ಸಾರಾಂಶ
ಆದಿಲ್ ಅಹ್ಮದ್ ಥೋಕರ್ ಮುಲತಃ ಕಾಶ್ಮೀರದ ಅನಂತನಾಗ್ ಜಿಲ್ಲೆಯವ. ವಿದ್ಯಾಭ್ಯಾಸದ ಹೆಸರಲ್ಲಿ ಪಾಕಿಸ್ತಾನಕ್ಕೆ ತೆರಳಿ, ಉಗ್ರನಾಗಿ ಮರಳಿದ್ದ
ನವದೆಹಲಿ: 26 ಪ್ರವಾಸಿಗರ ನರಮೇಧಕ್ಕೆ ಕಾರಣವಾದ ಪಹಲ್ಗಾಂ ದಾಳಿಯ ಮಾಸ್ಟರ್ಮೈಂಡ್ ಆದಿಲ್ ಅಹ್ಮದ್ ಥೋಕರ್ ಮುಲತಃ ಕಾಶ್ಮೀರದ ಅನಂತನಾಗ್ ಜಿಲ್ಲೆಯವ. ವಿದ್ಯಾಭ್ಯಾಸದ ಹೆಸರಲ್ಲಿ ಪಾಕಿಸ್ತಾನಕ್ಕೆ ತೆರಳಿ, ಉಗ್ರನಾಗಿ ಮರಳಿದ್ದ ಎಂದು ತಿಳಿದುಬಂದಿದೆ.
ವಿದ್ಯಾರ್ಥಿ ವೀಸಾ ಪಡೆದು 2018ರಲ್ಲಿ ಪಾಕಿಸ್ತಾನಕ್ಕೆ ಹೋಗಿದ್ದ ಆದಿಲ್ನ ಮನಃಸ್ಥಿತಿ, ಅದಕ್ಕೂ ಮೊದಲೇ ಉಗ್ರವಾದದ ಹಾದಿಯನ್ನು ಹಿಡಿಯುವ ಸೂಚನೆ ನೀಡುವಂತಿತ್ತು. ಅದಕ್ಕೆ ಪೂರಕವಾಗಿ ಆತ ನಿಷೇಧಿತ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕದಲ್ಲಿದ್ದ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ಪಾಕ್ ತಲುಪಿದ ಕೆಲ ಸಮಯದಲ್ಲೇ ತನ್ನ ಪರಿವಾರದೊಂದಿಗಿನ ಸಂಪರ್ಕ ಕಡಿದುಕೊಂಡ ಆದಿಲ್, ಇದ್ದಕ್ಕಿದ್ದಂತೆ 8 ತಿಂಗಳು ನಾಪತ್ತೆಯಾದ. ಈ ವೇಳೆ ಅವನು ಲಷ್ಕರ್ ಎ ತೊಯ್ಬಾ ಸಂಘಟನೆಯಿಂದ ಸೈನಿಕ ಹಾಗೂ ಸೈದ್ಧಾಂತಿಕ ತರಬೇತಿ ಪಡೆಯುತ್ತಿದ್ದ ಎಂಬ ಶಂಕೆಯಿದೆ.
ಉಗ್ರನಾಗಿ ಭಾರತಕ್ಕೆ:
2024ರ ಅಕ್ಟೋಬರ್ನಲ್ಲಿ ದುರ್ಗಮ ಪ್ರದೇಶವಾದ ಪೂಂಚ್-ರಜೌರಿಯಿಂದ ಗಡಿ ನುಸುಳಿ ಭಾರತಕ್ಕೆ ಬಂದ ಆದಿಲ್, ಜತೆಯಲ್ಲಿ ಪಾಕ್ ಪ್ರಜೆಯಾದ ಹಶೀಂ ಮೂಸಾ ಸೇರಿ ಮೂರ್ನಾಲ್ಕು ಉಗ್ರಕ್ರಿಮಿಗಳನ್ನು ಕರೆತಂದಿದ್ದ. ಬಳಿಕವೂ ತಲೆಮರೆಸಿಕೊಂಡಿದ್ದ ಆತ, ಅನಂತ್ನಾಗ್ನಲ್ಲಿ ತನ್ನ ಸಹಚರರೊಂದಿಗೆ ನೆಲೆಯೂರಿದ್ದ ಶಂಕೆಯಿದೆ. ಈ ವೇಳೆ ಸ್ಥಳೀಯ ಉಗ್ರರ ಸಂಪರ್ಕವನ್ನು ಮತ್ತೆ ಸಾಧಿಸಿ, ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದ. ಅದರ ಫಲವೇ ಪಹಲ್ಗಾಂ ದಾಳಿ ಎಂದು ಗುಪ್ತಚರ ಮೂಲಗಳು ಮಾಹಿತಿ ನೀಡಿವೆ.