ನ್ಯಾಯ ದಾನ ವ್ಯವಸ್ಥೆಯಲ್ಲಿ ದೇಶಕ್ಕೇ ಕರ್ನಾಟಕ ನಂ.1!

| N/A | Published : Aug 10 2025, 01:30 AM IST / Updated: Aug 10 2025, 04:48 AM IST

ಸಾರಾಂಶ

ನ್ಯಾಯಾಂಗ ಮತ್ತು ಪೊಲೀಸ್‌ ವ್ಯವಸ್ಥೆಯಲ್ಲಿ ಇರುವ ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ ಮೀಸಲನ್ನು ಶೇ.100ರಷ್ಟು ಭರ್ತಿ ಮಾಡುವ ಮೂಲಕ ಇಂಥ ಸಾಧನೆ ಮಾಡಿದ ದೇಶದ ಏಕೈಕ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಿದೆ.

 ನವದೆಹಲಿ: ನ್ಯಾಯಾಂಗ ಮತ್ತು ಪೊಲೀಸ್‌ ವ್ಯವಸ್ಥೆಯಲ್ಲಿ ಇರುವ ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ ಮೀಸಲನ್ನು ಶೇ.100ರಷ್ಟು ಭರ್ತಿ ಮಾಡುವ ಮೂಲಕ ಇಂಥ ಸಾಧನೆ ಮಾಡಿದ ದೇಶದ ಏಕೈಕ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಿದೆ. ಜೊತೆಗೆ ಪೊಲೀಸ್ ವ್ಯವಸ್ಥೆ, ಕಾರಾಗೃಹ, ನ್ಯಾಯಾಂಗ ಮತ್ತು ಕಾನೂನು ನೆರವಿನ ಕಾರ್ಯಕ್ಷಮತೆ ಒಳಗೊಂಡ ನ್ಯಾಯದಾನ ವ್ಯವಸ್ಥೆಯಲ್ಲೂ ಕರ್ನಾಟಕ ದೇಶಕ್ಕೆ ಮೊದಲ ಸ್ಥಾನ ಪಡೆದಿದೆ ಎಂದು ವರದಿಯೊಂದು ಹೇಳಿದೆ.

‘ಭಾರತ ನ್ಯಾಯದಾನ ವರದಿ 2025’ದಲ್ಲಿನ ಅಂಕಿ ಅಂಶಗಳು ದೇಶದಲ್ಲಿನ ನ್ಯಾಯದಾನ ವ್ಯವಸ್ಥೆಯ ಕುರಿತು ಬೆಳಕು ಚೆಲ್ಲಿದ್ದು, ಹಲವು ವಲಯಗಳಲ್ಲಿ ಕರ್ನಾಟಕ ಗಮನಾರ್ಹ ಸಾಧನೆ ಮಾಡಿದೆ. ಟಾಟಾ ಟ್ರಸ್ಟ್‌ ಸಹಯೋಗದಲ್ಲಿ ಈ ವರದಿ ಸಿದ್ದಪಡಿಸಲಾಗಿದೆ.

ಏಕೈಕ ರಾಜ್ಯ:

ವರದಿ ಅನ್ವಯ ನ್ಯಾಯಾಂಗ ಮತ್ತು ಪೊಲೀಸ್‌ ವ್ಯವಸ್ಥೆಯಲ್ಲಿ ಎಸ್‌ಸಿ, ಎಸ್ಟಿ ಮತ್ತು ಒಬಿಸಿ ಮೀಸಲನ್ನು ಶೇ.100ರಷ್ಟು ಜಾರಿ ಮಾಡಿದ ಏಕೈಕ ರಾಜ್ಯವೆಂಬ ಹಿರಿಮೆಗೆ ಕರ್ನಾಟಕ ಪಾತ್ರವಾಗಿದೆ. ಜೊತೆಗೆ 2017ರಿಂದ, ಕರ್ನಾಟಕ ಸೇರಿದಂತೆ ದೇಶದ 6 ಹೈಕೋರ್ಟ್‌ಗಳು ವಾರ್ಷಿಕ ಪ್ರಕರಣಗಳ ಇತ್ಯರ್ಥದಲ್ಲಿ ಶೇ.100ಕ್ಕಿಂತ ಹೆಚ್ಚಿನ ಸಾಧನೆ ಮಾಡಿವೆ. ಜೊತೆಗೆ ನ್ಯಾಯ ವಿತರಣೆಯ ಸ್ತಂಭಗಳಾದ ಪೊಲೀಸಿಂಗ್‌ನಲ್ಲಿ ಕರ್ನಾಟಕ 3, ಕಾರಾಗೃಹ ನಿರ್ವಹಣೆಯಲ್ಲಿ 2, ನ್ಯಾಯಾಂಗದಲ್ಲಿ 4 ಮತ್ತು ಕಾನೂನು ನೆರವಿನಲ್ಲಿ 1ನೇ ರ್‍ಯಾಂಕ್‌ ಪಡೆದಿದೆ. ಒಟ್ಟಾರೆ 10ಕ್ಕೆ 6.78 ಅಂಕ ಪಡೆಯುವ ಮೂಲಕ ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ. ಉಳಿದಂತೆ ಪಟ್ಟಿಯಲ್ಲಿ ದಕ್ಷಿಣದ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ಕೇರಳ, ತಮಿಳುನಾಡು ಸ್ಥಾನ ಪಡೆದಿವೆ.

ಭಾರತೀಯ ಪೊಲೀಸ್ ಪಡೆಯಲ್ಲಿ ಶೇ.33ರಷ್ಟು ಮಹಿಳಾ ಪ್ರಾತಿನಿಧ್ಯವನ್ನು ಶಿಫಾರಸು ಮಾಡಲಾಗಿದೆ. ಪ್ರಸ್ತುತದ ಬೆಳವಣಿಗೆ ದರವನ್ನು ಗಮನಿಸಿದರೆ, ಈ ಹಂತ ತಲುಪಲು ಕರ್ನಾಟಕಕ್ಕೆ 115.7 ವರ್ಷಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

ನ್ಯಾಯದಾನ ವರದಿ ಎಂದರೇನು?:

ನ್ಯಾಯಾಂಗದ 4 ಆಧಾರ ಸ್ತಂಭಗಳಾದ ಪೊಲೀಸ್ ವ್ಯವಸ್ಥೆ, ಜೈಲು ನಿರ್ವಹಣೆ, ನ್ಯಾಯದಾನ ಮತ್ತು ಕಾನೂನು ನೆರವಿನಂತಹ ಅಂಶಗಳನ್ನು ಪರಿಗಣಿಸಿ, ರಾಜ್ಯಗಳಲ್ಲಿ ಸಮೀಕ್ಷೆ ನಡೆಸಲಾಗುತ್ತದೆ. ಇದರ ಅಂಕಿಅಂಶಗಳಿಂದ, ದೇಶದ ಎಲ್ಲಾ ರಾಜ್ಯಗಳಲ್ಲಿ ನ್ಯಾಯ ವಿತರಣೆಯನ್ನು ನಿರ್ಣಯಿಸಲು ಮತ್ತು ಸುಧಾರಿಸಲು ಅನುಕೂಲವಾಗುತ್ತದೆ.

Read more Articles on