ಮಧ್ಯಪ್ರದೇಶದ ಧಾರ್ ಜಿಲ್ಲೆಯ ವಿವಾದಿತ ಭೋಜ್ಶಾಲಾ ಸಂಕೀರ್ಣದಲ್ಲಿ ವಸಂತಿ ಪಂಚಮಿಯಂದು ಪ್ರಾರ್ಥನೆ ವಿಚಾರದಲ್ಲಿ ಎದ್ದಿರುವ ಗೊಂದಲಕ್ಕೆ ಸುಪ್ರೀಂ ಕೋರ್ಟ್ ತೆರೆ ಎಳೆದಿದ್ದು, ಹಿಂದೂ ಮತ್ತು ಮುಸ್ಲಿಂ ಇಬ್ಬರಿಗೂ ಅವಕಾಶ ನೀಡಿದೆ. ಅದಕ್ಕಂತಲೇ ಪ್ರತ್ಯೇಕ ಸಮಯ ನಿಗದಿ ಪಡಿಸಿದೆ.
- ಇಂದು ವಸಂತ ಪಂಚಮಿ, ಶುಕ್ರವಾರದ ಪ್ರಾರ್ಥನೆಗೆ ಅವಕಾಶ
- ಸುಪ್ರೀಂ ಕೋರ್ಟ್ನಿಂದ ಸಾಮರಸ್ಯದ ಆದೇಶ(ವಸಂತ ಪಂಚಮಿಯಂದು ಸಮಾನ ಅವಕಾಶ)
ನವದೆಹಲಿ: ಮಧ್ಯಪ್ರದೇಶದ ಧಾರ್ ಜಿಲ್ಲೆಯ ವಿವಾದಿತ ಭೋಜ್ಶಾಲಾ ಸಂಕೀರ್ಣದಲ್ಲಿ ವಸಂತಿ ಪಂಚಮಿಯಂದು ಪ್ರಾರ್ಥನೆ ವಿಚಾರದಲ್ಲಿ ಎದ್ದಿರುವ ಗೊಂದಲಕ್ಕೆ ಸುಪ್ರೀಂ ಕೋರ್ಟ್ ತೆರೆ ಎಳೆದಿದ್ದು, ಹಿಂದೂ ಮತ್ತು ಮುಸ್ಲಿಂ ಇಬ್ಬರಿಗೂ ಅವಕಾಶ ನೀಡಿದೆ. ಅದಕ್ಕಂತಲೇ ಪ್ರತ್ಯೇಕ ಸಮಯ ನಿಗದಿ ಪಡಿಸಿದೆ.ಈ ವರ್ಷದ ವಸಂತ ಪಂಚಮಿ ಜ.23ರ ಶುಕ್ರವಾರ ಬಂದಿರುವ ಕಾರಣ, ಸಂಕೀರ್ಣದಲ್ಲಿ ತಮಗೆ ಪೂಜೆಗೆ ಅವಕಾಶ ನೀಡಬೇಕೆಂದು ಹಿಂದೂ ಫ್ರಂಟ್ ಫಾರ್ ಜಸ್ಟೀಸ್ ಎಂಬ ಸಂಘಟನೆ ಕೋರ್ಟ್ ಮೊರೆ ಹೋಗಿತ್ತು. ಇದರ ವಿಚಾರಣೆ ನಡೆಸಿದ ಸಿಜೆಐ ಸೂರ್ಯಕಾಂತ್ ಅವರನ್ನೊಳಗೊಂಡ ಪೀಠ, ಎರಡೂ ಸಮುದಾಯಗಳು ಶಾಂತಿಯುತ ಪ್ರಾರ್ಥನೆ ನಡೆಸಬೇಕು, ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದು ಆದೇಶಿಸಿದೆ. ಆ ಪ್ರಕಾರ ಹಿಂದೂಗಳಿಗೆ ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ ಪ್ರಾರ್ಥನೆಗೆ ಅವಕಾಶ ಕಲ್ಪಿಸಿದೆ. ಇದರ ನಡುವೆ, ಮುಸ್ಲಿಮರಿಗೆ ನಮಾಜ್ ಮಾಡುವುದಕ್ಕೆ ಶುಕ್ರವಾರದ ಮಧ್ಯಾಹ್ನ 1 ರಿಂದ 3 ಗಂಟೆಯ ತನಕ ಅನುಮತಿಸಿದೆ. ಏನಿದು ಭೋಜ್ಶಾಲಾ ವಿವಾದ?ಭಾರತೀಯ ಪುರಾತತ್ವ ಇಲಾಖೆಯಿಂದ ಸಂರಕ್ಷಿತವಾದ 11ನೇ ಶತಮಾನದ ಈ ಕಟ್ಟಡವನ್ನು ಹಿಂದೂಗಳು ಸರಸ್ವತಿ ದೇವಾಲಯ ಎಂದು ಕರೆಯುತ್ತಾರೆ. ಮುಸ್ಲಿಮರು ಇದನ್ನು ಕಮಲ್ ಮೌಲಾ ಮಸೀದಿ ಎಂದು ಭಾವಿಸುತ್ತಾರೆ. ಕೋರ್ಟ್ ಆದೇಶಾನುಸಾರ 2003ರಿಂದ ಭೋಜ್ಶಾಲಾ ಸಂಕೀರ್ಣದಲ್ಲಿ ಹಿಂದೂಗಳು ಮಂಗಳವಾರ ಪೂಜೆ ಸಲ್ಲಿಸುತ್ತಾರೆ. ಮುಸ್ಲಿಮರು ಶುಕ್ರವಾರ ನಮಾಜ್ ಮಾಡುತ್ತಾರೆ.