗಿದೆ. ಕರ್ನಾಟಕ ಪೊಲೀಸರ ಸಹಯೋಗದೊಂದಿಗೆ ಬಿಹಾರದ ಎಸ್‌ಟಿಎಫ್‌ ಈ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಬಂಧಿತರಿಂದ ಆಭರಣ ಮಳಿಗೆಯಲ್ಲಿ ಕಳವು ಮಾಡಿದ್ದ ಚಿನ್ನದ ಸರ, ಉಂಗುರ, 1 ಲಕ್ಷ ರು. ನಗದು, ಬೈಕ್‌ ವಶಪಡಿಸಿಕೊಳ್ಳಲಾಗಿದೆ. ಬಂಧಿತರ ಪೈಕಿ ಪಂಕಜ್‌ ಕುಮಾರ್‌ ವಿರುದ್ಧ ಕರ್ನಾಟಕ, ಬಿಹಾರ, ಜಾರ್ಖಂಡ್‌, ರಾಜಸ್ಥಾನ ರಾಜ್ಯಗಳಲ್ಲಿ ಕೊಲೆ, ಕಳ್ಳತನ ಸೇರಿದಂತೆ ಹಲವು ಪ್ರಕರಣ ದಾಖಲಾಗಿದ್ದರೆ, ಹೃಷಿಕೇಶ್‌ ವಿರುದ್ಧವೂ ಬಿಹಾರದಲ್ಲಿ 4 ಕ್ರಿಮಿನಲ್‌ ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಏನಾಗಿತ್ತು?:

ಕಳೆದ ಡಿ.28ರಂದು 2 ಬೈಕ್‌ನಲ್ಲಿ ಬಂದಿದ್ದ 5 ದರೋಡೆಕೋರರ ಗುಂಪು ಹಾಡಹಗಲೇ ಹುಣಸೂರಿನ ಸ್ಕೈ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌ ಎಂಬ ಆಭರಣ ಶೋರೋಂಗೆ ನುಗ್ಗಿತ್ತು. ಈ ವೇಳೆ ಗನ್‌ ಹಿಡಿದು ಅಲ್ಲಿದ್ದ ಸಿಬ್ಬಂದಿ ಮತ್ತು ಗ್ರಾಹಕರನ್ನು ಬೆದರಿಸಿದ್ದ ದರೋಡೆಕೋರರು ಕೇವಲ 4 ನಿಮಿಷಗಳ ಅವಧಿಯಲ್ಲಿ 10 ಕೋಟಿ ರು. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.

ಏನೇನು ಕಳವು?:

150 ನೆಕ್ಲೇಸ್‌, 70 ಉಂಗುರ, 64 ಬಳೆ, 65 ಚೈನ್‌, 19 ಕರಿಮಣಿ ಸರ, 13 ವಜ್ರದ ಉಂಗುರ, 17 ಕಿವಿಯೋಲೆ, 12 ಲಾಕೆಟ್‌, 12 ಕಾಲುಚೈನ್‌ 8 ಬ್ರೇಸ್‌ಲೆಟ್‌ ಕಳವಾಗಿದೆ ಎಂದು ಅಂಗಡಿ ಮಾಲೀಕರು ದೂರು ನೀಡಿದ್ದರು.