ಸ್ವಚ್ಛ ಭಾರತ್ ಮಿಷನ್ : 21 ನೇ ಶತಮಾನದ ಅತಿದೊಡ್ಡ ಮತ್ತು ಅತ್ಯಂತ ಯಶಸ್ವಿ ಜನರ ಆಂದೋಲನ

| Published : Oct 03 2024, 01:23 AM IST / Updated: Oct 03 2024, 05:26 AM IST

ಸಾರಾಂಶ

ಸ್ವಚ್ಛ ಭಾರತ್ ಮಿಷನ್ ಅನ್ನು 21 ನೇ ಶತಮಾನದ ಅತಿದೊಡ್ಡ ಮತ್ತು ಅತ್ಯಂತ ಯಶಸ್ವಿ ಜನರ ಆಂದೋಲನ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. 

 ನವದೆಹಲಿ : ಸ್ವಚ್ಛ ಭಾರತ್ ಮಿಷನ್ ಅನ್ನು 21 ನೇ ಶತಮಾನದ ಅತಿದೊಡ್ಡ ಮತ್ತು ಅತ್ಯಂತ ಯಶಸ್ವಿ ಜನರ ಆಂದೋಲನ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಶ್ಲಾಘಿಸಿದ್ದಾರೆ ಹಾಗೂ ಇದು ಸಾರ್ವಜನಿಕ ಆರೋಗ್ಯ ಮತ್ತು ಸಮೃದ್ಧಿಯ ಹೊಸ ಮಾರ್ಗ ಎಂದು ಬಣ್ಣಿಸಿದ್ದಾರೆ.

ಬುಧವಾರ ಮಿಷನ್‌ನ 10 ವರ್ಷಗಳ ನೆನಪಿನ ಸಮಾರಂಭದಲ್ಲಿ ಮಾತನಾಡಿದ ಮೋದಿ, ಸಾಮೂಹಿಕ ಭಾಗವಹಿಸುವಿಕೆ ಅಭಿಯಾನವು ಸಮೃದ್ಧಿಯ ಹೊಸ ಮಾರ್ಗವಾಗಿ ಗೋಚರಿಸಿದೆ. ನೀವೆಲ್ಲರೂ ಸ್ವಚ್ಛ ಭಾರತ್ ಮಿಷನ್ ಅನ್ನು ಯಶಸ್ವಿಗೊಳಿಸಿದ್ದೀರಿ ಎಣದು ಹರ್ಷಿಸಿದರು. ಆಂದೋಲನಕ್ಕೆ 10 ವರ್ಷ ಸಂದಿರುವ ಕಾರಣ ಈಗ ‘ಸ್ವಚ್ಛತಾ ಪಾಕ್ಷಿಕ’ ಆರಣಭಿಸಲಾಗಿದ್ದು, 15 ದಿನದಲ್ಲಿ 27 ಲಕ್ಷಕ್ಕೂ ಹೆಚ್ಚು ಕಾರ್ಯಕ್ರಮ ನಡೆದಿವೆ. 28 ಕೋಟಿ ಜನರು ಭಾಗವಹಿಸಿದ್ದಾರೆ ಎಂದು ಶ್ಲಾಘಿಸಿದರು.

‘ಈ ರಾಷ್ಟ್ರೀಯ ಪ್ರಯತ್ನದಲ್ಲಿ ಮುಖ್ಯಮಂತ್ರಿಗಳು, ಸಚಿವರು ಮತ್ತು ಇತರ ಪ್ರತಿನಿಧಿಗಳು ಪ್ರಮುಖ ಪಾತ್ರ ವಹಿಸಿದ್ದಾರೆ. ನಿರಂತರ ಪ್ರಯತ್ನಗಳು ಮಾತ್ರ ಸ್ವಚ್ಛ ಭಾರತಕ್ಕೆ ಕಾರಣವಾಗಬಹುದು’ ಎಂದು ಒತ್ತಿ ಹೇಳಿದರು.

ಈ ಸಂದರ್ಭದಲ್ಲಿ ಪ್ರಧಾನಿಯವರು ಸ್ವಚ್ಛ ಭಾರತ್ ಮತ್ತು ಅಮೃತ್ 2.0 ಮಿಷನ್‌ಗಳ ಅಡಿಯಲ್ಲಿ ಸುಮಾರು 10,000 ಕೋಟಿ ರು.ಗಳ ಯೋಜನೆಗಳನ್ನು ಉದ್ಘಾಟಿಸಿದರು, ಇದರಲ್ಲಿ ಹಲವಾರು ರಾಜ್ಯಗಳಲ್ಲಿ ನೀರು ಮತ್ತು ಒಳಚರಂಡಿ ಸಂಸ್ಕರಣಾ ಘಟಕಗಳು ಸೇರಿವೆ.

‘1,000 ವರ್ಷಗಳ ನಂತರವೂ ಜನರು 21 ನೇ ಶತಮಾನದ ಭಾರತದ ಬಗ್ಗೆ ಮಾತನಾಡುವಾಗ, ಅವರು ಖಂಡಿತವಾಗಿಯೂ ಸ್ವಚ್ಛ ಭಾರತ್ ಮಿಷನ್ ಅನ್ನು ನೆನಪಿಸಿಕೊಳ್ಳುತ್ತಾರೆ. ಆದರೆ ಹಿಂದಿನ ಸರ್ಕಾರಗಳು ಮೂಲಭೂತ ನೈರ್ಮಲ್ಯವನ್ನು ನಿರ್ಲಕ್ಷಿಸಿದ್ದವು. ನೈರ್ಮಲೀಕರಣದ ಪ್ರತಿಪಾದಕರಾಗಿದ್ದ ಮಹಾತ್ಮಾ ಗಾಂಧೀಜಿ ಅವರ ಹೆಸರನ್ನು ಓಟಿಗೆ ಬಳಸಿಕೊಂಡವೇ ವಿನಾ ಅವರ ಆದರ್ಶಗಳನ್ನು ಪಾಲಿಸಲಿಲ್ಲ. ಅವರು ಎಂದಿಗೂ ಕೊಳಕು ಮತ್ತು ಶೌಚಾಲಯದ ಅಭಾವವನ್ನು ರಾಷ್ಟ್ರೀಯ ಸಮಸ್ಯೆಗಳೆಂದು ಪರಿಗಣಿಸಲಿಲ್ಲ.

 ಇದು ಅವರು ತಮ್ಮ ಜೀವನದ ಒಂದು ಭಾಗವನ್ನೇ ಕೊಳಕು ಮಾಡಿಕೊಂಡಂತೆ’ ಎಂದು ಟೀಕಿಸಿದರು.‘ದಶಕದ ಹಿಂದೆ ಶೇ.60ಕ್ಕೂ ಹೆಚ್ಚು ಜನಸಂಖ್ಯೆಯು ಅನಿವಾರ್ಯವಾಗಿ ಬಯಲಿನಲ್ಲಿ ಮಲವಿಸರ್ಜನೆ ಮಾಡುತ್ತಿತ್ತು. ಇದು ದಲಿತರು, ಹಿಂದುಳಿದ ವರ್ಗಗಳು ಮತ್ತು ಬುಡಕಟ್ಟು ಸಮುದಾಯಗಳಿಗೆ ಅವಮಾನ. ಮಹಿಳೆಯರಿಗೆ ಅನಾನುಕೂಲತೆಯ ಪ್ರಮುಖ ಮೂಲ ಇದಾಗಿತ್ತು. 

ಪ್ರಧಾನಿಗಳ ಮೊದಲ ಕೆಲಸ ಶ್ರೀಸಾಮಾನ್ಯನ ಜೀವನವನ್ನು ಸುಲಭಗೊಳಿಸುವುದು. ಹೀಗಾಗಿ ನಾನು ಅಧಿಕಾರಕ್ಕೆ ಬಂದ ನಂತರ ಶೌಚಾಲಯಗಳು ಮತ್ತು ಸ್ಯಾನಿಟರಿ ಪ್ಯಾಡ್‌ಗಳ ಬಗ್ಗೆ ಮಾತನಾಡಿದೆ ಮತ್ತು ಇಂದು ನಾವು ಫಲಿತಾಂಶಗಳನ್ನು ನೋಡುತ್ತಿದ್ದೇವೆ. 10 ವರ್ಷದಲ್ಲಿ 12 ಕೋಟಿ ಶೌಚಾಲಯ ನಿರ್ಮಾಣ ಆಗಿವೆ. ಈ ಹಿಂದೆ ಇದ್ದ ಶೌಚಾಲಯಗಳ ಪ್ರಮಾಣ ಶೇ.40ರಿಂದ ಶೇ.100ರ ಗುರಿ ತಲುಪಿದೆ’ ಎಂದರು.

ತಮ್ಮ ಕ್ರಮಕ್ಕೆ ಪೂರಕವಾಗಿ ಪ್ರಕಟವಾದ ಅಧ್ಯಯನ ವರದಿಗಳನ್ನು ಉಲ್ಲೇಖಿಸಿದ ಪ್ರಧಾನಿ, ‘ಸ್ವಚ್ಛ ಭಾರತ್ ಮಿಷನ್ ವಾರ್ಷಿಕವಾಗಿ 60,000 ರಿಂದ 70,000 ಮಕ್ಕಳ ಜೀವವನ್ನು ಉಳಿಸುತ್ತಿದೆ ಎಂದು ಅಂತಾರಾಷ್ಟ್ರೀಯ ಅಧ್ಯಯನ ತೋರಿಸಿದೆ, ಶೇ.90 ಮಹಿಳೆಯರು ಮನೆಯಲ್ಲೇ ಶೌಚಾಲಯ ನಿರ್ಮಾಣ ಆಗಿರುವ ಕಾರಣ ತಾವು ಸುರಕ್ಷತಾ ಭಾವನೆ ಹೊಂದಿದ್ದೇವೆ ಎಂದು ಯುನಿಸೆಫ್‌ ವರದಿಯಲ್ಲಿ ಹೇಳಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯು. ‘ಸ್ವಚ್ಛ ಭಾರತವು 2014 ಮತ್ತು 2019ರ ನಡುವೆ ಅತಿಸಾರದಿಂದ ಸಾವುಗಳನ್ನು ಕಡಿಮೆ ಮಾಡಿ 3 ಲಕ್ಷ ಜೀವ ಉಳಿಸಿದೆ’ ಎಂದಿದೆ. ಈ ಮೂಲಕ ಮಿಷನ್‌ಗೆ ಅಧ್ಯಯನ ವರದಿಗಳು ಮನ್ನಣೆ ನೀಡಿವೆ’ ಎಂದು ಹರ್ಷಿಸಿದರು.

‘ಸ್ವಚ್ಛತೆ ಎನ್ನುವುದು ಕೇವಲ ಒಂದು ದಿನದ ಕೆಲಸವಲ್ಲ ಬದಲಾಗಿ ಜೀವನ ಪರ್ಯಂತದ ಮೌಲ್ಯವಾಗಿದೆ. ನಾಗರಿಕರು ಸ್ವಚ್ಛತೆಯ ಮೌಲ್ಯವನ್ನು ಪೀಳಿಗೆಯಿಂದ ಪೀಳಿಗೆಗೆ ವರ್ಗಾಯಿಸಬೇಕು ಮತ್ತು ತಮ್ಮ ಸುತ್ತಮುತ್ತಲಿನ ಆರಾಧನಾ ಸ್ಥಳಗಳಂತೆಯೇ ಕಾಳಜಿಯಿಂದ ನೋಡಿಕೊಳ್ಳಬೇಕು’ ಎಂದು ಕರೆ ನೀಡಿದರು.