ಸಾರಾಂಶ
ಟೆಹ್ರಾನ್: ಆಪರೇಷನ್ ಸಿಂಧು ಮೂಲಕ ಸಂಘರ್ಷಪೀಡಿತ ಇರಾನ್ನಿಂದ ಭಾರತೀಯರನ್ನು ಕರೆತರುತ್ತಿರುವ ಭಾರತ, ನೆರೆಯ ರಾಷ್ಟ್ರಗಳಾದ ನೇಪಾಳ ಹಾಗೂ ಶ್ರೀಲಂಕಾ ನಾಗರಿಕರ ಸ್ಥಳಾಂತರಕ್ಕೂ ನೆರವು ನೀಡುವುದಾಗಿ ಘೋಷಿಸಿದೆ. ಅಲ್ಲದೆ, ಅವರಿಗಾಗಿ ಸಹಾಯವಾಣಿಯನ್ನೂ ಆರಂಭಿಸಿದೆ.
ಈ ಕುರಿತು ಟೆಹ್ರಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ‘ನೇಪಾಳ ಮತ್ತು ಶ್ರೀಲಂಕಾ ಸರ್ಕಾರಗಳ ವಿನಂತಿಯ ಮೇರೆಗೆ ಇರಾನ್ನಲ್ಲಿರುವ ನೇಪಾಳ ಮತ್ತು ಶ್ರೀಲಂಕಾದ ನಾಗರಿಕರ ಸ್ಥಳಾಂತರವನ್ನೂ ಮಾಡಲಿದ್ದೇವೆ. ನೇಪಾಳ ಮತ್ತು ಶ್ರೀಲಂಕಾದ ನಾಗರಿಕರು ತುರ್ತಾಗಿ ಭಾರತೀಯ ರಾಯಭಾರ ಕಚೇರಿಯನ್ನು ಟೆಲಿಗ್ರಾಮ್ ಚಾನೆಲ್ನಲ್ಲಿ ಅಥವಾ +989010144557; +989128109115; +989128109109 ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು’ ಎಂದು ತಿಳಿಸಿದೆ. ಇರಾನ್ ತೊರೆಯಲು ಇಚ್ಛಿಸಿದರೆ ಭಾರತೀಯ ರಾಯಭಾರ ಕಚೇರಿಯನ್ನು ತುರ್ತಾಗಿ ಸಂಪರ್ಕಿಸುವಂತೆ ಶ್ರೀಲಂಕಾ ಸರ್ಕಾರವೂ ತನ್ನ ಪ್ರಜೆಗಳಿಗೆ ಸಲಹೆ ನೀಡಿದೆ.
ಇರಾನ್ನಿಂದ ಮತ್ತೆ 310 ಭಾರತೀಯರ ಆಗಮನ: ಒಟ್ಟು ಸಂಖ್ಯೆ 827ಕ್ಕೇರಿಕೆ
ನವದೆಹಲಿ: ಆಪರೇಷನ್ ಸಿಂಧು ಮೂಲಕ ಯುದ್ಧಪೀಡಿತ ಇರಾನ್ನಿಂದ 310 ಭಾರತೀಯರನ್ನು ಹೊತ್ತ ಮತ್ತೊಂದು ವಿಮಾನ ಶನಿವಾರ ಸಂಜೆ 4:30ಕ್ಕೆ ದೆಹಲಿಗೆ ಬಂದು ತಲುಪಿದೆ. ಈ ಮೂಲಕ ಇರಾನ್ನಿಂದ ಸ್ಥಳಾಂತರಗೊಂಡ ಒಟ್ಟು ಭಾರತೀಯರ ಸಂಖ್ಯೆ 827ಕ್ಕೇರಿದೆ.ಇರಾನ್ನಿಂದ ಭಾರತೀಯರ ಸ್ಥಳಾಂತರ ಪ್ರಕ್ರಿಯೆ ಆರಂಭವಾದ ಬಳಿಕ ಮೊದಲ ಕಂತಿನಲ್ಲಿ 110 ಭಾರತೀಯರನ್ನು ಕರೆತರಲಾಗಿತ್ತು. ಇದೀಗ ಸ್ವದೇಶಕ್ಕೆ ಒಟ್ಟು 827 ಮಂದಿ ಸುರಕ್ಷಿತವಾಗಿ ಬಂದಿಳಿದಂತಾಗಿದೆ. ಆಪರೇಷನ್ ಸಿಂಧು ಮೂಲಕ ಭಾರತೀಯರ ಸ್ಥಳಾಂತರ ಪ್ರಕ್ರಿಯೆ ಮುಂದುವರಿಯುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.