ಸಾರಾಂಶ
ಶ್ರೀನಗರ: ಶನಿವಾರ ತಡರಾತ್ರಿ ಉಗ್ರರ ದಾಳಿಗೆ ಹತರಾದ ಜಮ್ಮು ಕಾಶ್ಮೀರದ ಮಾಜಿ ಸರಪಂಚ್ ಐಜಾಝ್ ಶೇಖ್ . ಬಿಜೆಪಿ ಕಾರ್ಯಕರ್ತರಾಗಿರುವ ಕಾರಣ ಅವರನ್ನು ಕೊಲೆ ಮಾಡಲಾಗಿದೆ ಎನ್ನಲಾಗಿದೆ.
ಇತ್ತೀಚೆಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಶೇಖ್,‘ಮೊದಲು ನಾನು ದಿನಕ್ಕೆ 500 ರು. ಪಡೆದು, ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕಾರ ವಹಿಸಿಕೊಂಡ ಬಳಿಕ ಅವರು ಮಾಡಿದ ಅಭಿವೃದ್ಧಿ ಕಾರ್ಯಗಳಿಂದ ಪ್ರಭಾವಿತನಾಗಿ ಕಲ್ಲು ತೂರಾಟ ಬಿಟ್ಟು ಒಳ್ಳೆ ಕೆಲಸಕ್ಕೆ ತೊಡಗಿಸಿಕೊಂಡೆ. ಬಳಿಕ ಸರಪಂಚ್ ಆದೆ’ ಎಂದು ಹೇಳಿದ್ದರು. ಈ ವಿಡಿಯೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಉಗ್ರರು ಅವರನ್ನು ಹತ್ಯೆ ಮಾಡಿರಬಹುದು ಎಂದು ಹೇಳಲಾಗಿದೆ.
ಬೆದರಿಕೆ ಇದ್ದರೂ ಜಿಲ್ಲಾಡಳಿತ ನಿರ್ಲಕ್ಷ್ಯ: ಐಜಾಝ್ ಶೇಖ್ ಸಾವಿಗೆ ಆಕ್ರೋಶ ಹೊರಹಾಕಿರುವ ಬಿಜೆಪಿ,‘ಉಗ್ರರಿಂದ ಬೆದರಿಕೆ ಇರುವ ಮಾಹಿತಿಯನ್ನು ಮೊದಲೇ ಹೇಳಿದ್ದರೂ, ಆಡಳಿತ ಇದನ್ನು ಅಲ್ಲಗೆಳೆದಿತ್ತು. ಇದರ ಪರಿಣಾಮ ಶೇಖ್ ಉಗ್ರರಿಗೆ ಬಲಿಯಾಗಿದ್ದಾರೆ’ ಎಂದು ಆರೋಪಿಸಿದೆ. ಜೊತೆಗೆ ಜಿಲ್ಲಾಡಳಿತದ ಎದುರು ಪ್ರತಿಭಟನೆ ನಡೆಸಿತು. ಮತ್ತೊಂದೆಡೆ ಜಮ್ಮು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ಸಹ ಪ್ರತಿಭಟನೆ ನಡೆಸಿತು.
ಭದ್ರತಾ ಪಡೆಗಳಿಗೆ ಮುಕ್ತ ಅವಕಾಶ: ಶೇಖ್ ಹತ್ಯೆ ಹಾಗೂ ಇಬ್ಬರು ಪ್ರವಾಸಿಗರ ಮೇಲಿನ ದಾಳಿಗೆ ಕಾರಣರಾದ ಉಗ್ರರನ್ನು ಸದೆಬಡಿಯಲು ಭದ್ರತಾ ಪಡೆಗಳಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹೇಳಿದ್ದಾರೆ.