ಮೋದಿ ಮಂತ್ರಿಮಂಡಲ ಸೇರಲು ಎನ್‌ಸಿಪಿ ನಕಾರ

| Published : Jun 10 2024, 12:30 AM IST / Updated: Jun 10 2024, 05:10 AM IST

ಸಾರಾಂಶ

ಮೋದಿ ಮಂತ್ರಿಮಂಡಲ ಸೇರಲು ಎನ್‌ಸಿಪಿ (ಅಜಿತ್‌ ಪವಾರ್‌ ಬಣ) ಭಾನುವಾರ ನಿರಾಕರಿಸಿದೆ. ಏಕೆಂದರೆ ಸಂಪುಟ ದರ್ಜೆ ಸ್ಥಾನಮಾನ ನೀಡದೇ ರಾಜ್ಯ ದರ್ಜೆ ನೀಡಿದ್ದಕ್ಕೆ ಪಕ್ಷದ ನೇತಾರ ಹಾಗೂ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಹಾಗೂ ಸಚಿವಾಕಾಂಕ್ಷಿ ಪ್ರಫುಲ್‌ ಪಟೇಲ್‌ ಕಿಡಿಕಾರಿದ್ದಾರೆ.

ಮುಂಬೈ: ಮೋದಿ ಮಂತ್ರಿಮಂಡಲ ಸೇರಲು ಎನ್‌ಸಿಪಿ (ಅಜಿತ್‌ ಪವಾರ್‌ ಬಣ) ಭಾನುವಾರ ನಿರಾಕರಿಸಿದೆ. ಏಕೆಂದರೆ ಸಂಪುಟ ದರ್ಜೆ ಸ್ಥಾನಮಾನ ನೀಡದೇ ರಾಜ್ಯ ದರ್ಜೆ (ಸ್ವತಂತ್ರ ನಿರ್ವಹಣೆ) ನೀಡಿದ್ದಕ್ಕೆ ಪಕ್ಷದ ನೇತಾರ ಹಾಗೂ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಹಾಗೂ ಸಚಿವಾಕಾಂಕ್ಷಿ ಪ್ರಫುಲ್‌ ಪಟೇಲ್‌ ಕಿಡಿಕಾರಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅಜಿತ್‌ ಪವಾರ್‌ ‘ಪ್ರಫುಲ್‌ ಪಟೇಲ್ ಅವರು ಈ ಹಿಂದೆ ಕೇಂದ್ರ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿ ಸೇವೆ ಸಲ್ಲಿಸಿದ್ದರು ಮತ್ತು ಈಗ ರಾಜ್ಯ ಸಚಿವ ಹುದ್ದೆ ನೀಡುವುದು ಸರಿಯಲ್ಲ. ತಡವಾದರೂ ಚಿಂತೆಯಿಲ್ಲ, ಎನ್‌ಸಿಪಿಗೆ ಸಂಪುಟ ಸ್ಥಾನಮಾನವೇ ಬೇಕು. ಇಂದು ಒಬ್ಬ ಲೋಕಸಭೆ ಮತ್ತು ಒಬ್ಬ ರಾಜ್ಯಸಭಾ ಸಂಸದರಿದ್ದಾರೆ, ಆದರೆ ಮುಂದಿನ 2 -3 ತಿಂಗಳಲ್ಲಿ ಇನ್ನೂ ಇಬ್ಬರು ರಾಜ್ಯಸಭೆ ಸೇರಿಕೊಳ್ಳಲಿದ್ದು, ಆಗ ನಮ್ಮ ಬಲ ಇಡೀ ಸಂಸತ್ತಲ್ಲಿ 4ಕ್ಕೇರಲಿದೆ. ಹೀಗಾಗಿ ನಮಗೆ ಸಂಪುಟ ಸ್ಥಾನಮಾನವೇ ಬೇಕು’ ಎಂದರು.

ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್‌ ಮಾತನಾಡಿ, ‘ಮುಂದಿನ ಸುತ್ತಿನಲ್ಲಿ ಎನ್‌ಸಿಪಿ ಸಂಪುಟ ಸೇರಲಿದೆ’ ಎಂದರು.