ಸಾರಾಂಶ
ದೆಹಲಿ : ಸಮಗ್ರವಾಗಿ ಸಾಮಾಜಿಕ ನ್ಯಾಯವನ್ನು ಸಾಧಿಸಲು, ಶಿಕ್ಷಣ ಮತ್ತು ಆರೋಗ್ಯ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ಎಲ್ಲಾ ಅರ್ಹ ಜನರನ್ನು ಒಳಗೊಳ್ಳುವ ‘ಪರಿಪೂರ್ಣ ವಿಧಾನ’ವನ್ನು ಅಳವಡಿಸಿಕೊಳ್ಳಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಹೇಳಿದ್ದಾರೆ.ಲೋಕಸಭೆಯಲ್ಲಿ 2024-25ರ ಕೇಂದ್ರ ಬಜೆಟ್ ಅನ್ನು ಮಂಡಿಸಿದ ಅವರು, ಅಂತರ್ಗತ ಮಾನವ ಸಂಪನ್ಮೂಲ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು, ಸಾಮಾಜಿಕ ನ್ಯಾಯ ಶುದ್ಧೀಕರಣ ವಿಧಾನವನ್ನು ಅಳವಡಿಸಿಕೊಳ್ಳಲಾಗುವುದು ಎಂದು ಹೇಳಿದರು.
ಸಾಮಾಜಿಕ ನ್ಯಾಯವು ಎಲ್ಲಾ ಅರ್ಹ ವ್ಯಕ್ತಿಗಳನ್ನು ತಲುಪಬೇಕು ಹಾಗೂ ಸರ್ಕಾರದ ವಿವಿಧ ಕಾರ್ಯಕ್ರಮಗಳು ಮತ್ತು ಉಪಕ್ರಮಗಳಲ್ಲಿ ಅವರು ತೊಡಗಿಕೊಂಡಿರಬೇಕು. ಇದಕ್ಕೆ ಪರಿಪೂರ್ಣ ವಿಧಾನ ಎಂದು ಕರೆಯುತ್ತಾರೆ.
ಸಮಾಜದ ಎಲ್ಲರಿಗೂ ಯೋಜನೆ: ಸಾಮಾಜಿಕ ನ್ಯಾಯವನ್ನು ಸಮಗ್ರವಾಗಿ ಸಾಧಿಸಲು, ಶಿಕ್ಷಣ ಮತ್ತು ಆರೋಗ್ಯ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಎಲ್ಲ ಅರ್ಹರಿಗೂ ತಲುಪಬೇಕು.
ಕುಶಲಕರ್ಮಿಗಳು, ಸ್ವಸಹಾಯ ಗುಂಪುಗಳು, ಎಸ್ಸಿ/ಎಸ್ಟಿ ಮತ್ತು ಮಹಿಳಾ ಉದ್ಯಮಿಗಳು ಮತ್ತು ಬೀದಿ ವ್ಯಾಪಾರಿಗಳ ಆರ್ಥಿಕ ಚಟುವಟಿಕೆಗಳನ್ನು ಬೆಂಬಲಿಸುವ ಯೋಜನೆಗಳಾದ ಪಿಎಂ ವಿಶ್ವಕರ್ಮ, ಪಿಎಂ ಸ್ವನಿಧಿ, ಎನ್ಆರ್ಎಲ್ಎಂ ಮತ್ತು ಸ್ಟ್ಯಾಂಡ್-ಅಪ್ ಇಂಡಿಯಾಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲಾಗುವುದು.ಪೂರ್ವ ರಾಜ್ಯಗಳ ಅಭಿವೃದ್ಧಿಗೆ ಪೂರ್ವೋದಯ:
‘ವಿಕಸಿತ ಭಾರತ’ ಗುರಿಯನ್ನು ಸಾಧಿಸಲು ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಆಂಧ್ರಪ್ರದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಸರ್ಕಾರ ಪೂರ್ವೋದಯ ಯೋಜನೆಯನ್ನು ರೂಪಿಸಲಿದೆ. ಪೂರ್ವೋದಯ ಯೋಜನೆಯಡಿ ನಾಲ್ಕೂ ರಾಜ್ಯಗಳಲ್ಲಿ ಹೆದ್ದಾರಿ ಸೇರಿ ಮಹತ್ವದ ಮೂಲಸೌಕರ್ಯ ಯೋಜನೆ ಹಮ್ಮಿಕೊಳ್ಳಲಾಗುವುದು. ಬಿಹಾರದಲ್ಲಿ ಹೆದ್ದಾರಿ ಅಭಿವೃದ್ಧಿಗೆಂದೇ 26 ಸಾವಿರ ಕೋಟಿ ರು. ವಿನಿಯೋಗಿಸಲಾಗುವುದು.
ಆಂಧ್ರದ ಹಿಂದುಳಿದ ಭಾಗದ ಅಭಿವೃದ್ಧಿ:
ಇನ್ನು ಆಂಧದ್ರಪ್ರದೇಶ ರಾಜಧಾನಿ ಅಮರಾವತಿ ಅಭಿವೃದ್ಧಿಗೆ 15 ಸಾವಿರ ಕೋಟಿ ರು. ನೀಡಲಾಗುವುದು. ಆಂಧ್ರದ ಪೋಲಾವರಂ ನೀರಾವರಿ ಯೋಜನೆಗೆ ನೆರವು ನೀಡಲಾಗುವುದು. ಹೈದರಬಾದ್-ಬೆಂಗಳೂರು ಕೈಗಾರಿಕಾ ಕಾರಿಡಾರ್ ನಿರ್ಮಿಸಲಾಗುವುದು. ಆಂಧ್ರದ 3 ಹಿಂದುಳಿದ ಪ್ರದೇಶಗಳಾದ ರಾಯಲಸೀಮಾ, ಪ್ರಕಾಶಂ ಹಾಗೂ ಉತ್ತರ ಆಂಧ್ರ ಕರಾವಳಿ ಅಭಿವೃದ್ಧಿಗೆ ಕೇಂದ್ರೀಯ ನೆರವು ಕೊಡಲಾಗುವುದು.3 ಕೋಟಿ ಮನೆ ನಿರ್ಮಾಣ:
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದಂತೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 3 ಕೋಟಿ ಮನೆ ಮನೆ ನಿರ್ಮಿಸಲಾಗುವುದು.
ಮಹಿಳೆ, ಮಕ್ಕಳಿಗೆ 3 ಲಕ್ಷ ಕೋಟಿ ರು.:
ಮಕ್ಕಳು ಹಾಗೂ ಮಹಿಳೆಯರ ಪ್ರಯೋಜನಕ್ಕೆ 3 ಲಕ್ಷ ಕೋಟಿ ರು. ಹಂಚಿಕೆ ಮಾಡಲಾಗುವುದು. ಬುಡಕಟ್ಟು ಜನರ ಅಭಿವೃದ್ಧಿಗೆ ಪ್ರಧಾನ ಮಂತ್ರಿ ಜನಜಾತೀಯ ಗ್ರಾಮ ಅಭಿಯಾನ ಯೋಜನೆ ಹಮ್ಮಿಕೊಳ್ಳಲಾಗುವುದು. ಆದಿವಾಸಿಗಳ ಜಿಲ್ಲೆಗಳನ್ನು ಗುರುತಿಸಿ 63 ಸಾವಿರ ಗ್ರಾಮ ಅಭವೃದ್ಧಿ ಮಾಡಲಾಗುವದು. ಇದರಿಂದ 5 ಕೋಟಿ ಆದಿವಾಸಿಗಳಿಗೆ ನೆರವು ಲಭಿಸಲಿದೆ/100 ಪೋಸ್ಟ್ ಪೇಮೆಂಟ್ ಬ್ಯಾಂಕ್:
ದೇಶದ ಈಶಾನ್ಯ ರಾಜ್ಯಗಳಲ್ಲಿ 100 ಪೋಸ್ಟ್ ಪೇಮೆಂಟ್ ಬ್ಯಾಂಕ್ ಸ್ಥಾಪಿಸಲಾಗುವುದು. ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ 2.66 ಲಕ್ಷ ಕೋಟಿ ರು. ನೀಡಲಾಗುವುದು.