ವಿವೇಕಾನಂದ ಸನ್ನಿಧಿಯಲ್ಲಿ ಮೋದಿ 3 ದಿನದ ಧ್ಯಾನ ಮುಕ್ತಾಯ

| Published : Jun 02 2024, 01:46 AM IST / Updated: Jun 02 2024, 04:32 AM IST

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಮಧ್ಯಾಹ್ನ 3 ಗಂಟೆಗೆ ಇಲ್ಲಿನ ವಿವೇಕಾನಂದ ರಾಕ್ ಸ್ಮಾರಕದಲ್ಲಿ ಹಮ್ಮಿಕೊಂಡಿದ್ದ ತಮ್ಮ 45 ಗಂಟೆಗಳ ಸುದೀರ್ಘ ಧ್ಯಾನವನ್ನು ಮುಕ್ತಾಯಗೊಳಿಸಿದರು.

  ಕನ್ಯಾಕುಮಾರಿ :  ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಮಧ್ಯಾಹ್ನ 3 ಗಂಟೆಗೆ ಇಲ್ಲಿನ ವಿವೇಕಾನಂದ ರಾಕ್ ಸ್ಮಾರಕದಲ್ಲಿ ಹಮ್ಮಿಕೊಂಡಿದ್ದ ತಮ್ಮ 45 ಗಂಟೆಗಳ ಸುದೀರ್ಘ ಧ್ಯಾನವನ್ನು ಮುಕ್ತಾಯಗೊಳಿಸಿದರು.

ತಮ್ಮ ಧ್ಯಾನದ ಮುಕ್ತಾಯದ ಬಳಿಕ ಮೋದಿ, ಬಿಳಿ ಬಟ್ಟೆ ಧರಿಸಿ, ರಾಕ್ ಸ್ಮಾರಕದ ಪಕ್ಕದಲ್ಲಿರುವ 133 ಅಡಿ ತಿರುವಳ್ಳುವರ್ ಪ್ರತಿಮೆಗೆ ಭೇಟಿ ನೀಡಿದರು ಮತ್ತು ಅಲ್ಲಿ ಅವರ ಗೌರವಾರ್ಥವಾಗಿ ಬೃಹತ್ ಹಾರ ಹಾಕಿ ನಮನ ಸಲ್ಲಿಸಿದರು. ಪ್ರತಿಮೆಗೆ ಪುಷ್ಪನಮನ ಸಲ್ಲಿಸಲು ದೋಣಿ ಸೇವೆ ಬಳಿಸಿದರು.

ತಮ್ಮ 3 ದಿನಗಳ ಜಪತಪದ ಸಮಯದಲ್ಲಿ, ಪ್ರಧಾನಮಂತ್ರಿಯವರು ಧ್ಯಾನ ಮಾಡಿದರು ಮತ್ತು ಸೂರ್ಯೋದಯದ ಸಮಯದಲ್ಲಿ ‘ಸೂರ್ಯ ಅರ್ಘ್ಯ’ವನ್ನು ಸಮರ್ಪಿಸಿದರು. ವಿವೇಕಾನಂದ ರಾಕ್ ಸ್ಮಾರಕದಲ್ಲಿ ಧ್ಯಾನದಲ್ಲಿ ನಿರತರಾಗಿದ್ದ ಮೋದಿ ಕೇಸರಿ ಬಟ್ಟೆ ಧರಿಸಿದ್ದರು.

ಕನ್ಯಾಕುಮಾರಿಯು ಸೂರ್ಯೋದಯ ಮತ್ತು ಸೂರ್ಯಾಸ್ತಕ್ಕೆ ಹೆಸರುವಾಸಿಯಾಗಿದೆ ಮತ್ತು ಸ್ಮಾರಕವು ತೀರದ ಸಮೀಪವಿರುವ ಒಂದು ಸಣ್ಣ ದ್ವೀಪದಲ್ಲಿದೆ. ಪುರಾಣಗಳ ಪ್ರಕಾರ, ಪಾರ್ವತಿ ದೇವಿಯು ಶಿವನನ್ನು ಕಾಯುತ್ತಿರುವಾಗ ಒಂದೇ ಪಾದದ ಮೇಲೆ ಅದೇ ಸ್ಥಳದಲ್ಲಿ ಧ್ಯಾನ ಮಾಡಿದ್ದಳು. ವಿವೇಕಾನಂದರೂ ಇದೇ ಸ್ಥಳದಲ್ಲಿ ಧ್ಯಾನ ಮಾಡಿದ್ದರು.

ವಿವೇಕಾನಂದ ರಾಕ್ ಸ್ಮಾರಕದಲ್ಲಿ, ಮೋದಿ ಮೇ 30ಕ್ಕೆ 7ನೇ ಹಂತದ ಚುನಾವಣಾ ಪ್ರಚಾರ ಅಂತ್ಯಗೊಂಡ ಬಳಿಕ ಸಂಜೆ 6 ಗಂಟೆಗೆ ಧ್ಯಾನ ಆರಂಭಿಸಿದ್ದರು.