ಸಾರಾಂಶ
ಲಾತೂರ್ : ನೀಟ್-ಯುಜಿ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಲಾತೂರ್ನಲ್ಲಿ ಓರ್ವ ಜಿಲ್ಲಾ ಪರಿಷತ್ ಶಿಕ್ಷಕನನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಬಂಧಿಸಿದೆ ಹಾಗೂ ನಾಲ್ವರ ಮೇಲೆ ಪ್ರಕರಣ ದಾಖಲಿಸಿದೆ.
ಇವರು ನೀಟ್ ಪರೀಕ್ಷಾರ್ಥಿಗಳಿಂದ ಹಣ ಪಡೆದು ಅಕ್ರಮವಾಗಿ ಪಾಸಾಗಲು ಸಹಕರಿಸುವ ಜಾಲದ ಸದಸ್ಯರು ಎಂದು ಗೊತ್ತಾದ ತಕ್ಷಣ ಎಟಿಎಸ್ ಈ ಕ್ರಮ ಜರುಗಿಸಿದೆ.
ಬಂಧಿತ ಶಿಕ್ಷಕನ ಹೆಸರು ಉಮರ್ ಖಾನ್ ಪಠಾಣ್. ಈತ ಪ್ರಕರಣ ದಾಖಲಾಗಿರುವ ಲಾತೂರ್ನ ಇನ್ನೊಬ್ಬ ಶಿಕ್ಷಕ ಸಂಜಯ ಜಾಧವ್ ಜತೆಗೂಡಿ ಲಾತೂರ್ನಲ್ಲಿ ಖಾಸಗಿ ಟ್ಯೂಷನ್ ನಡೆಸುತ್ತಿದ್ದ. ಪಠಾಣ್, ಜಾಧವ್ ಹೊರತುಪಡಿಸಿ ನಾಂದೇಡ್ನ ಓರ್ವ ವ್ಯಕ್ತಿ ಮತ್ತು ದೆಹಲಿಯ ನಿವಾಸಿ ಮೇಲೂ ಪ್ರಕರಣ ದಾಖಲಿಸಲಾಗಿದೆ. ಪಠಾಣ್ ಹೊರತುಪಡಿಸಿ ಮಿಕ್ಕ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ.
‘ಹಣಕ್ಕೆ ಪಡೆದು ನೀಟ್ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕೆಲವು ಶಂಕಿತರು ಅಕ್ರಮ ದಂಧೆ ನಡೆಸುತ್ತಿದ್ದಾರೆ ಎಂದು ಎಟಿಎಸ್ ಅಧಿಕಾರಿಗಳಿಗೆ ಸುಳಿವು ಸಿಕ್ಕಿದೆ " ಎಂದು ಲಾತೂರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಹೇಳಿದೆ.