ಸಾರಾಂಶ
ಅಕ್ರಮದ ಕಾರಣಕ್ಕೆ ಪಶ್ಚಿಮ ಬಂಗಾಳದ 25000 ಶಿಕ್ಷಕರ ನೇಮಕ ರದ್ದು ಮಾಡಿ ಕಲ್ಕತ್ತಾ ಹೈಕೋರ್ಟ್ ಹೊರಡಿಸಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್ ಮಂಗಳವಾರ ತಡೆ ನೀಡಿದೆ.
ನವದೆಹಲಿ: ಅಕ್ರಮದ ಕಾರಣಕ್ಕೆ ಪಶ್ಚಿಮ ಬಂಗಾಳದ 25000 ಶಿಕ್ಷಕರ ನೇಮಕ ರದ್ದು ಮಾಡಿ ಕಲ್ಕತ್ತಾ ಹೈಕೋರ್ಟ್ ಹೊರಡಿಸಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್ ಮಂಗಳವಾರ ತಡೆ ನೀಡಿದೆ. ಆದರೆ ನೇಮಕಾತಿಯಲ್ಲಿ ಅಕ್ರಮ ಕುರಿತು ತನಿಖೆಗೆ ಸಿಬಿಐ ನೇಮಕ ಮಾಡಿದ್ದ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದಿದೆ.
ಹೀಗಾಗಿ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದ 25000 ಶಿಕ್ಷಕರು ತಕ್ಷಣಕ್ಕೆ ನಿರುಮ್ಮಳಾಗಿದ್ದಾರೆ, ಮತ್ತೊಂದೆಡೆ ಅಕ್ರಮದ ಆರೋಪ ಹೊತ್ತಿದ್ದ ಬಂಗಾಳ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.ಅಕ್ರಮವಾಗಿ ನೇಮಕ ಆದವರು ಮತ್ತು ಸಕ್ರಮವಾಗಿ ನೇಮಕ ಆದವರನ್ನು ಪ್ರತ್ಯೇಕಗೊಳಿಸುವ ಅವಕಾಶ ಇರುವ ಕಾರಣ ಏಕಪಕ್ಷೀಯವಾಗಿ ಎಲ್ಲಾ ನೇಮಕ ರದ್ದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಮುಖ್ಯ ನ್ಯಾ। ಡಿ.ವೈ.ಚಂದ್ರಚೂಡ್ ಅವರನ್ನೊಳಗೊಂಡ ನ್ಯಾಯಪೀಠ, ರದ್ದು ಆದೇಶಕ್ಕೆ ತಡೆ ನೀಡಿದೆ. ಆದರೆ ಅಕ್ರಮವಾಗಿ ನೇಮಕ ಆದ ಎಲ್ಲಾ ಶಿಕ್ಷಕರು ತಮ್ಮ ಪೂರ್ಣ ವೇತನವನ್ನು ಮರಳಿಸಬೇಕು ಎಂದು ಸ್ಪಷ್ಟಪಡಿಸಿದೆ.ಆದರೆ ಪ್ರಕರಣ ಸಂಬಂಧ ಸಿಬಿಐ ತನ್ನ ತನಿಖೆ ಮುಂದುವರೆಸಬಹುದು. ಆದರೆ ಆರೋಪಿಗಳ ವಿರುದ್ಧ ತನಿಖಾ ಸಂಸ್ಥೆ ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ ಎಂದು ಹೇಳಿದೆ.