ಸಾರಾಂಶ
ಮಲಯಾಳಂನ ಖ್ಯಾತ ನಟ ಮುಕೇಶ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿರುವ ನಟಿಯೊಬ್ಬರು ‘ನನಗೆ ಕೇರಳ ಸರ್ಕಾರ ಯಾವುದೇ ರೀತಿಯಲ್ಲಿ ರಕ್ಷಣೆ ಹಾಗೂ ಬೆಂಬಲ ಸಿಗುತ್ತಿಲ್ಲ. ಹೀಗಾಗಿ ಪ್ರಕರಣವನ್ನು ಮುಂದುವರೆಸಲು ಮನಸ್ಸಾಗುತ್ತಿಲ್ಲ’ ಎಂದಿದ್ದಾರೆ.
ಕೊಚ್ಚಿ: ಮಲಯಾಳಂನ ಖ್ಯಾತ ನಟ ಮುಕೇಶ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿರುವ ನಟಿಯೊಬ್ಬರು ‘ನನಗೆ ಕೇರಳ ಸರ್ಕಾರ ಯಾವುದೇ ರೀತಿಯಲ್ಲಿ ರಕ್ಷಣೆ ಹಾಗೂ ಬೆಂಬಲ ಸಿಗುತ್ತಿಲ್ಲ. ಹೀಗಾಗಿ ಪ್ರಕರಣವನ್ನು ಮುಂದುವರೆಸಲು ಮನಸ್ಸಾಗುತ್ತಿಲ್ಲ’ ಎಂದಿದ್ದಾರೆ.
ಅಲ್ಲದೆ, ‘ಉದ್ದೇಶಪೂರ್ವಕವಾಗಿ ನನ್ನನ್ನು ಪೊಕ್ಸೋ ಪ್ರಕರಣದಲ್ಲಿ ಸಿಲುಕಿಸಲಾಗಿದೆ’ ಎಂದು ಹೇಳಿದ್ದಾರೆ.ಶುಕ್ರವಾರ ಮಾಧ್ಯಮಗಳಲ್ಲಿ ಮಾತನಾಡಿದ ನಟಿ, ‘ಸರ್ಕಾರದ ನಿರ್ಲಕ್ಷ್ಯದಿಂದ ಮತ್ತು ಈ ರೀತಿ ಮುಂದೆ ಬಂದ ಮಹಿಳೆಗೆ ರಕ್ಷಣೆಯ ಕೊರತೆಯಿಂದ ನಾನು ಹೆಚ್ಚಿನ ನೋವನ್ನು ಅನುಭವಿಸಿದ್ದೇನೆ. ಮಾನಸಿಕವಾಗಿ ಬಳಲಿದ್ದೇನೆ. ಅವರು ಮಹಿಳೆಗೆ ಸಹಾಯ ಮಾಡುತ್ತಿಲ್ಲ ಅಥವಾ ರಕ್ಷಿಸುತ್ತಿಲ್ಲ. ಹಾಗಾಗಿ ಪ್ರಕರಣವನ್ನು ಮುಂದುವರೆಸಲು ಮನಸ್ಸಾಗುತ್ತಿಲ್ಲ ಅದರ ಅರ್ಥ ನಾನು ಪ್ರಕರಣದಲ್ಲಿ ರಾಜಿ ಮಾಡಿಕೊಂಡಿದ್ದೇನೆ ಎಂಬ ಅರ್ಥವಲ್ಲ’ ಎಂದರು.‘
‘ನಾನು ನಿರಪರಾಧಿ, ನನಗೆ ನ್ಯಾಯ ಬೇಕು. ನನ್ನ ವಿರುದ್ಧದ ಪೋಕ್ಸೋ ಪ್ರಕರಣವನ್ನು ಕೂಲಂಕಷವಾಗಿ ಮತ್ತು ಶೀಘ್ರವಾಗಿ ತನಿಖೆ ಮಾಡಬೇಕೆಂದು ನಾನು ಬಯಸುತ್ತೇನೆ. ನಾನು ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಸರ್ಕಾರವೇ ಹೊಣೆಯಾಗುತ್ತಾರೆ’ ಎಂದರು.ನಟಿಯು ಮಣಿಯನ್ಪಿಳ್ಳ ರಾಜು ಮತ್ತು ಇಡುವೇಲು ಬಾಬು ಸೇರಿದಂತೆ ನಟರ ವಿರುದ್ಧ ದೂರು ನೀಡಿದ್ದರು. ಬಳಿಕ ಆಕೆಯ ವಿರುದ್ಧ ಸಂಬಂಧಿಕರೊಬ್ಬರು ಪೋಕ್ಸೋ ಕಾಯ್ದೆಯಡಿ ಅಡಿ ದೂರು ದಾಖಲಿಸಿದ್ದರು. ‘ಈ ಪ್ರಕರಣದಲ್ಲಿ ನನ್ನನ್ನು ಉದ್ದೇಶಪೂರ್ವಕವಾಗಿ ಅಪರಾಧಿಯನ್ನಾಗಿ ಮಾಡಲಾಗಿದೆ. ಸರ್ಕಾರ ತನ್ನನ್ನು ರಕ್ಷಿಸಲು ಏನನ್ನೂ ಮಾಡಲಿಲ್ಲ’ ಎಂದು ನಟಿ ದೂರಿದರು.