ಕಾಶ್ಮೀರದಲ್ಲಿ ಮತ್ತೆ ನಾಲ್ವರು ಉಗ್ರರ ಮನೆ ಧ್ವಂಸ

| N/A | Published : Apr 27 2025, 01:31 AM IST / Updated: Apr 27 2025, 07:34 AM IST

ಸಾರಾಂಶ

ಪಹಲ್ಗಾಂ ದಾಳಿ ಬಳಿಕ ಕಾಶ್ಮೀರ ಕಣಿವೆಯಲ್ಲಿ ಉಗ್ರರ ವಿರುದ್ಧ ಕಠಿಣ ಕ್ರಮ ಮುಂದುವರೆಸಿರುವ ಸೇನಾಪಡೆಗಳು ಮತ್ತೆ ನಾಲ್ಕು ಉಗ್ರರ ಮನೆಗಳನ್ನು ಧ್ವಂಸ ಮಾಡಿವೆ.

ಶ್ರೀನಗರ: ಪಹಲ್ಗಾಂ ದಾಳಿ ಬಳಿಕ ಕಾಶ್ಮೀರ ಕಣಿವೆಯಲ್ಲಿ ಉಗ್ರರ ವಿರುದ್ಧ ಕಠಿಣ ಕ್ರಮ ಮುಂದುವರೆಸಿರುವ ಸೇನಾಪಡೆಗಳು ಮತ್ತೆ ನಾಲ್ಕು ಉಗ್ರರ ಮನೆಗಳನ್ನು ಧ್ವಂಸ ಮಾಡಿವೆ. ಇದರೊಂದಿಗೆ 26 ಪ್ರವಾಸಿಗರ ಹತ್ಯೆ ನಡೆದ ಮೂರು ದಿನಗಳಲ್ಲಿ ಒಟ್ಟು ಆರು ಉಗ್ರರ ಮನೆಗಳನ್ನು ಧ್ವಂಸ ಮಾಡಿದಂತಾಗಿದೆ. ಜೊತೆಗೆ ಉಗ್ರರಿಗಾಗಿ ಮನೆ ಮನೆ ಹುಡುಕಾಟದ ಕಾರ್ಯಾಚರಣೆಯನ್ನು ಶನಿವಾರ ನಡೆಸಲಾಗಿದೆ. 

ಜೊತೆಗೆ ಉಗ್ರರ ಬೆಂಬಲಿಗರು ಮತ್ತು ಅವರಿಗೆ ನೆರವು ನೀಡುವವರ ವಿರುದ್ಧ ಕಾರ್ಯಾಚರಣೆ ನಡೆಸಿರುವ ಭದ್ರತಾ ಪಡೆಗಳು ಹಲವಾರು ಜನರನ್ನು ವಶಕ್ಕೆ ಪಡೆದಿದ್ದು, ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.ಭಯೋತ್ಪಾದಕರು ಮತ್ತು ಅವರಿಗೆ ಪ್ರೋತ್ಸಾಹ ನೀಡುವವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಪ್ರಧಾನಿ ಮೋದಿ ಅವರು ಕಠಿಣ ಸಂದೇಶ ರವಾನಿಸಿದ ಬೆನ್ನಲ್ಲೇ ಇದೇ ಮೊದಲ ಬಾರಿಗೆ ಇಂಥ ಘಟನೆಗಳು ಆರಂಭವಾಗಿವೆ.ಪುಲ್ವಾಮಾ, ಶೋಪಿಯಾನ್‌ ಮತ್ತು ಕುಲ್ಗಾಂ ಜಿಲ್ಲೆಗಳಲ್ಲಿ ಮೂವರು ಶಂಕಿತ ಉಗ್ರರ ಮನೆಗಳನ್ನು ದಿಢೀರ್‌ ನಾಶ ಮಾಡಲಾಗಿದೆ.

2018ರಲ್ಲಿ ಪಾಕಿಸ್ತಾನದಲ್ಲಿ ಉಗ್ರ ತರಬೇತಿ ಪಡೆದು ಇತ್ತೀಚೆಗೆ ಕಣಿವೆ ಪ್ರವೇಶಿಸಿದ್ದ ಪುಲ್ಬಾಮಾ ಜಿಲ್ಲೆಯ ಮುರಾನ್‌ನಲ್ಲಿರುವ ಎಹ್ಸಾನ್‌ ಉಲ್‌ ಹಕ್‌ ಶೇಖ್‌ ಮನೆ, ಮೂರ್ನಾಲ್ಕು ವರ್ಷಗಳಿಂದ ಭಾರತ ವಿರೋಧಿ ಕೃತ್ಯಗಳಲ್ಲಿ ತೊಡಗಿಕೊಂಡಿರುವ ಶೋಪಿಯಾನ್‌ ಜಿಲ್ಲೆಯ ಛೋತಿಪೋರಾದ ಲಷ್ಕರ್‌-ಎ-ತೊಯ್ಬಾ ಕಮಾಂಡರ್‌ ಶಾಹಿದ್‌ ಅಹ್ಮದ್‌ ಕುಟ್ಟೈ, 2023ರಿಂದ ಉಗ್ರರ ಜತೆಗೆ ಗುರುತಿಸಿಕೊಂಡಿರುವ ಕುಲ್ಗಾಂ ಜಿಲ್ಲೆಯ ಮತಲ್ಹಾಮಾದಲ್ಲಿರುವ ಝಾಕಿರ್‌ ಅಹ್ಮದ್‌ ಘನಿ ಮತ್ತು ಹಾಲಿ ಪಾಕಿಸ್ತಾನದಲ್ಲಿರುವ ಉಗ್ರ ಫಾರೂಖ್‌ ಶೇಖ್‌ಗ ಸೇರಿದ ಪುಲ್ವಾಮಾದಲ್ಲಿನ ಮನೆ ಧ್ವಂಸ ಮಾಡಲಾಗಿದೆ.

ಇದಕ್ಕೂ ಮೊದಲು ಗುರುವಾರ ರಾತ್ರಿ ಆದಿಲ್‌ ಹುಸೈನ್‌ ಠೋಕರ್‌ ಮತ್ತು ಉಗ್ರರಿಗೆ ನೆರವು ನೀಡಿದ್ದ ಆಸೀಫ್‌ ಶೇಖ್‌ನ ಮನೆ ಶುಕ್ರವಾರ ಧ್ವಂಸಗೊಳಿಸಲಾಗಿತ್ತು.

ಕಾಶ್ಮೀರದಲ್ಲಿ ಉಗ್ರರ ಅಡಗು ತಾಣ ಪತ್ತೆ ಭಾರೀ ಶಸ್ತ್ರಾಸ್ತ್ರ ವಶ

ಶ್ರೀನಗರ: ಪಹಲ್ಗಾಂ ದುರಂತದ ಬಳಿಕ ಉಗ್ರರ ವಿರುದ್ಧ ಸಮರ ಸಾರಿರುವ ಭದ್ರತಾ ಪಡೆಗಳು ಶನಿವಾರ ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ಭಯೋತ್ಪಾದಕರ ಅಡಗು ತಾಣಗಳನ್ನು ಪತ್ತೆ ಹಚ್ಚಿದ್ದು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿವೆ. ಖಚಿತ ಮಾಹಿತಿಯ ಮೇರೆಗೆ ಭದ್ರತಾ ಪಡೆ ಸಿಬ್ಬಂದಿ ಉತ್ತರ ಕಾಶ್ಮೀರ ಜಿಲ್ಲೆಯ ಮುಷ್ತಕಾಬಾದ್‌ ಮಚಿಲ್‌ ವ್ಯಾಪ್ತಿಯ ಸೆಡೋರಿ ನಾಲಾ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ಸಮಯದಲ್ಲಿ ಭಯೋತ್ಪಾದಕರ ಅಡಗುತಾಣವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ ಸ್ಥಳದಿಂದ ಎಕೆ-47 ರೈಫಲ್‌, ಪಿಸ್ತೂಲ್, ಸಜೀವ ಗುಂಡು ಸೇರಿದಂತೆ ಅಪಾರ ಪ್ರಮಾಣ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್‌ ಮೂಲಗಳು ಮಾಹಿತಿ ನೀಡಿವೆ.

ಸತತ 2ನೇ ದಿನವೂ ಪಾಕ್‌ನಿಂದ ಗುಂಡಿನ ದಾಳಿ

ಶ್ರೀನಗರ: ಶಿಮ್ಲಾ ಒಪ್ಪಂದವನ್ನು ಸ್ಥಗಿತಗೊಳಿಸಿ ಭಾರತದ ವಿರುದ್ಧ ಹಗೆ ಸಾಧಿಸಲು ಮುಂದಾಗಿರುವ ಪಾಕಿಸ್ತಾನ, ಉಭಯದೇಶಗಳ ನಡುವಿನ ಕದನವಿರಾಮ ಉಲ್ಲಂಘಿಸಿ ಅಪ್ರಚೋದಿತ ದಾಳಿ ನಡೆಸುವುದನ್ನು ಮುಂದುವರೆಸಿದೆ. ಇದಕ್ಕೆ ಭಾರತೀಯ ಸೈನಿಕರೂ ತಕ್ಕ ಉತ್ತರ ನೀಡಿದ್ದಾರೆ.

ಎರಡೂ ರಾಷ್ಟ್ರಗಳ ನಡುವೆ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ, ಗುರುವಾರ ಭಾರತದ ಗಡಿಯತ್ತ ಗುಂಡು ಹಾರಿಸಿ, ಭಾರತದಿಂದ ಅದೇ ಭಾಷೆಯಲ್ಲಿ ಉತ್ತರ ಸಿಕ್ಕಿದಾಗ ಸುಮ್ಮನಾಗಿದ್ದ ಪಾಕ್‌, 2ನೇ ದಿನವೂ ತನ್ನ ಚೇಷ್ಟೆ ಮುಂದುವರೆಸಿದೆ. ಇದಕ್ಕೆ ಪ್ರತಿಯಾಗಿ ಭಾರತವೂ ಗುಂಡು ಹಾರಿಸಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ವೇಳೆ ಯಾವುದೇ ಸಾವುನೋವು ವರದಿಯಾಗಿಲ್ಲ.