ಮೋದಿ ಶ್ರೀಮಂತ ವ್ಯಕ್ತಿಗಳ ದಾಳ: ರಾಹುಲ್‌ ಕಿಡಿ

| Published : Apr 17 2024, 01:15 AM IST

ಸಾರಾಂಶ

ಕಲ್ಲಿಕೋಟೆ: ಪ್ರಧಾನಿ ನರೇಂದ್ರ ಮೋದಿ, ಕೆಲವು ಶ್ರೀಮಂತ ವ್ಯಕ್ತಿಗಳ ದಾಳ ಎಂದು ಕಾಂಗ್ರೆಸ್‌ ನಾಯಕ ಹಾಗೂ ವಯನಾಡು ಕಾಂಗ್ರೆಸ್‌ ಅಭ್ಯರ್ಥಿ ರಾಹುಲ್‌ ಗಾಂಧಿ ದೂರಿದರು.

ಕಲ್ಲಿಕೋಟೆ: ಪ್ರಧಾನಿ ನರೇಂದ್ರ ಮೋದಿ, ಕೆಲವು ಶ್ರೀಮಂತ ವ್ಯಕ್ತಿಗಳ ದಾಳ ಎಂದು ಕಾಂಗ್ರೆಸ್‌ ನಾಯಕ ಹಾಗೂ ವಯನಾಡು ಕಾಂಗ್ರೆಸ್‌ ಅಭ್ಯರ್ಥಿ ರಾಹುಲ್‌ ಗಾಂಧಿ ದೂರಿದರು.

ಇಲ್ಲಿನ ಕೊಡಿಯತ್ತೂರುನಲ್ಲಿ ಆಯೋಜಿಸಿದ್ದ ಬೃಹತ್‌ ರೋಡ್‌ ಷೋನಲ್ಲಿ ಮಾತನಾಡಿದ ಅವರು, ಭಾರತದ ಕೆಲವೇ ಕೆಲವು ಉದ್ಯಮಿಗಳ ಸಾಲ ಮನ್ನಾ ಮಾಡಿದ ಪ್ರಧಾನಿ ಮೋದಿ ಅವರ ರಕ್ಷಣೆಗೆ ನಿಂತಿದ್ದಾರೆ. ದೇಶದಲ್ಲಿ ಎಷ್ಟೋ ಸಮಸ್ಯೆಗಳಿದ್ದರೂ ಜನರ ದೃಷ್ಟಿಯನ್ನು ಬೇರೆಡೆಗೆ ಸೆಳೆಯುವ ಪ್ರಯತ್ನವನ್ನು ಮೋದಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮೋದಿ ದೇಶದ 20 ರಿಂದ 25 ಶ್ರೀಮಂತ ಉದ್ಯಮಿದಾರರಿಗೆ 16 ಲಕ್ಷ ಕೋಟಿ ರು. ನೀಡಿದ್ದಾರೆ. ಆದರೆ ಬಡವರ ಸಮಸ್ಯೆ, ರೈತರ ಸಮಸ್ಯೆ, ನಿರುದ್ಯೋಗಿಗಳ ಸಮಸ್ಯೆ ಕುರಿತು ಅವರು ಎಂದೂ ಮಾತನಾಡುವುದಿಲ್ಲ ಎಂದು ಕಿಡಿಕಾರಿದ ಅವರು, ಚುನಾವಣಾ ಬಾಂಡ್‌ಗಳ ಹೆಸರಿನಲ್ಲಿ ದೊಡ್ಡ ಮಟ್ಟದಲ್ಲಿ ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಿದರು.

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮೂರನೇ ಬಾರಿ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬದಲಿಸುತ್ತೇವೆ ಎಂದು ಬಿಜೆಪಿ ನಾಯಕರು ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು.