ಉತ್ತರ ಪ್ರದೇಶದ ನೋಯ್ಡಾದಲ್ಲಿ ವೇತನ ಹೆಚ್ಚಳ ಮತ್ತು ಇತರ ಬೇಡಿಕೆಗಳಿಗೆ ಆಗ್ರಹಿಸಿ ಕೈಗಾರಿಕಾ ಕಾರ್ಮಿಕರು ಆರಂಭಿಸಿರುವ ಪ್ರತಿಭಟನೆ ಸೋಮವಾರ ಹಿಂಸಾಚಾರಕ್ಕೆ ತಿರುಗಿದೆ. ಕಟ್ಟಡ ಮತ್ತು ಪೊಲೀಸ್ ವಾಹನಗಳ ಮೇಲೆ ಕಲ್ಲುತೂರಾಟ, ಬೆಂಕಿಯಂತಹ ಘಟನೆಗಳು ವರದಿಯಾಗಿವೆ.
ನೊಯ್ಡಾ: ಉತ್ತರ ಪ್ರದೇಶದ ನೋಯ್ಡಾದಲ್ಲಿ ವೇತನ ಹೆಚ್ಚಳ ಮತ್ತು ಇತರ ಬೇಡಿಕೆಗಳಿಗೆ ಆಗ್ರಹಿಸಿ ಕೈಗಾರಿಕಾ ಕಾರ್ಮಿಕರು ಆರಂಭಿಸಿರುವ ಪ್ರತಿಭಟನೆ ಸೋಮವಾರ ಹಿಂಸಾಚಾರಕ್ಕೆ ತಿರುಗಿದೆ. ಕಟ್ಟಡ ಮತ್ತು ಪೊಲೀಸ್ ವಾಹನಗಳ ಮೇಲೆ ಕಲ್ಲುತೂರಾಟ, ಬೆಂಕಿಯಂತಹ ಘಟನೆಗಳು ವರದಿಯಾಗಿವೆ. ಪ್ರತಿಭಟನೆಯಿಂದಾಗಿ ಸೋಮವಾರ ಬೆಳಿಗ್ಗೆ ನೊಯ್ಡಾದ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ.
ಪ್ರತಿಭಟನೆಗೆ ಕಾರಣ:
ನೊಯ್ಡಾದ ಹಂತ-2 ಪ್ರಮುಖ ಕೈಗಾರಿಕಾ ಪ್ರದೇಶ. ಇಲ್ಲಿನ ಬಹುತೇಕ ಕಾರ್ಮಿಕರಿಗೆ 15,000 ರು. ಸಂಬಳವಿದೆ. 8 ಗಂಟೆ ಬದಲಿಗೆ 12 ಗಂಟೆ ದುಡಿಸಿಕೊಳ್ಳಲಾಗುತ್ತಿದೆ ಎಂಬುದು ಆರೋಪ. ಕನಿಷ್ಠ ವೇತನವನ್ನು 20,000 ರು.ಗೆ ಹೆಚ್ಚಿಸಬೇಕು ಮತ್ತು ಉತ್ತಮ ಕೆಲಸದ ವಾತಾವರಣವನ್ನು ನಿರ್ಮಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಆರಂಭಿಸಿದ್ದಾರೆ. ಇತ್ತೀಚೆಗೆ ಪಕ್ಕದ ಹರ್ಯಾಣ ಸರ್ಕಾರ ವೇತನದಲ್ಲಿ ಶೇ.35 ಹೆಚ್ಚಳ ಮಾಡಿದೆ. ಇದು ಉತ್ತರ ಪ್ರದೇಶ ಕಾರ್ಮಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಹಿಂಸಾಚಾರ:
ಉದ್ರಿಕ್ತ ಪ್ರತಿಭಟನಾಕಾರರು ಕಾರುಗಳಿಗೆ ಬೆಂಕಿ ಹಚ್ಚುವುದು, ಪೊಲೀಸ್ ವಾಹನಗಳು ಮತ್ತು ಕಟ್ಟಡಗಳ ಮೇಲೆ ಕಲ್ಲುತೂರಾಟದಂತಹ ಕೃತ್ಯಗಳನ್ನು ನಡೆಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
ಸಿಎಂ ಯೋಗಿ ಭರವಸೆ:
‘ಕಾರ್ಮಿಕರಿಗೆ ಯೋಗ್ಯ ಸಂಬಳ, ಸುರಕ್ಷಿತ ಮತ್ತು ಉತ್ತಮ ಔದ್ಯೋಗಿಕ ವಾತಾವರಣವನ್ನು ಕಲ್ಪಿಸಬೇಕು. ಕೈಗಾರಿಕೆಗಳು ಕಾರ್ಮಿಕ ಕಾನೂನುಗಳನ್ನು ಪಾಲಿಸಬೇಕು’ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶಿಸಿದ್ದಾರೆ. ಕಾರ್ಮಿಕರನ್ನು ಪ್ರಚೋದಿಸಲು ಪ್ರಯತ್ನಿಸುತ್ತಿರುವ ಸಮಾಜ ವಿರೋಧಿ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.