ಸಾರಾಂಶ
ನವದೆಹಲಿ : ರಾಹುಲ್ ಗಾಂಧಿ ರಾಜೀನಾಮೆಯಿಂದ ತೆರವಾಗಿ ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಅಭ್ಯರ್ಥಿಯಾಗಿ ಪ್ರಿಯಾಂಕಾ ಗಾಂಧಿ ಅ.23ರ ಬುಧವಾರ ನಾಮಪತ್ರ ಸಲ್ಲಿಸಲಿದ್ದಾರೆ.
ಈ ವೇಳೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಹಿರಿಯ ನಾಯಕರು ಮತ್ತು ಮೈತ್ರಿ ಪಕ್ಷದ ನಾಯಕರು ಉಪಸ್ಥಿತರಿರಲಿದ್ದಾರೆ. ವಯನಾಡಲ್ಲಿ ನ.13ರಂದು ಮತದಾನ ನಡೆಯಲಿದ್ದು, ನ.23ಕ್ಕೆ ಫಲಿತಾಂಶ ಪ್ರಕಟವಾಗಲಿದೆ.
ನಾಮಪತ್ರಕ್ಕೂ ಮುನ್ನ ಪ್ರಿಯಾಂಕಾ ಮತ್ತು ರಾಹುಲ್ ಅವರು ಕಲ್ಬೆಟ್ಟಾ ಬಸ್ನಿಲ್ದಾಣದಿಂದ ಬೆಳಿಗ್ಗೆ 11ಕ್ಕೆ ರೋಡ್ಶೋ ನಡೆಸಿದ ಬಳಿಕ ಮಧ್ಯಾಹ್ನ 12ಕ್ಕೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಜಿಲ್ಲಾಧಿಕಾರಿ ಮುಂದೆ ಅಧಿಕೃತವಾಗಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.
ಇದು ಪ್ರಿಯಾಂಕಾ ಅವರ ಮೊದಲ ಸಕ್ರಿಯ ರಾಜಕೀಯ ಪ್ರವೇಶವಾಗಿದ್ದು, ಒಂದು ವೇಳೆ ಅವರು ಆಯ್ಕೆಯಾದರೆ ಅವರ ಕುಟುಂಬದ ಮೂವರು ಸದಸ್ಯರು ಏಕಕಾಲಕ್ಕೆ ಸಂಸತ್ ಪ್ರವೇಶ ಮಾಡಿದಂತೆ ಆಗಲಿದೆ. ಸೋನಿಯಾ ಈಗಾಗಲೇ ರಾಜಸ್ಥಾನದಿಂದ ರಾಜ್ಯಸಭೆ ಪ್ರವೇಶಿಸಿದ್ದರೆ, ರಾಹುಲ್ ರಾಯ್ಬರೇಲಿಯಿಂದ ಲೋಕಸಭೆ ಪ್ರವೇಶಿಸಿದ್ದಾರೆ.
ಪ್ರಿಯಾಂಕಾ ವಿರುದ್ಧ ಬಿಜೆಪಿ ನವ್ಯಾ ಹರಿದಾಸ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ.