ಸಾರಾಂಶ
ನವದೆಹಲಿ: ಭಾರತೀಯರನ್ನು ಅವರ ಚರ್ಮದ ಬಣ್ಣದಿಂದ ಅಳೆಯುವುದೂ ಸೇರಿದಂತೆ ಆಗ್ಗಿಂದಾಗ್ಗೆ ವಿವಾದಿತ ಹೇಳಿಕೆಗಳಿಂದ ಸುದ್ದಿಯಲ್ಲಿರುವ ರಾಹುಲ್ ಗಾಂಧಿ ಆಪ್ತ ಸ್ಯಾಮ್ ಪಿತ್ರೋಡಾ ಮತ್ತೆ ಅಂಥದ್ದೇ ಹೇಳಿಕೆಯೊಂದನ್ನು ನೀಡಿದ್ದಾರೆ. ಈಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
‘ವಿದೇಶಗಳಿಂದ ವಲಸಿಗರು ಅಕ್ರಮವಾಗಿ ಬೇಕಾದರೂ ಬಂದು ಭಾರತದಲ್ಲಿ ನೆಲೆಸಲಿ. ನಾವು ಎಲ್ಲರನ್ನೂ ಒಳಗೊಂಡಿರಬೇಕು. ಇದರಿಂದ ಕೊಂಚ ತೊಂದರೆ ಅನುಭವಿಸಬೇಕಾಗಿ ಬಂದರೂ ತೊಂದರೆಯಿಲ್ಲ, ಸಹಿಸಿಕೊಳ್ಳುವ’ ಎಂದ ಪಿತ್ರೋಡಾ, ಗಡಿಯಲ್ಲಿ ಒಳನುಸುಳುಕೋರರನ್ನು ತಡೆಯುವ ಕೇಂದ್ರ ಸರ್ಕಾರದ ಯತ್ನವನ್ನು ಟೀಕಿಸಿದ್ದಾರೆ. ಸರ್ಕಾರವು ಸಾರ್ವಜನಿಕರ ಮೇಲೆ ಪ್ರಭಾವ ಬೀರುವ ಜಾಗತಿಕ ತಾಪಮಾನ ಹೆಚ್ಚಳದಂತಹ ಸಮಸ್ಯೆಗಳತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದ್ದಾರೆ.
ಪಿತ್ರೋಡಾರ ಹೇಳಿಕೆಯನ್ನು ಅತಿರೇಕ ಎಂದು ಕರೆದಿರುವ ಬಿಜೆಪಿಯ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ, ‘ಕಳೆದ 70 ವರ್ಷಗಳಿಂದ ಕಾಂಗ್ರೆಸ್ ಅಕ್ರಮ ವಲಸಿಗರಿಗೆ ನೆಲೆ ಒದಗಿಸಲು ಹೇಗೆ ಕೆಲಸ ಮಾಡಿತೆಂದು ತಿಳಿಯುತ್ತಿದೆ’ ಎಂದರು.