ಸಾರಾಂಶ
ಬೆಂಗಳೂರು : ದುಷ್ಕರ್ಮಿಗಳು ಮಹಿಳೆಯನ್ನು ಕೊಲೆಗೈದು ಬಳಿಕ ಮೃತದೇಹವನ್ನು ಮೂಟೆ ಕಟ್ಟಿ ರಸ್ತೆ ಬದಿಯ ಬಿಬಿಎಂಪಿ ಕಸದ ಲಾರಿಗೆ ಎಸೆದು ಪರಾರಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ.
ಚನ್ನಮ್ಮನಕೆರೆ ಅಚ್ಚುಕಟ್ಟು(ಸಿ.ಕೆ.ಅಚ್ಚುಕಟ್ಟು) ಪೊಲೀಸ್ ಠಾಣೆ ವ್ಯಾಪ್ತಿಯ ಸ್ಕೇಟಿಂಗ್ ಮೈದಾನದ ಬಳಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಮೃತ ಮಹಿಳೆಯನ್ನು ಹುಳಿಮಾವು ನಿವಾಸಿ ಪುಷ್ಪಾ ಅಲಿಯಾಸ್ ಆಶಾ (34) ಎಂದು ಗುರುತಿಸಲಾಗಿದೆ. ಮೃತದೇಹದ ಮೇಲೆ ಹಲ್ಲೆಯ ಗುರುತುಗಳು ಪತ್ತೆಯಾಗಿದೆ.
ಕೊಲೆಯಾದ ಪುಷ್ಪಾ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರು. ವ್ಯಕ್ತಿಯೊಬ್ಬನೊಂದಿಗೆ ಆಕೆ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ರಾತ್ರಿ ಆತನೇ ಪುಷ್ಪಾಳನ್ನು ಕೊಲೆ ಮಾಡಿ ಮೃತದೇಹವನ್ನು ಮೂಟೆ ಕಟ್ಟಿ ಬಿಬಿಎಂಪಿ ಕಸದ ಲಾರಿಗೆ ಎಸೆದಿರುವ ಶಂಕೆ ವ್ಯಕ್ತವಾಗಿದೆ.
ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದುಷ್ಕರ್ಮಿಗಳ ಪತ್ತೆಗೆ ಪೊಲೀಸರ ಎರಡು ವಿಶೇಷ ತಂಡ ರಚಿಸಲಾಗಿದೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?:
ಭಾನುವಾರ ಮುಂಜಾನೆ ಸುಮಾರು 1.40ಕ್ಕೆ ವ್ಯಕ್ತಿಯೊಬ್ಬರು ಕಸ ಎಸೆಯಲು ಸ್ಕೇಟಿಂಗ್ ಗ್ರೌಂಡ್ ಬಳಿ ಬಂದಿದ್ದಾರೆ. ಈ ವೇಳೆ ಕಸದ ಗುಡ್ಡೆ ಪಕ್ಕ ನಿಲುಗಡೆ ಮಾಡಿದ್ದ ಬಿಬಿಎಂಪಿ ಕಸದ ಲಾರಿಯಲ್ಲಿದ್ದ ಚೀಲವೊಂದರಲ್ಲಿ ತಲೆ ಕೂದಲು ಕಾಣಿಸಿದೆ. ಆ ವ್ಯಕ್ತಿ ಚೀಲ ಬಿಚ್ಚಿ ನೋಡಿದಾಗ ಮಹಿಳೆಯ ಮೃತದೇಹ ಪತ್ತೆಯಾಗಿದೆ. ನಂತರ ಆತ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಪರಿಶೀಲಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಸಿಸಿಟಿವಿಯಲ್ಲಿ ಹಂತಕನ ಸುಳಿವು!:
ಈ ಸಂಬಂಧ ತನಿಖೆ ಆರಂಭಿಸಿರುವ ಪೊಲೀಸರು, ಘಟನಾ ಸ್ಥಳದ ಸುತ್ತಮುತ್ತಲ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದ್ದಾರೆ. ಈ ವೇಳೆ ವ್ಯಕ್ತಿಯೊಬ್ಬ ದ್ವಿಚಕ್ರ ವಾಹನದಲ್ಲಿ ತಂದಿದ್ದ ಮೃತದೇಹವಿದ್ದ ಮೂಟೆಯನ್ನು ನಿಂತಿದ್ದ ಬಿಬಿಎಂಪಿ ಕಸದ ಲಾರಿಗೆ ಎಸೆದು ಪರಾರಿಯಾಗಿದ್ದಾನೆ. ಈ ಸುಳಿವಿನ ಆಧಾರದ ಮೇಲೆ ಪೊಲೀಸರು ಆತನ ಪತ್ತೆಗೆ ಹುಡುಕಾಟ ತೀವ್ರಗೊಳಿಸಿದ್ದಾರೆ.
ಒಳ ಉಡುಪುಗಳು ಇಲ್ಲ?:
ದುಷ್ಕರ್ಮಿಗಳು ಬೇರೆಡೆ ಮಹಿಳೆಯನ್ನು ಕೊಲೆಗೈದು ಬಳಿಕ ಮೃತದೇಹವನ್ನು ಮೂಟೆಕಟ್ಟಿ ಕಸದ ಲಾರಿಗೆ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಮೃತ ಮಹಿಳೆ ಟಿ ಶರ್ಟ್ ಮತ್ತು ಪ್ಯಾಂಟ್ ಧರಿಸಿರುವುದು ಕಂಡು ಬಂದಿದೆ. ಆದರೆ, ಮಹಿಳೆ ದೇಹದ ಮೇಲೆ ಒಳ ಉಡುಪುಗಳು ಇರಲಿಲ್ಲ ಎನ್ನಲಾಗಿದೆ.
ತಡರಾತ್ರಿ ಕಸ ಎಸೆಯಲು ಹೋದ ವ್ಯಕ್ತಿಗೆ ಲಾರಿಯಲ್ಲಿ ಅನುಮಾನಾಸ್ಪದ ಚೀಲ ಪತ್ತೆ
ತಕ್ಷಣ ಪೊಲೀಸರಿಗೆ ಮಾಹಿತಿ. ತನಿಖೆ ವೇಳೆ ಚೀಲದಲ್ಲಿ ಮೃತ ಮಹಿಳೆಯ ಶವ ಪತ್ತೆ
ಸಿಸಿಟೀವಿ ಪರಿಶೀಲನೆ ವೇಳೆ ಬೈಕ್ನಲ್ಲಿ ಬಂದ ವ್ಯಕ್ತಿಯಿಂದ ಶವ ಇಟ್ಟ ಬಗ್ಗೆ ಮಾಹಿತಿ
ಸಿಸಿಟೀವಿ ಮಾಹಿತಿ ಅಧರಿಸಿ ಪೊಲೀಸರಿಂದ ಆರೋಪಿ ಪತ್ತೆಗಾಗಿ ಭಾರೀ ಶೋಧ