ಸಾರಾಂಶ
ಶಿವಸೇನೆ ಶಾಸಕ ಸಂಜಯ್ ಗಾಯಕ್ವಾಡ್ ಇದೀಗ ಕರ್ನಾಟಕದ ಶೆಟ್ಟಿ ಸಮುದಾಯ ಮತ್ತು ದಕ್ಷಿಣ ಭಾರತೀಯರ ವಿರುದ್ಧ ಕೀಳು ಹೇಳಿಕೆ ನೀಡಿದ್ದಾರೆ. ಶೆಟ್ಟಿಗಳಿಗೇಕೆ ಮುಂಬೈನಲ್ಲಿ ಆಹಾರ ಪೂರೈಸುವ ಗುತ್ತಿಗೆ ನೀಡುತ್ತೀರಿ. ಅದನ್ನು ಮರಾಠಿಗರಿಗೆ ನೀಡಿ ಎಂದು ಹೇಳಿದ್ದಾರೆ.
ಮುಂಬೈ: ಹಳಸಿದ್ದ ಆಹಾರ ಕೊಟ್ಟಿದ್ದಾರೆ ಎನ್ನುವ ಕಾರಣಕ್ಕೆ ಕ್ಯಾಂಟಿನ್ ಸಿಬ್ಬಂದಿ ಮೇಲೆ ಗೂಂಡಾಗಿರಿ ನಡೆಸಿದ್ದ ಮಹಾ ರಾಷ್ಟ್ರ ಶಿವಸೇನೆ ಶಾಸಕ ಸಂಜಯ್ ಗಾಯಕ್ವಾಡ್ ಇದೀಗ ಕರ್ನಾಟಕದ ಶೆಟ್ಟಿ ಸಮುದಾಯ ಮತ್ತು ದಕ್ಷಿಣ ಭಾರತೀಯರ ವಿರುದ್ಧ ಕೀಳು ಹೇಳಿಕೆ ನೀಡಿದ್ದಾರೆ.
ಶೆಟ್ಟಿಗಳಿಗೇಕೆ ಮುಂಬೈನಲ್ಲಿ ಆಹಾರ ಪೂರೈಸುವ ಗುತ್ತಿಗೆ ನೀಡುತ್ತೀರಿ. ಅದನ್ನು ಮರಾಠಿಗರಿಗೆ ನೀಡಿ ಎಂದು ಹೇಳಿದ್ದಾರೆ.
ಕ್ಯಾಂಟೀನ್ ಸಿಬ್ಬಂದಿ ಹಲ್ಲೆ ಪ್ರಕರಣ ಟೀವಿ ವಾಹಿನಿಯೊಂದರ ಜೊತೆ ಮಾತನಾಡಿದ ಗಾಯಕ್ವಾಡ್, ‘ದಕ್ಷಿಣ ಭಾರತೀಯರು ಇಲ್ಲಿ ಡಾನ್ಸ್ ಬಾರ್, ಲೇಡಿಸ್ ಬಾರ್ ನಡೆಸುವ ಮೂಲಕ ಮಹಾರಾಷ್ಟ್ರದ ಸಂಸ್ಕೃತಿಯನ್ನು ಹಾಳುಗೆಡವಿದ್ದಾರೆ. ಅವರು ನಮ್ಮ ಮಕ್ಕಳನ್ನೆಲ್ಲಾ ಹಾಳು ಮಾಡಿದ್ದಾರೆ. ಅವರು ನಮಗೆ ಹೇಗೆ ಗುಣಮಟ್ಟದ ಆಹಾರ ಪೂರೈಸಲು ಸಾಧ್ಯ. ಶೆಟ್ಟಿ ಎಂಬ ಗುತ್ತಿಗೆದಾರನಿಗೆ ಇಲ್ಲಿ ಆಹಾರ ಪೂರೈಸುವ ಗುತ್ತಿಗೆ ನೀಡಿದ್ದಾದರೂ ಏಕೆ? ಅದರ ಬದಲು ಅದನ್ನು ಸ್ಥಳೀಯ ಮರಾಠಿ ಗುತ್ತಿಗೆದಾರನಿಗೆ ನೀಡಿ. ಅವನಿಗೆ ನಾವು ಏನು ತಿನ್ನುತ್ತೇವೆ ಎಂಬುದು ಗೊತ್ತಿರುತ್ತದೆ. ಆತ ಗುಣಮಟ್ಟದ ಆಹಾರ ಪೂರೈಸುತ್ತಾನೆ’ ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ಕ್ಯಾಂಟಿನ್ ಸಿಬ್ಬಂದಿ ಮೇಲಿನ ಹಲ್ಲೆಗೆ ಭಾರೀ ಆಕ್ರೋಶ ವ್ಯಕ್ತವಾಗಿದ್ದರೂ ಕ್ಷಮೆ ಯಾಚನೆ ಬದಲು, ನಾನು ಮಾಡಿದ್ದು ಸರಿಯಾಗಿದೆ. ಮಾರ್ಗ ಸರಿಯಲ್ಲದಿರಬಹುದು. ಆದರೆ ಅದು ಅಗತ್ಯವಾಗಿತ್ತು. ಅಗತ್ಯಬಿದ್ದರೆ ಇನ್ನೊಮ್ಮೆ ಕಪಾಳಮೋಕ್ಷ ಮಾಡುತ್ತೀನಿ ಎಂದು ಗಾಯಕ್ವಾಡ್ ಹೇಳಿದ್ದಾರೆ.ವಿವಾದ ಹೊಸದೇನಲ್ಲ:
ಗಾಯಕ್ವಾಡ್ ಈ ರೀತಿಯ ಹೇಳಿಕೆ ನೀಡುತ್ತಿರುವುದು ಇದೇ ಮೊದಲೇನಲ್ಲ. ಹಿಂದೆಯೂ ಮಾತಿನಿಂದ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದರು. ಈ ವರ್ಷದ ಜನವರಿಯಲ್ಲಿ ಮತದಾರರನ್ನು ವೇಶ್ಯೆಗೆ ಹೋಲಿಸಿದ್ದರು. ಜನರು ಮತ ಮಾರಿಕೊಳ್ಳುತ್ತಿದ್ದಾರೆ. ಹಾಗೆ ಮಾರಾಟವಾಗುವ ಮತದಾರರು ವೇಶ್ಯೆಯರಿಗಿಂತ ಕೆಟ್ಟವರು ಎಂದಿದ್ದರು. ಅದಕ್ಕೂ ಮುನ್ನ ಕಳೆದ ಸೆಪ್ಟೆಂಬರ್ನಲ್ಲಿ ರಾಹುಲ್ ಗಾಂಧಿಯನಾಲಿಗೆಯನ್ನು ಕತ್ತರಿಸಿದವರಿಗೆ 11 ಲಕ್ಷ ರು. ಬಹುಮಾನ ನೀಡುವುದಾಗಿ ಘೋಷಿಸಿ ಸುದ್ದಿಯಾಗಿದ್ದರು.
ಮುಂಬೈನಲ್ಲಿ ಕ್ಯಾಂಟಿನ್ ಗುತ್ತಿಗೆ ಮರಾಠಿಗರಿಗೆ ಮಾತ್ರ ನೀಡಿ
ದಕ್ಷಿಣ ಭಾರತೀಯರು ಮುಂಬೈನಲ್ಲಿ ಡಾನ್ಸ್ ಬಾರ್ ನಡೆಸ್ತಾರೆ
ಅವರಿಂದಾಗಿ ಮಹಾರಾಷ್ಟ್ರದ ಸಂಸ್ಕೃತಿಗೆ ಹಾನಿಯಾಗಿದೆ
ವಿವಾದಿತ ಶಾಸಕನಿಂದ ಮತ್ತೊಂದು ವಿವಾದಾತ್ಮಕ ಹೇಳಿಕೆ