ತಾವು ಪಾಲ್ಗೊಂಡಿದ್ದ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಅಭಿಮಾನಿಗಳು ‘ಹಾಡು ಹಾಡಿ’ ಎಂದು ಕೋರಿದ್ದಕ್ಕೆ ಸಿಟ್ಟಿಗೆದ್ದ ಖ್ಯಾತ ಗಾಯಕ ಕೈಲಾಶ್‌ ಖೇರ್‌ಗೆ, ‘ಕಲಾವಿದರನ್ನು ವಿದೂಷಕರನ್ನಾಗಿ ಮಾಡಬೇಡಿ. ನಾವು ಕಂಡಕಂಡಲ್ಲಿ ಹಾಡಲ್ಲ’ ಎಂದ ಘಟನ ದೆಹಲಿಯಲ್ಲಿ ನಡೆದಿದೆ.

ಕಂಡಲ್ಲಿ ಹಾಡುವುದಕ್ಕೆ ಕಲಾವಿದರು ವಿದೂಷಕರಲ್ಲ ಎಂದು ಚಾಟಿ

ನವದೆಹಲಿ: ತಾವು ಪಾಲ್ಗೊಂಡಿದ್ದ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಅಭಿಮಾನಿಗಳು ‘ಹಾಡು ಹಾಡಿ’ ಎಂದು ಕೋರಿದ್ದಕ್ಕೆ ಸಿಟ್ಟಿಗೆದ್ದ ಖ್ಯಾತ ಗಾಯಕ ಕೈಲಾಶ್‌ ಖೇರ್‌ಗೆ, ‘ಕಲಾವಿದರನ್ನು ವಿದೂಷಕರನ್ನಾಗಿ ಮಾಡಬೇಡಿ. ನಾವು ಕಂಡಕಂಡಲ್ಲಿ ಹಾಡಲ್ಲ’ ಎಂದ ಘಟನ ದೆಹಲಿಯಲ್ಲಿ ನಡೆದಿದೆ.

ಸಮಾರಂಭವು ಸಂಗೀಕ ಕಾರ್ಯಕ್ರಮ ಆಗಿರಲಿಲ್ಲ. ಆದರೂ ಅಭಿಮಾನಿಗಳು ಪ್ರೀತಿಯಿಂದ 2 ಸಾಲು ಹಾಡಿ ಎಂದು ಕೇಳಿದರು. ಇದನ್ನು ತಿರಸ್ಕರಿಸಿದ ಖೇರ್, ‘ಒಬ್ಬ ಗಾಯಕನಿಗೆ 2 ಸಾಲು ಹಾಡು ಎಂದು ಎಲ್ಲೆಲ್ಲೋ ಕೇಳಬಾರದು. ಸಂಗೀತವನ್ನು ಈ ರೀತಿ ಕಾಣಬಾರದು. ಇದು ಸಚಿನ್‌ ತೆಂಡುಲ್ಕರ್‌ ಎಲ್ಲೋ ನಿಮಗೆ ಸಿಕ್ಕಾಗ ಸಿಕ್ಸರ್ ಹೊಡೆಯಲು ಕೇಳುವಂತಿದೆ ಅಥವಾ ಯೋಧನೊಬ್ಬ ಸಿಕ್ಕಾಗ ಗುಂಡು ಹಾರಿಸಲು ಕೇಳುವುದಕ್ಕೆ ಸಮಾನ’ ಎಂದರು. ಇದರ ವಿಡಿಯೋ ಜಾಲತಾಣದಲ್ಲಿ ವೈರಲ್‌ ಆಗಿದೆ.

==

ಬಾಂಗ್ಲಾ: ಮರಕ್ಕೆ ನೇತಾಡುವ ಸ್ಥಿತಿಯಲ್ಲಿ ಅರ್ಚಕನ ಶವ ಪತ್ತೆ

ಢಾಕಾ: ಅರ್ಚಕನೊಬ್ಬನನ್ನು ಇಬ್ಬರು ಅಪರಿಚಿತ ವ್ಯಕ್ತಿಗಳು ಕರೆದೊಯ್ದ 3 ದಿನಗಳ ಬಳಿಕ ಆತನ ಶವ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬಾಂಗ್ಲಾದೇಶದ ಚಟ್ಟೋಗ್ರಾಮ ಜಿಲ್ಲೆಯಲ್ಲಿ ನಡೆದಿದೆ. ದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಹೆಚ್ಚುತ್ತಿರುವ ಮಧ್ಯೆ ಈ ಘಟನೆ ಆತಂಕ ಮೂಡಿಸಿದೆ.ದೋಹಝರಿ ನಿವಾಸಿ ನಯನ್‌ ಸಾಧು (40) ಮೃತ ವ್ಯಕ್ತಿ. ಏ.19ರ ಸಂಜೆ ಇಬ್ಬರು ಅಪರಿಚಿತರು ನಯನ್‌ರನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಿದ್ದರು. 3 ದಿನಗಳ ನಂತರ, ಗ್ರಾಮದ ಹೊರವಲಯದಲ್ಲಿರುವ ಗುಡ್ಡಗಾಡು ಪ್ರದೇಶದಲ್ಲಿ ಮರಕ್ಕೆ ನೇತಾಡುತ್ತಿರುವ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಖಚಿತವಾಗಿಲ್ಲ.

==

ದೆಹಲಿಯಲ್ಲಿ ವಿಮಾನ ಟೇಕಾಫ್‌ ವೇಳೆ ಬೆಂಕಿ: 6 ಮಂದಿಗೆ ಗಾಯ

ನವದೆಹಲಿ: ದೆಹಲಿಯಿಂದ ಸ್ವಿಜರ್ಲೆಂಡ್‌ನ ಜೂರಿಚ್‌ಗೆ ಟೇಕಾಫ್‌ ಅಗುತ್ತಿದ್ದ ಸ್ವಿಸ್‌ ವಿಮಾನದಲ್ಲಿ ಎಂಜಿನ್‌ ಸಮಸ್ಯೆಯಿಂದಾಗಿ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ 6 ಜನ ಗಾಯಗೊಂಡಿದ್ದಾರೆ.ಏರ್‌ಬಸ್‌ ಎ330ನ ಎಲ್‌ಎಕ್ಸ್‌147 ವಿಮಾನವು ಬೆಳಗಿನ ಜಾವ 1.08ರ ಸುಮಾರಿಗೆ ಟೇಕಾಫ್‌ ಆಗುವ ವೇಳೆ ಒಂದು ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮುಂಜಾಗ್ರತಾ ಕ್ರಮವಾಗಿ ವಿಮಾನ ಸಿಬ್ಬಂದಿ ಟೇಕಾಫ್‌ಗೆ ನಿರಾಕರಿಸಿದರು. ಈ ವೇಳೆ ವಿಮಾನದಲ್ಲಿ 4 ನವಜಾತ ಶಿಶುಗಳು ಸೇರಿ 228 ಪ್ರಯಾಣಿಕರಿದ್ದರು. ಆದರೆ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕೂಡಲೇ ತುರ್ತು ಮೆಟ್ಟಿಲುಗಳನ್ನು ಬಳಸಿ ಎಲ್ಲಾ ಪ್ರಯಾಣಿಕರನ್ನು ರನ್‌ವೇಯಲ್ಲಿ ಸ್ಥಳಾಂತರಿಸಲಾಯಿತು. ಸದ್ಯ ಗಾಯಗೊಂಡಿರುವ ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ.

==

ಶಿವಾಜಿ ಮಹಾರಾಜರಿಗೆ ಅವಮಾನ: ಬಾಬಾ ಕ್ಷಮೆ

ನಾಗಪುರ: ಶಿವಾಜಿ ಮಹಾರಾಜರು ತಮ್ಮ ಜೀವನದ ಕೊನೆಯಲ್ಲಿ ಅನೇಕ ಯುದ್ಧಗಳಿಂದ ದಣಿದಿದ್ದರು. ನಂತರ, ಮರಾಠಾ ರಾಜ್ಯದ ಆಡಳಿತವನ್ನು ಸಂತ ರಾಮದಾಸ ಸ್ವಾಮಿಗಳಿಗೆ ವಹಿಸಲು ಮುಂದಾಗಿದ್ದರು ಎಂದು ಹೇಳಿ ಮರಾಠಿಗರ ಕೆಂಗಣ್ಣಿಗೆ ಕಾರಣವಾಗಿದ್ದ ಬಾಗೇಶ್ವರ ಧಾಮದ ಧರ್ಮಗುರು ಧೀರೇಂದ್ರ ಶಾಸ್ತ್ರಿ ಕ್ಷಮೆ ಕೇಳಿದ್ದಾರೆ. ‘ನನ್ನ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ. ಶಿವಾಜಿ ಮಹಾರಾಜರ ಗುಣಗಳನ್ನು ನಾನು ಹೊಗಳಿದ್ದೆ. ಶಿವಾಜಿಗಾಗಿ ನಾನು ಸಾಯಲೂ ಸಿದ್ಧ’ ಎಂದು ಸ್ಪಷ್ಟಪಡಿಸಿದ್ದಾರೆ.