ಸಾರಾಂಶ
ಹೈದರಾಬಾದ್: ಈ ಬಾರಿ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ರಚನೆಯಾಗುತ್ತಲೇ ಪಾಕಿಸ್ತಾನದ ವಶದಲ್ಲಿರುವ ಆಕ್ರಮಿತ ಕಾಶ್ಮೀರ (ಪಿಒಕೆ) ಪ್ರದೇಶವನ್ನು ವಶಪಡಿಸಿಕೊಳ್ಳಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಅಲ್ಲದೆ, ‘ಪಾಕಿಸ್ತಾನದ ಬಳಿ ಅಣುಬಾಂಬ್ ಇದೆ ಎಂದು ಪಿಒಕೆ ಮೇಲಿನ ನಮ್ಮ ಹಕ್ಕು ಬಿಡಬೇಕೇ?’ ಎಂದು ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ವಿರುದ್ಧ ಹರಿಹಾಯ್ದಿದ್ದಾರೆ.
ಶನಿವಾರ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಭಾಗಿಯಾಗಿ ಮಾತನಾಡಿದ ಅಮಿತ್ ಶಾ, ‘ಪಾಕಿಸ್ತಾನದ ಬಳಿ ಅಣುಬಾಂಬ್ ಇದೆ ಎನ್ನುವ ಕಾರಣಕ್ಕೆ ಪಾಕ್ ಆಕ್ರಮಿತ ಕಾಶ್ಮೀರದ ಮೇಲಿನ ತನ್ನ ಹಕ್ಕನ್ನು ಭಾರತ ಬಿಡಬೇಕು ಎಂದು ಕಾಂಗ್ರೆಸ್ ಬಯಸುತ್ತದೆ. ಆದರೆ ಈ ಬಗ್ಗೆ ಯಾರೂ ಭಯ ಪಡಬೇಕಿಲ್ಲ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ.
ಬಳಿಕ ಪಾಕಿಸ್ತಾನದ ಗುಂಡಿನ ದಾಳಿಗೆ ನಾವು ಫಿರಂಗಿ ಮೂಲಕ ಪ್ರತ್ಯುತ್ತರ ನೀಡುತ್ತೇವೆ. ಪಿಒಕೆಯನ್ನು ಮರು ವಶಮಾಡಿಕೊಳ್ಳುತ್ತೇವೆ. ಈ ಹಿಂದೆ ವಾಜಪೇಯಿ ಅವರು ಪ್ರಧಾನಿಯಾಗಿದ್ದ ವೇಳೆ ಪೋಖ್ರಣ್ನಲ್ಲಿ ಪರಮಾಣು ಪರೀಕ್ಷೆ ನಡೆಸಿ ಭಾರತವನ್ನು ಪರಮಾಣು ಶಕ್ತಿಯುಳ್ಳ ದೇಶವನ್ನಾಗಿ ಮಾಡಿದ್ದರು’ ಎಂದು ನೆನಪಿಸಿದರು.