ಸಾರಾಂಶ
ಮದ್ಯ ಲೈಸೆನ್ಸ್ ಹಗರಣದಲ್ಲಿ ತಿಹಾರ್ ಜೈಲು ಸೇರಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ‘ ‘ನನ್ನ ಹೆಸರು ಅರವಿಂದ ಕೇಜ್ರಿವಾಲ್, ನಾನು ಉಗ್ರನಲ್ಲ’ ಎಂದು ರಾಜ್ಯದ ಜನತೆಗೆ ಸಂದೇಶ ರವಾನಿಸಿದ್ದಾರೆ.
ನವದೆಹಲಿ: ಮದ್ಯ ಲೈಸೆನ್ಸ್ ಹಗರಣದಲ್ಲಿ ತಿಹಾರ್ ಜೈಲು ಸೇರಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ‘ ‘ನನ್ನ ಹೆಸರು ಅರವಿಂದ ಕೇಜ್ರಿವಾಲ್, ನಾನು ಉಗ್ರನಲ್ಲ’ ಎಂದು ರಾಜ್ಯದ ಜನತೆಗೆ ಸಂದೇಶ ರವಾನಿಸಿದ್ದಾರೆ. ಈ ಮಾಹಿತಿಯನ್ನು ಆಪ್ನ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಬಹಿರಂಗಪಡಿಸಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಂಗ್, ‘ತಿಹಾರ್ ಜೈಲಿನಲ್ಲಿ ಕೇಜ್ರಿವಾಲ್ ಅವರನ್ನು ಒಬ್ಬ ಉಗ್ರನಂತೆ ನೋಡಲಾಗುತ್ತಿದೆ. ದೊಡ್ಡ ದೊಡ್ಡ ಅಪರಾಧ ಮಾಡಿ ಜೈಲು ಪಾಲಾದ ಅಪರಾಧಿಗಳಿಗೆ ತಮ್ಮ ವಕೀಲರನ್ನು ಹಾಗೂ ತಮ್ಮ ಕುಟುಂಬ ಸದಸ್ಯರನ್ನು ಮುಕ್ತವಾಗಿ ಭೇಟಿ ಮಾಡಲು ಅವಕಾಶ ನೀಡುತ್ತಾರೆ. ಆದರೆ ಒಬ್ಬ ಮುಖ್ಯಮಂತ್ರಿ ಸ್ಥಾನದಲ್ಲಿದ್ದವರನ್ನು ಈ ಥರ ನೋಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.ಕೇಂದ್ರದ ಬಿಜೆಪಿ ಸರ್ಕಾರ ಕೇಂಜ್ರಿವಾಲ್ ಅವರ ಮೇಲಿನ ಸೇಡು ಹಾಗೂ ದುರದ್ದೇಶದಿಂದಲೇ ಇದನ್ನೆಲ್ಲಾ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸೋಮವಾರ ಪಂಜಾಬ್ ಮುಖ್ಯಮಂತ್ರಿ ಭಗವತ್ ಮಾನ್ ಅವರು ಕೇಜ್ರಿವಾಲ್ ಅವರನ್ನು ಭೇಟಿ ಮಾಡಲು ಹೋದಾಗ ಗ್ಲಾಸ್ ಗೋಡೆಯ ಮುಖಾಂತರ ಸಂವಹನ ನಡೆಸಲು ಅವಕಾಶ ಕೊಟ್ಟ ಬಗ್ಗೆಯೂ ಸಿಂಗ್ ವಿಷಾಧ ವ್ಯಕ್ತಪಡಿಸಿದರು.