ಕೇರಳ ಕಡುಬಡತನ ಮುಕ್ತ ರಾಜ್ಯ - ಇನ್ನೆಂದೂ ಕಡುಬಡತನ ಬರದಂತೆ ಮಾಡ್ತೇವೆ: ಸಿಎಂ

| N/A | Published : Nov 02 2025, 06:16 AM IST

pinarayi vijayan
ಕೇರಳ ಕಡುಬಡತನ ಮುಕ್ತ ರಾಜ್ಯ - ಇನ್ನೆಂದೂ ಕಡುಬಡತನ ಬರದಂತೆ ಮಾಡ್ತೇವೆ: ಸಿಎಂ
Share this Article
  • FB
  • TW
  • Linkdin
  • Email

ಸಾರಾಂಶ

‘ಕೇರಳವು ಕಡುಬಡತನ ಮುಕ್ತವಾಗಿದ್ದು, ಈ ಸಾಧನೆ ಮಾಡಿದ ಮೊದಲ ರಾಜ್ಯವಾಗಿದೆ’ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಘೋಷಿಸಿದ್ದಾರೆ. ಕೇರಳ ಸ್ಥಾಪನಾ ದಿನವಾದ ಶನಿವಾರ ನಡೆದ ವಿಶೇಷ ಅಧಿವೇಶನದಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ. 

 ತಿರುವನಂತಪುರಂ: ‘ಕೇರಳವು ಕಡುಬಡತನ ಮುಕ್ತವಾಗಿದ್ದು, ಈ ಸಾಧನೆ ಮಾಡಿದ ಮೊದಲ ರಾಜ್ಯವಾಗಿದೆ’ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಘೋಷಿಸಿದ್ದಾರೆ. ಕೇರಳ ಸ್ಥಾಪನಾ ದಿನವಾದ ಶನಿವಾರ ನಡೆದ ವಿಶೇಷ ಅಧಿವೇಶನದಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ. ಈ ಮೂಲಕ ಸಂಪೂರ್ಣ ಸಾಕ್ಷರ ರಾಜ್ಯ ಎಂಬ ಹೆಗ್ಗಳಿಕೆ ಬಳಿಕ ಕೇರಳದ ಕಿರೀಟಕ್ಕೆ ಇನ್ನೊಂದು ಗರಿ ಸಿಕ್ಕಂತಾಗಿದೆ.

‘2021ರಲ್ಲೇ ರಾಜ್ಯವನ್ನು ಕಡುಬಡತನದಿಂದ ಮುಕ್ತ ಮಾಡುವ ಗುರಿಯನ್ನು ನಮ್ಮ ಸರ್ಕಾರ ಹಾಕಿಕೊಂಡಿತ್ತು. ಸರ್ಕಾರದ ವಿವಿಧ ಇಲಾಖೆಗಳ ಸಹಕಾರ ಮತ್ತು ಜನರ ಪಾಲ್ಗೊಳ್ಳುವಿಕೆಯಿಂದ ಇದು ಸಾಧ್ಯವಾಯಿತು. ವಿಶ್ವಸಂಸ್ಥೆ ರೂಪಿಸಿದ ಸುಸ್ಥಿರ ಅಭಿವೃದ್ಧಿ ಸೂಚ್ಯಂಕದಲ್ಲಿ ರಾಜ್ಯ ಪ್ರಗತಿ ಸಾಧಿಸಿದೆ. ಅನ್ಯ ರಾಜ್ಯಗಳ ಪಾಲಿಗಿದು ಮಾದರಿಯಾಗಲಿದೆ. ಇನ್ನೆಂದೂ ಕಡುಬಡತನ ರಾಜ್ಯಕ್ಕೆ ಕಾಲಿಡದಂತೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಸಿಎಂ ಹೇಳಿದ್ದಾರೆ.

ಇದು ಸುಳ್ಳು-ವಿಪಕ್ಷ:

ರಾಜ್ಯ ಕಡುಬಡತನಮುಕ್ತವಾಗಿರುವ ಬಗ್ಗೆ ಸಿಎಂ ನೀಡಿರುವ ಮಾಹಿತಿ ‘ಶುದ್ಧ ಸುಳ್ಳು’ ಎಂದಿರುವ ವಿಪಕ್ಷಗಳು, ‘ನಮಗೆ ಈ ಸುಳ್ಳಿನೊಂದಿಗೆ ಕೈಜೋಡಿಸಲು ಸಾಧ್ಯವಿಲ್ಲ’ ಎಂದು ಸಭಾತ್ಯಾಗ ಮಾಡಿವೆ.

ಕೈಗೊಂಡ ಕ್ರಮಗಳೇನು?:

ಮೊದಲಿಗೆ ಫಲಾನುಭವಿಗಳನ್ನು ಪತ್ತೆಮಾಡಲಾಯಿತು. ಬಳಿಕ ಕೆಲ ಗ್ರಾಮ ಪಂಚಾಯಿತಿಗಳಲ್ಲಿ ಯೋಜನೆಯನ್ನು ಅನುಷ್ಠಾನಕ್ಕೆ ತಂದು, ನಂತರ ರಾಜ್ಯಾದ್ಯಂತ ಜಾರಿಗೆ ತರಲಾಯಿತು.

ಇದರಡಿ, 62 ಕುಟುಂಬಗಳಿಗೆ ಕಲ್ಯಾಣ ಪಿಂಚಣಿ, ನಿರಾಶ್ರಿತರಿಗೆ 4.70 ಲಕ್ಷ ಮನೆಗಳ ನಿರ್ಮಾಣ, ಸುಮಾರು 6000 ಸಾರ್ವಜನಿಕ ಆರೋಗ್ಯ ಕೇಂದ್ರಗಳ ಸ್ಥಾಪನೆ, 43 ಪರಿವಾರಗಳಿಗೆ ಉಚಿತ ಆರೋಗ್ಯ ವಿಮೆ, 4 ಲಕ್ಷ ಕುಟುಂಬಗಳಿಗೆ ಭೂಮಿಯನ್ನು ನೀಡುವ ಮೂಲಕ, ಅವರ ಆರ್ಥಿಕ ಸ್ಥಿತಿ ಸುಧಾರಿಸಿ, ರಾಜ್ಯವನ್ನು ಕಡುಬಡತನಮುಕ್ತ ಮಾಡಲಾಯಿತು. ಇದಕ್ಕಾಗಿ 1,000 ಕೋಟಿ ರು.ಗಿಂತಲೂ ಹೆಚ್ಚು ಖರ್ಚು ಮಾಡಲಾಗಿದೆ ಎಂದು ಸಿಎಂ ಹೇಳಿದ್ದಾರೆ.

ಕಡುಬಡತನ ಎಂದರೇನು?

ದಿನಕ್ಕೆ 190 ರು.ಗಿಂತ ಕಡಿಮೆ ಆದಾಯದಲ್ಲಿ ಬದುಕಿದರೆ ಅದಕ್ಕೆ ಕಡುಬಡತನ ಎನ್ನುತ್ತಾರೆ.

Read more Articles on