ಸಿದ್ದರಾಮಯ್ಯ ಅವರ ವಿರುದ್ಧ ಕೆಲವರು ಸಂಚು : ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟವರಿಗೆ ಸಚಿವ ಮಹದೇವಪ್ಪ ಗುಡುಗು

| Published : Sep 29 2024, 01:37 AM IST / Updated: Sep 29 2024, 05:05 AM IST

HC Mahadevappa
ಸಿದ್ದರಾಮಯ್ಯ ಅವರ ವಿರುದ್ಧ ಕೆಲವರು ಸಂಚು : ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟವರಿಗೆ ಸಚಿವ ಮಹದೇವಪ್ಪ ಗುಡುಗು
Share this Article
  • FB
  • TW
  • Linkdin
  • Email

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕೆಲವರು ಸಂಚು ನಡೆಸುತ್ತಿದ್ದಾರೆ, ಅವರ ಆಸೆ ಯಾವತ್ತೂ ಈಡೇರುವುದಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.

 ಮೈಸೂರು : ಮುಖ್ಯಮಂತ್ರಿ ಕುರ್ಚಿ ಖಾಲಿಯಾಗಲಿ, ನನಗೆ ಅದು ಸಿಗಲಿ ಎಂದು ಕೆಲವರು ಕಾದು ಕೂತಿದ್ದಾರೆ. ಆದರೆ ಅವರ ಆಸೆ ಯಾವತ್ತೂ ಈಡೇರುವುದಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.

ಮೈಸೂರು ವಿವಿ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ‘ಗ್ಯಾರಂಟಿ ಯೋಜನೆಗಳು: ಬಡವರ ಸುರಕ್ಷತೆ ಮತ್ತು ಕಲ್ಯಾಣ’ ಎಂಬ ಡಾ.ಡಿ. ಶ್ರೀನಿವಾಸ ಮಣಗಳ್ಳಿ ಅವರ ಸಂಪಾದಿತ ಕೃತಿ ಬಿಡುಗಡೆ ಸಮಾರಂಭದಲ್ಲಿ ಶನಿವಾರ ಮಾತನಾಡಿ ಈ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಮೂಲಕ ಮುಖ್ಯಮಂತ್ರಿ ಗಾದಿ ಮೇಲೆ ಕಣ್ಣಿಟ್ಟವರ ಮೇಲೆ ತೀವ್ರ ಅಸಮಾಧಾನ ಹೊರಹಾಕಿದರು.

ಕೆಲ ಪಟ್ಟಭದ್ರ ಹಿತಾಸಕ್ತಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಂಚು ನಡೆಸುತ್ತಿದ್ದು, ಇದನ್ನು ನಾವೆಲ್ಲರೂ ಒಗ್ಗಟ್ಟಿನಿಂದ ತಡೆಯುವ ಪ್ರಯತ್ನ ಮಾಡಬೇಕಿದೆ. ಅಂಥವರಿಗೆ ತಕ್ಕ ಬುದ್ಧಿ ಕಲಿಸಬೇಕಿದೆ ಎಂದರು.

ಸಿದ್ದರಾಮಯ್ಯ ಅವರು ನೇರ ನಡೆ ನುಡಿಯ ನಿಷ್ಠುರವಾದಿಯಾಗಿದ್ದು, ಅವರು ಅಪ್ಪಟ್ಟ ಚಿನ್ನ. ತಮ್ಮ ವೈಯಕ್ತಿಕ ಜೀವನದ ಕುರಿತು ಯಾವತ್ತೂ ಚಿಂತಿಸಿದವರಲ್ಲ. ಯಾವಾಗಲೂ ಜನಪರ ಕಾರ್ಯಗಳ ಬಗ್ಗೆ ಆಲೋಚನೆ ಮಾಡುತ್ತಾರೆ. ಇಂಥ ಗುಣವುಳ್ಳ ಮುಖ್ಯಮಂತ್ರಿಯನ್ನು ಕಂಡರೆ ಕೆಲವರಿಗೆ ಹೊಟ್ಟೆ ಉರಿ ಎಂದು ಸಚಿವ ಕಿಡಿಕಾರಿದರು.

ಈ ನೆಲದ ಕಾನೂನಿಗೆ ಹಾಗೂ ನಾಡಿನ ಜನರಿಗೆ ಸಿದ್ದರಾಮಯ್ಯ ಯಾರ ಪರವಿದ್ದಾರೆ ಎನ್ನುವುದು ಗೊತ್ತು. ಅವರು ಸಂವಿಧಾನದ ವಿಧೇಯ ವಿದ್ಯಾರ್ಥಿ. ಎಲ್ಲರನ್ನೂ ಸಮಾನತೆಯಿಂದ ಕಾಣುತ್ತಾರೆ. ಕರ್ನಾಟಕದ ಜನರ ಸ್ವಾಭಿಮಾನದ ಬದುಕಿಗೆ ಸಿದ್ದರಾಮಯ್ಯನವರು ಐದು ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿದ್ದಾರೆ. ಅದನ್ನು ಫಲಾನುಭವಿಗಳು ಸದ್ಬಳಕೆ ಮಾಡಿಕೊಳ್ಳಬೇಕು. ಫಲಾನುಭವಿಗಳು ಗ್ಯಾರಂಟಿಗಳ ವಿರುದ್ಧ ಮಾತನಾಡಿದಾಗ ಸುಮ್ಮನೆ ಕೂರಬೇಡಿ, ಗಟ್ಟಿ ಧ್ವನಿಯಿಂದ ಹೇಳಿ ಅವರ ಬಾಯ್ಮುಚ್ಚಿಸಿ ಎಂದರು.