ನವದೆಹಲಿ: ಶುಕ್ರವಾರ ರಾತ್ರಿ ಜಮ್ಮು-ಕಾಶ್ಮೀರದ ಕುಲ್ಗಾಂನಲ್ಲಿ ಇಬ್ಬರು ಕಾರ್ಮಿಕರನ್ನು ಹತ್ಯೆ ಮಾಡುವ ಮುನ್ನ ಉಗ್ರರು, ಅವರ ಜಾತಿ ಮತ್ತು ಧರ್ಮವನ್ನು ಕೇಳಿದ್ದರು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಇದು ಕಳೆದ ವರ್ಷ ಪಹಲ್ಗಾಂನಲ್ಲಿ ಧರ್ಮವನ್ನು ಕೇಳಿ 25 ಪ್ರವಾಸಿಗರನ್ನು ಹತ್ಯೆಗೈದ ನೀಚ ಉಗ್ರದಾಳಿಯನ್ನು ನೆನಪಿಸಿದೆ.
ಕುಲ್ಗಾಂನ ಇಟ್ಟಿಗೆ ಭಟ್ಟಿ ಮೇಲೆ ಶುಕ್ರವಾರ ರಾತ್ರಿ ನಡೆದ ಉಗ್ರದಾಳಿ
ಕುಲ್ಗಾಂನ ಇಟ್ಟಿಗೆ ಭಟ್ಟಿ ಮೇಲೆ ಶುಕ್ರವಾರ ರಾತ್ರಿ ನಡೆದ ಉಗ್ರದಾಳಿಯಲ್ಲಿ ಛತ್ತೀಸ್ಗಢದ ದೀಪಕ್ ರಾತ್ರೆ ಮತ್ತು ಭೂಪೇಂದ್ರ ಭೈನಾ ಎಂಬ ಇಬ್ಬರು ವಲಸೆ ಕಾರ್ಮಿಕರು ಮೃತಪಟ್ಟಿದ್ದರು.
ಈ ಪೈಕಿ ಮೃತ ದೀಪಕ್ರ ಚಿಕ್ಕಪ್ಪ ಹಲ್ಧರ್ ರಾತ್ರೆ ಸುದ್ದಿಗಾರರ ಜತೆ ಮಾತಾಡಿದ್ದು, ‘ನಾವು ಕೇಳಿದ ಪ್ರಕಾರ, ಭಯೋತ್ಪಾದಕರು ಮೊದಲು ಅವನ ಜಾತಿ ಮತ್ತು ಸಮುದಾಯದ ಬಗ್ಗೆ ಕೇಳಿದ್ದಾರೆ. ನಂತರ ಗುಂಡು ಹಾರಿಸಿದ್ದಾರೆ’ ಎಂದು ತಿಳಿಸಿದ್ದಾರೆ. ಆದರೆ ಈ ಬಗ್ಗೆ ಪೊಲೀಸರಿಂದ ಅಧಿಕೃತ ಸ್ಪಷ್ಟನೆ ದೊರಕಿಲ್ಲ.
ಶೋಧ ತೀವ್ರ:
ಕುಲ್ಗಾಂ ಜಿಲ್ಲೆಯಲ್ಲಿ ಇಬ್ಬರು ವಲಸೆ ಕಾರ್ಮಿಕರನ್ನು ಕೊಂದ ದಾಳಿಕೋರರನ್ನು ಪತ್ತೆಹಚ್ಚಲು ಭದ್ರತಾ ಪಡೆಗಳು ಶನಿವಾರ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ.
ಮೃತರ ಅಂತ್ಯಕ್ರಿಯೆಯನ್ನು ಜಿಲ್ಲೆಯ ಪಾಲ್ಪೋರಾ ಪ್ರದೇಶದಲ್ಲಿ ಕುಟುಂಬ ಸದಸ್ಯರು ಮತ್ತು ಪೊಲೀಸ್ ಮತ್ತು ನಾಗರಿಕ ಆಡಳಿತದ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ನಡೆಸಲಾಗಿದೆ.
