ಸಾರಾಂಶ
ನವದೆಹಲಿ: ‘ಪಾಕಿಸ್ತಾನ ಜತೆಗಿನ ಕದನವಿರಾಮವನ್ನು ಮಾಡಿಸಿದ ಅಮೆರಿಕ ಅಧ್ಯಕ್ಷ ಟ್ರಂಪ್ಗೆ ಪ್ರಧಾನಿ ನರೇಂದರ್ ಸರೆಂಡರ್ ಆಗಿದ್ದಾರೆ’ ಎಂದಿದ್ದ ಕಾಂಗ್ರೆಸ್ ಇದೀಗ, ‘ಮೋದಿಯವರು ಅದಾನಿ ಮತ್ತು ಚೀನಾಗೂ ಸರೆಂಡರ್ (ಶರಣು) ಆಗಿದ್ದಾರೆ’ ಎಂದು ಟೀಕಿಸಿದೆ.
ಕಾಂಗ್ರೆಸ್ ನಾಯಕ ಅಜೋಯ್ ಕುಮಾರ್ ಅವರು ಎಐಸಿಸಿ ಪ್ರಧಾನಕಚೇರಿಯಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿ, ‘ಅನೇಕ ವರ್ಷಗಳ ಅಭ್ಯಾಸದಿಂದ ಮೋದಿ ಟ್ರಂಪ್ಗೆ ಶರಣಾಗಿದ್ದಾರೆ. ಪ್ರಧಾನಿ ಮೋದಿಯವರ ರಾಜತಾಂತ್ರಿಕ ನಡೆಗಳಿಂದ ಮಿಸ್ಟರ್ ಎ (ಅದಾನಿ)ಗೆ ಬಂದರುಗಳು, ವಿಮಾನ ನಿಲ್ದಾಣಗಳು, ವಿದ್ಯುತ್, ಕಲ್ಲಿದ್ದಲು ಗಣಿಗಾರಿಕೆ ಮತ್ತು ಶಸ್ತ್ರಾಸ್ತ್ರ ಕ್ಷೇತ್ರಗಳಲ್ಲಿ ತಮ್ಮ ಉದ್ಯಮವನ್ನು ವಿಸ್ತರಿಸಿಕೊಳ್ಳಲು ಅನುಕೂಲವಾಗಿದೆ. ಆದರೆ ಇದರಿಂದ ವಿದೇಶಗಳೊಂದಿಗಿನ ಭಾರತದ ಸಂಬಂಧಕ್ಕೆ ಪೆಟ್ಟು ಬಿದ್ದಿದೆ’ ಎಂದರು.
ಅಂತೆಯೇ, ‘ಪ್ರಧಾನಿ ಮೋದಿ ಕೆಲ ರಾಷ್ಟ್ರಗಳಿಗೆ ಹೋಗಿಬಂದ ಅಥವಾ ವಿದೇಶಗಳ ನಾಯಕರು ಭಾರತಕ್ಕೆ ಭೇಟಿ ಕೊಟ್ಟ ಕೂಡಲೇ ಅದಾನಿ ಕಂಪನಿ ಹಲವು ಅಂತಾರಾಷ್ಟ್ರೀಯ ಒಪ್ಪಂದಗಳನ್ನು ಮಾಡಿಕೊಂಡಿತು’ ಎಂದೂ ಆರೋಪಿಸಿದರು. ಇದೇ ವೇಳೆ, ಮೋದಿ ಚೀನಾದೆದುರೂ ಶರಣಾಗಿದ್ದಾರೆ ಎಂದು ಆಪಾದಿಸಿದ ಕುಮಾರ್, ‘2020ರಲ್ಲಿ ನಡೆದ ಗಲ್ವಾನ್ ಸಂಘರ್ಷದ ಸಂಬಂಧ ಚೀನಾಗೆ ಕ್ಲೀನ್ಚಿಟ್ ಕೊಟ್ಟಿದ್ದಕ್ಕಾಗಿ ಅವರು ದೇಶದೆದುರು ಕ್ಷಮೆ ಯಾಚಿಸಬೇಕು’ ಎಂದು ಆಗ್ರಹಿಸಿದರು.ಮಂಗಳವಾರ ಭೋಪಾಲ್ನಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ಟ್ರಂಪ್ ಕರೆ ಮಾಡಿ ನರೇಂದರ್ ಸರೆಂಡರ್ ಎಂದು ಆದೇಶಿಸುತ್ತಿದ್ದಂತೆ ಮೋದಿ ಆಯಿತು ಪ್ರಭುಗಳೇ ಎಂದು ಕದನವಿರಾಮಕ್ಕೆ ಒಪ್ಪಿಕೊಂಡರು’ ಎಂದು ಹೇಳಿದ್ದರು.