ಸತ್ಯ ಸಾಯಿಬಾಬಾ ಬೋಧನೆ ಕೋಟ್ಯಂತರ ಭಕ್ತರಿಗೆ ದಾರಿದೀಪ: ಮೋದಿ

| Published : Nov 20 2025, 12:30 AM IST

ಸಾರಾಂಶ

ಶ್ರೀ ಸತ್ಯಸಾಯಿ ಬಾಬಾ ಅವರ ಶತಮಾನೋತ್ಸವದ ಆಚರಣೆ ಕೇವಲ ಹಬ್ಬವಲ್ಲ, ಇದೊಂದು ದೈವಿಕ ವರದಾನ. ಸಾಯಿಬಾಬಾ ಭೌತಿಕವಾಗಿ ನಮ್ಮ ನಡುವೆ ಇಲ್ಲದಿದ್ದರೂ, ಅವರ ಪ್ರೀತಿ ಮತ್ತು ಸೇವಾ ಮನೋಭಾವ ಕೋಟ್ಯಂತರ ಜನರಿಗೆ ಮಾರ್ಗದರ್ಶಕ ಶಕ್ತಿಗಳಾಗಿವೆ. ಜಗತ್ತಿನ 140 ದೇಶಗಳಲ್ಲಿ, ಲಕ್ಷಾಂತರ ಭಕ್ತರು ಅವರಿಂದ ಹೊಸ ಬೆಳಕು ಮತ್ತು ನಿರ್ದೇಶನವನ್ನು ಪಡೆದು ಮುಂದುವರಿಯುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

-ಬಾಬಾ ಭೌತಿಕವಾಗಿ ಅಗಲಿದರೂ, ಅವರ ಪ್ರೀತಿ, ಸೇವೆ ಜೀವಂತ: ಪ್ರಧಾನಿ-ಜನ್ಮಶತಮಾನೋತ್ಸವ ಸ್ಮರಣಾರ್ಥ ₹100 ನಾಣ್ಯ, ಅಂಚೆಚೀಟಿ ಬಿಡುಗಡೆ-ಪುಟ್ಟಪರ್ತಿಯ ಬಾಬಾ ಮಹಾಸಮಾಧಿಗೆ ತೆರಳಿ ಆಶೀರ್ವಾದ ಪಡೆದ ಮೋದಿಪಿಟಿಐ ಪುಟ್ಟಪರ್ತಿ (ಆಂಧ್ರಪ್ರದೇಶ)

ಶ್ರೀ ಸತ್ಯಸಾಯಿ ಬಾಬಾ ಅವರ ಶತಮಾನೋತ್ಸವದ ಆಚರಣೆ ಕೇವಲ ಹಬ್ಬವಲ್ಲ, ಇದೊಂದು ದೈವಿಕ ವರದಾನ. ಸಾಯಿಬಾಬಾ ಭೌತಿಕವಾಗಿ ನಮ್ಮ ನಡುವೆ ಇಲ್ಲದಿದ್ದರೂ, ಅವರ ಪ್ರೀತಿ ಮತ್ತು ಸೇವಾ ಮನೋಭಾವ ಕೋಟ್ಯಂತರ ಜನರಿಗೆ ಮಾರ್ಗದರ್ಶಕ ಶಕ್ತಿಗಳಾಗಿವೆ. ಜಗತ್ತಿನ 140 ದೇಶಗಳಲ್ಲಿ, ಲಕ್ಷಾಂತರ ಭಕ್ತರು ಅವರಿಂದ ಹೊಸ ಬೆಳಕು ಮತ್ತು ನಿರ್ದೇಶನವನ್ನು ಪಡೆದು ಮುಂದುವರಿಯುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಬುಧವಾರ ಪುಟ್ಟಪರ್ತಿಯಲ್ಲಿ ನಡೆದ ಶ್ರೀ ಸತ್ಯಸಾಯಿ ಬಾಬಾ ಅವರ ಜನ್ಮಶತಮಾನೋತ್ಸವದಲ್ಲಿ ಅವರು ಮಾತನಾಡಿದರು.‘ಭಾರತೀಯ ನಾಗರಿಕತೆಯ ಬಹುಮುಖ್ಯವಾದ ಮೌಲ್ಯವೆಂದರೆ ಸೇವೆ. ವ್ಯಕ್ತಿಯೊಬ್ಬ ಭಕ್ತಿ, ಜ್ಞಾನ ಅಥವಾ ಕರ್ಮ- ಈ ಯಾವುದೇ ಹಾದಿಯಲ್ಲಿ ನಡೆದರು ಸಹ ನಮ್ಮ ಎಲ್ಲಾ ವೈವಿಧ್ಯಮಯ ಆಧ್ಯಾತ್ಮಿಕ ಮತ್ತು ತಾತ್ವಿಕ ಸಂಪ್ರದಾಯಗಳು ಅಂತಿಮವಾಗಿ ಈ ಕಲ್ಪನೆಗೆ ಕೊಂಡೊಯ್ಯುತ್ತವೆ. ಆಧ್ಯಾತ್ಮಿಕ ಗುರು ಶ್ರೀ ಸತ್ಯಸಾಯಿ ಬಾಬಾ ಅವರ ಬೋಧನೆ ಮತ್ತು ಸೇವೆ ಲಕ್ಷಾಂತರ ಭಕ್ತರಿಗೆ ಸದಾ ಮಾರ್ಗದರ್ಶನ ನೀಡುತ್ತವೆ’ ಎಂದರು. ಇದೇ ವೇಳೆ ಸತ್ಯಸಾಯಿ ಬಾಬಾ ಅವರ ಮಹಾಸಮಾಧಿಗೂ ತೆರಳಿ ಪ್ರಧಾನಿ ಮೋದಿ ಆಶೀರ್ವಾದ ಪಡೆದರು. ನಾಣ್ಯ, ಅಂಚೆಚೀಟಿ ಬಿಡುಗಡೆ: ಶ್ರೀ ಸತ್ಯಸಾಯಿ ಬಾಬಾ ಅವರ ಜನ್ಮ ಶತಮಾನೋತ್ಸವದ ಸ್ಮರಣಾರ್ಥ 100 ರು. ನಾಣ್ಯ ಮತ್ತು ಅಂಚೆಚೀಟಿಗಳನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಉಪಮುಖ್ಯಮಂತ್ರಿ ಪವನ್ ಕಲ್ಯಾಣ್, ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್, ನಟಿ ಐಶ್ವರ್ಯ ರೈ ಬಚ್ಚನ್, ಕೇಂದ್ರ ಸಚಿವರಾದ ಜಿ. ಕಿಶನ್ ರೆಡ್ಡಿ ಮತ್ತು ಕೆ ರಾಮ್ ಮೋಹನ್ ನಾಯ್ಡು ಮೊದಲಾದವರು ಉಪಸ್ಥಿತರಿದ್ದರು.

==

ಇರುವುದು ಒಂದೇ ಜಾತಿ, ಮಾನವ ಜಾತಿ: ಐಶ್ವರ್ಯ ರೈ

- ಎಲ್ಲರೂ ಪ್ರೀತಿಯನ್ನು ಹರಡಿ: ನಟಿ ಕರೆ

ಪುಟ್ಟಪರ್ತಿ: ಬುಧವಾರ ಪುಟ್ಟಪರ್ತಿಯಲ್ಲಿ ನಡೆದ ಶ್ರೀ ಸತ್ಯಸಾಯಿ ಬಾಬಾ ಅವರ ಜನ್ಮ ಶತಮಾನೋತ್ಸವದಲ್ಲಿ ಮಾತನಾಡಿದ ನಟಿ ಐಶ್ವರ್ಯ ರೈ, ‘ಇರುವುದು ಒಂದೇ ಜಾತಿ. ಅದು ಮಾನವ ಜಾತಿ. ಎಲ್ಲರೂ ಪ್ರೀತಿ ಹರಡಬೇಕು’ ಎಂದು ಕರೆ ನೀಡಿದರು.ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಮಾತನಾಡಿದ ಅವರು, ‘ಬಾಬಾ ಯಾವಾಗಲೂ ‘ಐದು ಡಿ’ ಗಳನ್ನು ಅನುಸರಿಸುತ್ತಿದ್ದರು.ಅವು- ‘ಶಿಸ್ತು, ಸಮರ್ಪಣೆ, ಭಕ್ತಿ, ದೃಢನಿಶ್ಚಯ ಮತ್ತು ತಾರತಮ್ಯ ವಿರೋಧಿ ನೀತಿ (Discipline, Dedication, Devotion, Determination. Discrimination). ಎಲ್ಲರೂ ಪ್ರೀತಿಯನ್ನು ಹರಡಬೇಕು. ಇರುವುದು ಒಂದೇ ಜಾತಿ, ಮಾನವೀಯತೆಯ ಜಾತಿ. ಇರುವುದು ಒಂದೇ ಧರ್ಮ, ಪ್ರೀತಿಯ ಧರ್ಮ. ಇರುವುದು ಒಂದೇ ಭಾಷೆ, ಹೃದಯದ ಭಾಷೆ, ಮತ್ತು ಇರುವುದು ಒಂದೇ ದೇವರು, ಮತ್ತು ಅವನು ಸರ್ವವ್ಯಾಪಿ. ಎಲ್ಲರೂ ಪ್ರೀತಿ ಹರಡಬೇಕು’ ಎಂದು ಮನವಿ ಮಾಡಿದರು.

==

ಮೋದಿ ಪಾದ ಮುಟ್ಟಿ ನಮಸ್ಕರಿಸಿದ ಐಶ್ವರ್ಯ!

ಪುಟ್ಟಪರ್ತಿ ಸತ್ಯಸಾಯಿಬಾಬಾ ಜನ್ಮಶತಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದ ನಟಿ ಐಶ್ವರ್ಯ ರೈ ಪ್ರಧಾನಿ ನರೇಂದ್ರ ಮೋದಿ ಅವರ ಪಾದ ಮುಟ್ಟಿ ನಮಸ್ಕರಿಸಿ ಗಮನ ಸೆಳೆದರು. ಈ ವೇಳೆ ಅವರು ಮಾತನಾಡಿ ‘ನಿಮ್ಮ ಉಪಸ್ಥಿತಿಯು ಶತಮಾನೋತ್ಸವ ಆಚರಣೆಗೆ ಪಾವಿತ್ರ್ಯ ಮತ್ತು ಸ್ಫೂರ್ತಿ ನೀಡುತ್ತದೆ, ನಾಯಕರು ಸಲ್ಲಿಸುವ ಸೇವೆಯು ದೇವರ ಸೇವೆ ಎಂಬ ಬಾಬಾ ಸಂದೇಶ ನೆನಪಿಸುತ್ತದೆ’ ಎಂದು ಶ್ಲಾಘಿಸಿದರು.

==

2011ರ ವಿಶ್ವಕಪ್‌ ಗೆಲ್ಲಲು ಬಾಬಾ ಪ್ರೇರಣೆ: ಸಚಿನ್‌ ತೆಂಡುಲ್ಕರ್‌

- ಅವರು ಕಳಿಸಿದ್ದ ಪುಸ್ತಕ ದಾರಿದೀಪವಾಯಿತು

ಪುಟ್ಟಪರ್ತಿ: ಆಧ್ಯಾತ್ಮಿಕ ಗುರು ಸತ್ಯ ಸಾಯಿಬಾಬಾ ಅವರ ಜನ್ಮಶತಮಾನೋತ್ಸವದಲ್ಲಿ ಪಾಲ್ಗೊಂಡ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್, ‘ಭಾರತ 2011ರ ವಿಶ್ವಕಪ್‌ ಕ್ರಿಕೆಟ್‌ ಗೆಲ್ಲಲು ಸತ್ಯಸಾಯಿ ಬಾಬಾ ಪ್ರೇರಣೆ ನೀಡಿದ್ದರು’ ಎಂದು ಸ್ಮರಿಸಿದರು.

ಸಮಾರಂಭದಲ್ಲಿ ಮಾತನಾಡಿದ ಅವರು, ‘2011 ರಲ್ಲಿ, ಅನೇಕ ವಿಶ್ವಕಪ್‌ಗಳನ್ನು ಆಡಿದ ನಂತರ, ಅದು ನನ್ನ ಕೊನೆಯ ವಿಶ್ವಕಪ್ ಎಂದು ನನಗೆ ತಿಳಿದಿತ್ತು. ನಾವು ಬೆಂಗಳೂರಿನಲ್ಲಿ ಒಂದು ಶಿಬಿರ ನಡೆಸುತ್ತಿದ್ದೆವು. ಆಗ ಬಾಬಾ ಅವರು ಪುಸ್ತಕವನ್ನು ನಿಮಗೆ ಕಳುಹಿಸಿದ್ದಾರೆ ಎಂದು ನನಗೆ ಫೋನ್ ಕರೆ ಬಂದಿತು. ಅದು ನನ್ನ ಮುಖದಲ್ಲಿ ನಗು ತರಿಸಿತು. ಈ ವಿಶ್ವಕಪ್ ನಮಗೆ ವಿಶೇಷವಾದದ್ದು ಎಂದು ನನಗೆ ತಿಳಿದಿತ್ತು. ಅದು ನನಗೆ ಆ ಆತ್ಮವಿಶ್ವಾಸ, ಆಂತರಿಕ ಶಕ್ತಿ ನೀಡಿತು. ಆ ಪುಸ್ತಕ ನನ್ನ ನಿರಂತರ ಒಡನಾಡಿಯಾಯಿತು. ಭಾರತ ಮುಂಬೈನಲ್ಲಿ ಶ್ರೀಲಂಕಾ ವಿರುದ್ಧ ಗೆದ್ದು ಟ್ರೋಫಿ ಎತ್ತಿ ಹಿಡಿಯಿತು. ಇಡೀ ರಾಷ್ಟ್ರವು ಸಂಭ್ರಮಿಸಿತು. ಅದು ನನ್ನ ಕ್ರಿಕೆಟ್ ಜೀವನದ ಸುವರ್ಣ ಕ್ಷಣವಾಗಿತ್ತು. ಅಂಥ ಆನಂದವನ್ನು ನಾನು ಎಂದೂ ಅನುಭವಿಸಿರಲಿಲ್ಲ. ಬಾಬಾ ಅವರ ಆಶೀರ್ವಾದದಿಂದ ಮಾತ್ರ ಸಾಧ್ಯವಾಯಿತು’ ಎಂದರು.