ಸಾರಾಂಶ
‘ಯಾವುದೇ ದೇಶ ನೂರಕ್ಕೆ ನೂರು ಗುಪ್ತಚರ ಭದ್ರತೆಯನ್ನು ಹೊಂದಿರಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.
ತಿರುವನಂತಪುರಂ: ‘ಯಾವುದೇ ದೇಶ ನೂರಕ್ಕೆ ನೂರು ಗುಪ್ತಚರ ಭದ್ರತೆಯನ್ನು ಹೊಂದಿರಲು ಸಾಧ್ಯವಿಲ್ಲ. ಪಹಲ್ಗಾಂ ದಾಳಿಯಲ್ಲಿ ಗುಪ್ತಚರ ವೈಫಲ್ಯವಾಗಿರುವುದು ಹೌದಾದರೂ, ಅದಕ್ಕೆ ಕೇಂದ್ರ ಸರ್ಕಾರವನ್ನು ಹೊಣೆಗಾರನನ್ನಾಗಿಸುವುದಕ್ಕಿಂತ ಪ್ರಸ್ತುತ ಬಿಕ್ಕಟ್ಟನ್ನು ಪರಿಹರಿಸುವತ್ತ ಮೊದಲು ಗಮನಹರಿಸಬೇಕು’ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.
ಈ ಮೂಲಕ ಘಟನೆ ಖಂಡಿಸುವ ಬದಲು, ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕಾಂಗ್ರೆಸ್ ಸೇರಿದಂತೆ ವಿಪಕ್ಷ ನಾಯಕರ ಹೇಳಿಕೆಗೆ ಟಾಂಗ್ ನೀಡಿದ್ದಾರೆ. ಜೊತೆಗೆ ‘ಉರಿ ದಾಳಿಯ ನಂತರ, ಸರ್ಕಾರ ಗಡಿಯಾಚೆ ಸರ್ಜಿಕಲ್ ಸ್ಟ್ರೈಕ್ ನಡೆಸಿತು. ಪುಲ್ವಾಮಾ ನಂತರ ಬಾಲಕೋಟ್ ವಾಯುದಾಳಿ ನಡೆಯಿತು. ಇಂದು, ನಾವು ಅದಕ್ಕಿಂತ ಹೆಚ್ಚಿನದನ್ನು ನೋಡಲಿದ್ದೇವೆ. ನಮಗೆ ಹಲವಾರು ಆಯ್ಕೆಗಳಿವೆ. ರಾಜತಾಂತ್ರಿಕ, ಆರ್ಥಿಕ, ಗುಪ್ತಚರ ಹಂಚಿಕೆ, ರಹಸ್ಯ ಮತ್ತು ಬಹಿರಂಗ ಕ್ರಮಗಳಿವೆ. ಆದರೆ ಈಗ ಮಿಲಿಟರಿ ಪ್ರತಿಕ್ರಿಯೆ ಅನಿವಾರ್ಯ’ ಎಂದರು.
ಇದೇ ವೇಳೆ, ಭಾರತ ಪಾಕಿಸ್ತಾನಕ್ಕೆ ಸಿಂಧೂ ನದಿ ನೀರನ್ನು ಹರಿಯಬಿಡದಿದ್ದರೆ ನದಿಯಲ್ಲಿ ಭಾರತೀಯರ ರಕ್ತ ಹರಿಯುತ್ತದೆ ಎಂದು ಹೇಳಿದ್ದ ಪಾಕಿಸ್ತಾನ ಪೀಪಲ್ಸ್ ಪಕ್ಷದ ಮುಖ್ಯಸ್ಥ ಬಿಲಾವಲ್ ಭುಟ್ಟೋ ಹೇಳಿಕೆಗೆ ತಿರುಗೇಟು ನೀಡಿದ ಅವರು, ‘ಭುಟ್ಟೋರದ್ದು ಕೇವಲ ಉದ್ರೇಕಕಾರಿ ಮಾತು. ಪಾಕಿಸ್ತಾನಿಗಳು ಭಾರತೀಯರನ್ನು ನಿರ್ಭಯವಾಗಿ ಕೊಲ್ಲಲು ಸಾಧ್ಯವಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ನಾವು ಪಾಕಿಸ್ತಾನಿಗಳಿಗೆ ಏನನ್ನೂ ಮಾಡಲು ಬಯಸುವುದಿಲ್ಲ. ಆದರೆ ಅವರು ನಮಗೆ ಏನಾದರೂ ಮಾಡಿದರೆ, ಪ್ರತಿಕ್ರಿಯೆಗೆ ಸಿದ್ಧರಾಗಿರಿ. ರಕ್ತ ಹರಿಯುವುದಾದರೆ, ಅದು ನಮ್ಮದಕ್ಕಿಂತ ನಿಮ್ಮದೇ ಹೆಚ್ಚು ಹರಿಯುತ್ತದೆ’ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.