ಸಾರಾಂಶ
ಇಸ್ಲಾಮಾಬಾದ್: ಪಹಲ್ಗಾಂ ಉಗ್ರ ದಾಳಿ ಬಳಿಕ ಸಿಂಧೂ ಜಲ ಒಪ್ಪಂದವನ್ನು ತಡೆಹಿಡಿದಿರುವ ಭಾರತದ ಕ್ರಮದ ವಿರುದ್ಧ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತೆ ಆಕ್ರೋಶ ಹೊರಹಾಕಿದ್ದಾರೆ. ನೀರನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುವ ಭಾರತದ ಯೋಜನೆಯನ್ನು ಯಶಸ್ವಿಯಾಗಲು ಬಿಡುವುದಿಲ್ಲ ಎಂದಿದ್ದಾರೆ.
ತಜಕಿಸ್ತಾನದ ರಾಜಧಾನಿ ದುಶಾಂಬೆಯಲ್ಲಿ ನಡೆದ 3 ದಿನಗಳ ಅಂತಾರಾಷ್ಟ್ರೀಯ ಹಿಮನದಿಗಳ ಸಂರಕ್ಷಣೆ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ಸಿಂಧೂ ಜಲ ಒಪ್ಪಂದವನ್ನು ಭಾರತ ಸ್ಥಗಿತಗೊಳಿಸಿರುವುದು ತೀವ್ರ ವಿಷಾದಕರ. ರಾಜಕೀಯ ಲಾಭಕ್ಕಾಗಿ ಲಕ್ಷಾಂತರ ಜೀವಗಳನ್ನು ಒತ್ತೆಯಾಳುಗಳಾಗಿ ಇಡಬಾರದು.
ಪಾಕಿಸ್ತಾನ ಇದಕ್ಕೆ ಅವಕಾಶ ನೀಡುವುದಿಲ್ಲ’ ಎಂದರು.‘ಗಾಜಾದಲ್ಲಿ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳ ಬಳಕೆಯಿಂದ ಇಂದು ಜಗತ್ತು ಹೊಸ ಗಾಯಗಳನ್ನು ಅನುಭವಿಸುತ್ತಿದೆ. ಆ ಗಾಯಗಳು ಆಳವಾಗಿವೆ. ಅದು ಸಾಕಾಗಲಿಲ್ಲ ಎಂಬಂತೆ, ನಾವು ಈಗ ಆತಂಕಕಾರಿಯಾದ ಮತ್ತೊಂದು ಸಮಸ್ಯೆಗೆ ಸಾಕ್ಷಿಯಾಗುತ್ತಿದ್ದೇವೆ. ಅದು ನೀರಿನ ಶಸ್ತ್ರಾಸ್ತ್ರೀಕರಣ’ ಎಂದು ಭಾರತದ ವಿರುದ್ಧ ಕಿಡಿ ಕಾರಿದರು.