ಸಾರಾಂಶ
ನವದೆಹಲಿ: ಪಹಲ್ಗಾಂ ಉಗ್ರದಾಳಿ ಬೆನ್ನಲ್ಲೇ ತನ್ನ ನೆಲದಲ್ಲಿರುವ ಎಲ್ಲಾ ಪಾಕ್ ಪ್ರಜೆಗಳನ್ನು ಭಾರತ ಅವರ ತವರಿಗೆ ಅಟ್ಟುತ್ತಿದ್ದರೆ, ಪಾಕಿಸ್ತಾನ ಮಾತ್ರ ಅಟ್ಟಾರಿ ಗಡಿಯನ್ನು ಮುಚ್ಚಿ ಅವರನ್ನೆಲ್ಲ ತ್ರಿಶಂಕು ಸ್ಥಿತಿಗೆ ತಳ್ಳಿದೆ.
ಪ್ರತೀಕಾರದ ರಾಜತಾಂತ್ರಿಕ ಕ್ರಮದ ಭಾಗವಾಗಿ, ಏ.30ರೊಳಗೆ ಭಾರತದಲ್ಲಿರುವ ಎಲ್ಲಾ ಪಾಕಿಗಳಿಗೆ ವಾಘಾ ಗಡಿ ಮೂಲಕ ಭಾರತ ತೊರೆಯುವಂತೆ ಸರ್ಕಾರ ಆದೇಶಿಸಿತ್ತು. ಆದರೆ ಇದೀಗ ಅವರಿಗೆ ಭಾರತ ಬಿಡಲು ಇನ್ನಷ್ಟು ಕಾಲಾವಕಾಶ ನೀಡಿದೆ.
ಆದರೆ ಅತ್ತ ಪಾಕಿಸ್ತಾನ ಮಾತ್ರ ಅಟ್ಟಾರಿ ಗಡಿಯನ್ನು ಗುರುವಾರ ಬೆಳಗ್ಗೆ 8 ಗಂಟೆಗೇ ಮುಚ್ಚಿದ್ದು, ಮಹಿಳೆಯರು, ಮಕ್ಕಳು, ವೃದ್ಧರು ಸೇರಿದಂತೆ ಅನೇಕ ಪಾಕ್ ಪ್ರಜೆಗಳು ನೆಲೆಯಿಲ್ಲದೆ ನರಳುವಂತಾಗಿದೆ. ಇದು ಪಾಕಿಸ್ತಾನದ ಪಾಲಿಗೆ ಮುಜುಗರದ ಸಂಗತಿ ಎಂದು ಜನ ತೆಗಳುತ್ತಿದ್ದಾರೆ.
ಅತಂತ್ರ ಪಾಕಿಗಳ ಗೋಳು:
ಪಾಕಿಸ್ತಾನದವರನ್ನು ಮದುವೆಯಾಗಿರುವ ಭಾರತದ ಸಹೋದರಿಯರಿಬ್ಬರು ಮುಚ್ಚಿದ ಅಟ್ಟಾರಿ ಗಡಿಯ ಎದುರು ನಿಂತು ಕಣ್ಣೀರು ಸುರಿಸಿದ್ದಾರೆ. ‘ನನಗೆ ನನ್ನ ಕಂದನ ಬಳಿ ಹೋಗಬೇಕು. ದಯವಿಟ್ಟು ಯಾರಾದರೂ ಗಡಿ ದಾಟಿಸಿ. ಇದರಲ್ಲಿ ನಮ್ಮ ತಪ್ಪಾದರೂ ಏನಿದೆ? ನಮ್ಮನ್ನು ಮಕ್ಕಳಿಂದ ಬೇರ್ಪಡಿಸುತ್ತಿರುವವರಿಗೂ ಅದೇ ಸ್ಥಿತಿ ಬರಲಿ’ ಎಂದು ಒಬ್ಬಾಕೆ ಹಿಡಿಶಾಪ ಹಾಕಿದ್ದಾರೆ. ಇನ್ನೊಬ್ಬ ಸಹೋದರಿ ಮಾತನಾಡಿ, ‘ಯಾವ ಕಾನೂನು ಪೋಷಕರಿಂದ ಮಕ್ಕಳನ್ನು ಬೇರ್ಪಡಿಸುತ್ತದೆ? ಅಲ್ಲಿನ ನನ್ನ ಮಕ್ಕಳು ಅಳುತ್ತಿವೆ’ಎಂದು ಗೋಗರೆದಿದ್ದಾರೆ.
ಅಟ್ಟಾರಿ-ವಾಘಾ ಗಡಿ ಪೂರ್ಣ ಬಂದ್
ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವಿನ ಅಟ್ಟಾರಿ-ವಾಘಾ ಗಡಿಯನ್ನು ಗುರುವಾರದಿಂದ ಪೂರ್ಣ ಪ್ರಮಾಣದಲ್ಲಿ ಬಂದ್ ಮಾಡಲಾಗಿದೆ. ಆದರೆ ದೇಶಬಿಡಲು ಪಾಕಿಸ್ತಾನಿಯರಿಗೆ ನೀಡಿದ್ದ ಏ.30ರ ಗಡುವನ್ನು ಭಾರತ ಸರ್ಕಾರ ಮುಂದಿನ ಆದೇಶದವರೆಗೂ ವಿಸ್ತರಿಸಿದೆ. ಹೀಗಾಗಿ ಇನ್ನೂ ತವರಿಗೆ ತೆರಳದೇ ಇದ್ದರೆ 3 ಲಕ್ಷ ರು.ದಂಡ ಮತ್ತು 3 ವರ್ಷ ಜೈಲು ಶಿಕ್ಷೆಯಿಂದ ತಕ್ಷಣಕ್ಕೆ ಪಾರಾಗಿದ್ದಾರೆ.
ಗಡಿಬಂದ್: ಉಗ್ರ ದಾಳಿ ಬಳಿಕ ಭಾರತವು ಪಾಕಿಸ್ತಾನದ ಜತೆಗಿನ ವ್ಯಾಪಾರ-ವಹಿವಾಟು ಸ್ಥಗಿತಗೊಳಿಸಿತ್ತು. ಜತೆಗೆ, ಪಾಕಿಸ್ತಾನಿಯರಿಗೆ ನೀಡಿದ್ದ ಅಲ್ಪಾವಧಿ ವೀಸಾ ರದ್ದು ಮಾಡಿತ್ತು. ಏಳು ದಿನದಲ್ಲಿ ಪಾಕಿಸ್ತಾನಿಯರು ಭಾರತ ತೊರೆಯುವಂತೆ ಸೂಚಿಸಿತ್ತು. ಇದಕ್ಕೆ ಪ್ರತಿಯಾಗಿ ಪಾಕ್ ಕೂಡ ಭಾರತೀಯರ ತಾತ್ಕಾಲಿಕ ವೀಸಾ ರದ್ದುಮಾಡಿತ್ತು. ಆ ಬಳಿಕ ಏಳು ದಿನಗಳಲ್ಲಿ ಭಾರತದಿಂದ ಭಾ917 ಮಂದಿ ಪಾಕಿಸ್ತಾನಕ್ಕೆ ವಾಪಸಾದರೆ, ಪಾಕಿಸ್ತಾನದಿಂದ 1617 ಮಂದಿ ಭಾರತೀಯರು ಹಾಗೂ 224 ಪಾಕಿಸ್ತಾನಿಯರು(ದೀರ್ಘಾವಧಿ ವೀಸಾ ಹೊಂದಿರುವವರು) ಅಟ್ಟಾರಿ-ವಾಘಾ ಗಡಿ ಮೂಲಕ ಭಾರತಕ್ಕೆ ಆಗಮಿಸಿದ್ದಾರೆ.
ಏ.30ರಂದು 125, ಏ.29-104, ಏ.28-145, ಏ.27-237, ಏ.26-26, ಏ.25-191, ಏ.24ರಂದು 28 ಪಾಕಿಸ್ತಾನಿಯರು ಅಟ್ಟಾರಿ-ವಾಘಾ ಗಡಿ ಮೂಲಕ ವಾಪಸ್ ತೆರಳಿದ್ದಾರೆ. ಅದೇ ರೀತಿ ಏ.30ರಂದು 152, ಏ.29-469, ಏ.28-146, ಏ. 27-116, ಏ.26-342, ಏ.25-287, ಏ.24-105 ಭಾರತೀಯರು ಗಡಿದಾಟಿ ಬಂದಿದ್ದಾರೆ ಎನ್ನಲಾಗಿದೆ.