ಸಾರಾಂಶ
ಸೂರ್ಯನ ಅಧ್ಯಯನಕ್ಕಾಗಿ 2023ರ ಸೆ.2ರಂದು ಭಾರತ ಉಡಾವಣೆ ಮಾಡಿದ ಆದಿತ್ಯ ಎಲ್-1 ನೌಕೆ ಯಶಸ್ವಿಯಾಗಿ ಕಕ್ಷೆ ಸೇರಿದಾಗ ಇಡೀ ದೇಶವೇ ಸಂಭ್ರಮಪಡುತ್ತಿದ್ದರೆ, ಆ ಉಡಾವಣೆಯ ರೂವಾರಿಗಳಲ್ಲೊಬ್ಬರಾದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಖ್ಯಸ್ಥ ಎಸ್.ಸೋಮನಾಥ್ಗೆ ಆಘಾತಕ್ಕೆ ಒಳಗಾಗಿದ್ದರು.
ನವದೆಹಲಿ: ಸೂರ್ಯನ ಅಧ್ಯಯನಕ್ಕಾಗಿ 2023ರ ಸೆ.2ರಂದು ಭಾರತ ಉಡಾವಣೆ ಮಾಡಿದ ಆದಿತ್ಯ ಎಲ್-1 ನೌಕೆ ಯಶಸ್ವಿಯಾಗಿ ಕಕ್ಷೆ ಸೇರಿದಾಗ ಇಡೀ ದೇಶವೇ ಸಂಭ್ರಮಪಡುತ್ತಿದ್ದರೆ, ಆ ಉಡಾವಣೆಯ ರೂವಾರಿಗಳಲ್ಲೊಬ್ಬರಾದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಖ್ಯಸ್ಥ ಎಸ್.ಸೋಮನಾಥ್ಗೆ ಆಘಾತಕ್ಕೆ ಒಳಗಾಗಿದ್ದರು.
ಏಕೆಂದರೆ, ‘ನಿಮಗೆ ಕ್ಯಾನ್ಸರ್ ಇದೆ’ ಎಂಬ ವರದಿ ಅವರ ಕೈ ಸೇರಿತ್ತು ಎಂಬ ಮಾಹಿತಿ ಇದೀಗ ಬಹಿರಂಗವಾಗಿದೆ.ಈ ವಿಷಯವನ್ನು ಸಂದರ್ಶನವೊಂದರಲ್ಲಿ ಸ್ವತಃ ಸೋಮನಾಥ್ ಅವರೇ ಹೇಳಿಕೊಂಡಿದ್ದಾರೆ.
ಬಳಿಕ ಆಸ್ಪತ್ರೆಗೆ ದೌಡಾಯಿಸಿದ್ದು, ಹೊಟ್ಟೆಯಲ್ಲಿದ್ದ ಕ್ಯಾನ್ಸರ್ ಕೋಶವನ್ನು ತೆಗೆಸಿದ್ದು, 4 ದಿನ ಆಸ್ಪತ್ರೆಯಲ್ಲಿದ್ದು 5ನೇ ದಿನದಿಂದಲೇ ಇಸ್ರೋ ಕೆಲಸ ಆರಂಭಿಸಿದ್ದು ಸೇರಿ ಎಲ್ಲವನ್ನೂ ಅವರು ಹೇಳಿದ್ದಾರೆ.
ಸೋಮನಾಥ್ಗೆ ಏನಾಯಿತು?
‘ಚಂದ್ರಯಾನ-3 ಉಡಾವಣೆ ಸಂದರ್ಭದಲ್ಲೇ ನನಗೆ ಕೆಲವೊಂದು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಆ ವೇಳೆ ನನಗೇನೂ ಗೊತ್ತಾಗಲಿಲ್ಲ. ಆದಿತ್ಯ ಎಲ್-1 ಉಡಾವಣೆ ದಿನವೇ ಕ್ಯಾನ್ಸರ್ ಇರುವ ವಿಷಯ ತಿಳಿಯಿತು.
ಅದು ನನಗಷ್ಟೇ ಅಲ್ಲ ನನ್ನ ಕುಟುಂಬ ಹಾಗೂ ಸಹೋದ್ಯೋಗಿಗಳಿಗೂ ಆಘಾತಕಾರಿಯಾಗಿತ್ತು’ ಎಂದು ಸೋಮನಾಥ್ ತಿಳಿಸಿದ್ದಾರೆ.
‘2023ರ ಸೆ.2ರಂದು ಆದಿತ್ಯ-1 ಉಡಾವಣೆಯಾದ ವೇಳೆ ನಾನು ಸ್ಕ್ಯಾನಿಂಗ್ಗೆ ಒಳಗಾದೆ. ಹೊಟ್ಟೆಯಲ್ಲಿ ಕ್ಯಾನ್ಸರ್ ಗಡ್ಡೆ ಪತ್ತೆಯಾಯಿತು. ಚೆನ್ನೈಗೆ ಹೋಗಿ ಮತ್ತಷ್ಟು ಸ್ಕ್ಯಾನ್ ಮಾಡಿಸಿದೆ.
ವಂಶವಾಹಿ ರೋಗ ದೃಢವಾಯಿತು. ಬಳಿಕ ವೃತ್ತಿಪರ ಸವಾಲುಗಳ ಜತೆ ಆರೋಗ್ಯ ಸವಾಲನ್ನೂ ಎದುರಿಸುವಂತಾಯಿತು. ಸರ್ಜರಿ ಮಾಡಿಸಿಕೊಂಡು, ಕೀಮೋಥೆರಪಿಗೆ ಒಳಗಾದೆ.
ರೋಗ ವಾಸಿಯಾಗುವ ಬಗ್ಗೆ ಅನಿಶ್ಚಿತತೆ ಇತ್ತು. ನಾಲ್ಕು ದಿನ ಆಸ್ಪತ್ರೆಯಲ್ಲಿದ್ದೆ. ಐದನೇ ದಿನ ಇಸ್ರೋಗೆ ತೆರಳಿಗೆ ಕೆಲಸ ಆರಂಭಿಸಿದೆ. ಈಗ ನಿಯಮಿತ ಆರೋಗ್ಯ ತಪಾಸಣೆಗೆ ಒಳಗಾಗುತ್ತಿದ್ದೇನೆ.
ಕ್ಯಾನ್ಸರ್ನಿಂದ ಸಂಪೂರ್ಣ ಗುಣಮುಖವಾಗಿದ್ದೇನೆ. ಪೂರ್ನ ಪ್ರಮಾಣದಲ್ಲಿ ಕರ್ತವ್ಯ ಪುನಾರಂಭಿಸಿದ್ದೇನೆ’ ಎಂದು ಸೋಮನಾಥ್ ವಿವರಿಸಿದ್ದಾರೆ.