ಸಾರಾಂಶ
ಈರೋಡ್ ಕ್ಷೇತ್ರದ ಡಿಎಂಕೆ ಲೋಕಸಭಾ ಸಂಸದ ಗಣೇಶಮೂರ್ತಿ ಭಾನುವಾರ ‘ಸಲ್ಫಾಸ್’ ಎಂಬ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಈರೋಡ್: ಈರೋಡ್ ಕ್ಷೇತ್ರದ ಎಂಡಿಎಂಕೆ ಲೋಕಸಭಾ ಸಂಸದ ಗಣೇಶಮೂರ್ತಿ ಭಾನುವಾರ ‘ಸಲ್ಫಾಸ್’ ಎಂಬ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರನ್ನು ಕೊಯಮತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಅವರು 2019 ಲೋಕಸಭೆ ಚುನಾವಣೆಯಲ್ಲಿ ಎಂಡಿಎಂಕೆಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆದರೆ ಈ ಚುನಾವಣೆಯಲ್ಲಿ ಅವರಿಗೆ ಎಂಡಿಎಂಕೆ ಟಿಕೆಟ್ ನಿರಾಕರಿಸಿದೆ. ಹೀಗಾಗಿ ಖಿನ್ನರಾಗಿ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.
ಮನೆಯಲ್ಲಿ ದಿಢೀರನೇ ಅಸ್ವಸ್ಥಗೊಂಡಿದ್ದರಿಂದ ಕುಟುಂಬಸ್ಥರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ತಪಾಸಣೆ ನಂತರ ಐಸಿಯುಗೆ ಸೇರಿಸಲಾಗಿದ್ದು, ವೇಂಟಿಲೇಟರ್ನಲ್ಲಿ ಇಡಲಾಗಿದೆ.
ಆದರೆ ಅವರ ಆತ್ಮಹತ್ಯೆ ಯತ್ನದ ಬಗ್ಗೆ ಪ್ರತಿಕ್ರಿಯೆಗೆ ಪೊಲೀಸರು ನಿರಾಕರಿಸಿದ್ದಾರೆ.