ಸಾರಾಂಶ
ಭುವನೇಶ್ವರ : ಆದಾಯಕ್ಕೂ ಮೀರಿ ಸಂಪತ್ತು ಗಳಿಸಿದ ಆರೋಪದ ಮೇಲೆ ಒಡಿಶಾದ ಭುವನೇಶ್ವರದ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಒಬ್ಬರ ನಿವಾಸದ ಮೇಲೆ ವಿಚಕ್ಷಣ ದಳದ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದು, 2 ಕೋಟಿ ರು.ಗೂ ಅಧಿಕ ಹಣವನ್ನು ಜಪ್ತಿ ಮಾಡಿದ್ದಾರೆ. ಈ ವೇಳೆ ದಾಳಿಗೊಳಗಾದದ ಎಂಜಿನಿಯರ್ ವೈಕುಂಠನಾಥ ಸಾರಂಗಿ 500 ರು. ನೋಟಿನ ಕಂತೆಗಳನ್ನೇ ಮನೆಯ ಕಿಟಕಿಯಿಂದ ಹೊರಗೆಸೆದು ಹೈಡ್ರಾಮಾ ನಡೆಸಿದ್ದಾರೆ.
‘ಒಡಿಶಾದ ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ್ ವೈಕುಂಠನಾಥ ಸಾರಂಗಿ ಅವರ ಮನೆಗಳು ಮತ್ತು ಕಚೇರಿ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದರು. ಅವರ ಭುವನೇಶ್ವರದ ಮನೆಯಿಂದ ಸುಮಾರು 1 ಕೋಟಿ ರು. ಹಾಗೂ ಅಂಗುಲ್ನ ನಿವಾಸದಿಂದ 1.1 ಕೋಟಿ ರು.ಗಳನ್ನು ಜಪ್ತಿ ಮಾಡಲಾಗಿದೆ. ವಿಚಕ್ಷಣ ದಳದ ಅಧಿಕಾರಿಗಳನ್ನು ಕಂಡೊಡನೆಯೇ ಸಾರಂಗಿ ಭುವನೇಶ್ವರದ ಮನೆಯ ಕಿಟಕಿಯ ಮೂಲಕ 500 ರು. ನೋಟಿನ ಕಂತೆಗಳನ್ನು ಹೊರಗೆಸೆದರು. ಸಾಕ್ಷಿಗಳ ಸಮ್ಮುಖದಲ್ಲಿ ಅವನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂಗುಲ್ನ ಕರಡಗಾಡಿಯಾದಲ್ಲಿ 2 ಅಂತಸ್ತಿನ ಮನೆ, ಭುವನೇಶ್ವರ ಮತ್ತು ಸಿಯುಲಾದಲ್ಲಿ ಫ್ಲಾಟ್ಗಳನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಶೋಧ ನಡೆಸುವಂತೆ ಕೋರ್ಟ್ ಆದೇಶದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ.
₹20 ಲಕ್ಷ ಲಂಚ: ಸಿಬಿಐನಿಂದ ಇ.ಡಿ. ಉಪನಿರ್ದೇಶಕನ ಬಂಧನ
ಭುವನೇಶ್ವರ: ಉದ್ಯಮಿಯಿಂದ 20 ಲಕ್ಷ ರು. ಲಂಚ ಪಡೆದ ಆರೋಪದ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.)ದ ಉಪನಿರ್ದೇಶಕ ಚಿಂತನ್ ರಘುವಂಶಿಯನ್ನು ಸಿಬಿಐ ಶುಕ್ರವಾರ ಒಡಿಶಾದಲ್ಲಿ ಬಂಧಿಸಿದೆ.ಭುವನೇಶ್ವರ ಮೂಲದ ಗಣಿಗಾರಿಕೆ ಉದ್ಯಮಿ ರತಿಕಾಂತ ರಾವುತ್ ವಿರುದ್ಧ ಇ.ಡಿ. ಪ್ರಕರಣ ದಾಖಲಾಗಿತ್ತು. ಇದರಿಂದ ಬಿಡುಗಡೆ ಮಾಡುವುದಾಗಿ ಹೇಳಿ ರಘುವಂಶಿ 5 ಕೋಟಿ ರು.ಗೆ ಬೇಡಿಕೆ ಇಟ್ಟಿದ್ದರು. ರಾವುತ್ ಅವರಿಂದ ರಘುವಂಶಿ ಲಂಚದ ಮೊದಲ ಕಂತು ಪಡೆಯಲಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಸಿಬಿಐ ದಾಳಿ ನಡೆಸಿತ್ತು. ಈ ವೇಳೆ 20 ಲಕ್ಷ ರು. ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.