ಸಾರಾಂಶ
ಭಾರತವು ಪಹಲ್ಗಾಂ ದಾಳಿಗೆ ಪ್ರತೀಕಾರವಾಗಿ ಆಪರೇಶನ್ ಸಿಂದೂರ ನಡೆಸಿದ ಮಾರನೇ ದಿನವಾದ ಗುರುವಾರ ಹಗಲು-ರಾತ್ರಿ ಎರಡೂ ದೇಶಗಳ ನಡುವೆ ಅಧಿಕೃತವಾಗಿಯೇ ಕಂಡು ಕೇಳರಿಯದ ಯುದ್ಧ ಆರಂಭವಾಗಿದೆ.
ನವದೆಹಲಿ/ಇಸ್ಲಾಮಾಬಾದ್: ಭಾರತವು ಪಹಲ್ಗಾಂ ದಾಳಿಗೆ ಪ್ರತೀಕಾರವಾಗಿ ಆಪರೇಶನ್ ಸಿಂದೂರ ನಡೆಸಿದ ಮಾರನೇ ದಿನವಾದ ಗುರುವಾರ ಹಗಲು-ರಾತ್ರಿ ಎರಡೂ ದೇಶಗಳ ನಡುವೆ ಅಧಿಕೃತವಾಗಿಯೇ ಕಂಡು ಕೇಳರಿಯದ ಯುದ್ಧ ಆರಂಭವಾಗಿದೆ. ಬೆಳಗ್ಗೆ ಹಾಗೂ ರಾತ್ರಿ ಪಾಕಿಸ್ತಾನ 2 ಸಲ ಭಾರತದ ಮೇಲೆ ದಾಳಿ ಮಾಡಿ ಮಾರುತ್ತರ ನೀಡಲು ಯತ್ನಿಸಿದೆ. ಇದಕ್ಕೆ ಭಾರತ ಕೂಡ ದಿಟ್ಟ ಉತ್ತರ ನೀಡಿ, ಎರಡೂ ಸಲ ತನ್ನ ಸ್ವಯಂರಕ್ಷಣೆ ಮಾಡಿಕೊಂಡು ಪ್ರತಿದಾಳಿ ನಡೆಸಿ ಪಾಕ್ಗೆ ಮುಟ್ಟಿ ನೋಡಿಕೊಳ್ಳುವ ಪೆಟ್ಟು ನೀಡಿದೆ. ಈ ಮೂಲಕ ಕ್ರಿಯೆಗೆ ಪ್ರತಿಕ್ರಿಯೆ ಎಂಬಂತೆ ಅಧಿಕೃತವಾಗಿಯೇ ಎರಡೂ ದೇಶಗಳ ನಡುವೆ ಯುದ್ಧ ಶುರುವಾಗಿದೆ.
ವಿಶೇಷವೆಂದರೆ ಒಟ್ಟು 2 ಹಂತಗಳಲ್ಲಿ ಗುರುವಾರ ಹಗಲೂ ರಾತ್ರಿ ವಾಯು, ನೆಲ ಹಾಗೂ ನೌಕಾ ಸಂಘರ್ಷ ನಡೆದಿದೆ.
‘ಆಪರೇಶನ್ ಸಿಂದೂರ’ ಇನ್ನೂ ಮುಗಿದಿಲ್ಲ. ಕ್ರಿಯೆಗೆ ಪ್ರತಿಕ್ರಿಯೆ ಇದ್ದೇ ಇರುತ್ತದೆ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥ ಸಿಂಗ್ ಗುರುವಾರ ಹೇಳಿದ್ದಾರೆ. ಅತ್ತ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಕೂಡ ಪಾಕ್ ಸೇನೆಗೆ ಪ್ರತೀಕಾರ ತೀರಿಸಿಕೊಳ್ಳುವ ಅಧಿಕಾರ ನೀಡಿದ್ದಾರೆ. ಹೀಗಾಗಿ ಸಮರ ಅಧಿಕೃತವಾಗಿಯೇ ಆರಂಭವಾದಂತಿದೆ.
ಇಸ್ಲಾಮಾಬಾದ್ಗೇ ನುಗ್ಗಿದ ಭಾರತ:
75 ವರ್ಷ ಬಳಿಕ ಇದೇ ಮೊದಲ ಬಾರಿ ಇಸ್ಲಾಮಾಬಾದ್ಗೆ ಇಸ್ಲಾಮಾಬಾದ್ ಮೇಲೆ ಭಾರತ ವಾಯುದಾಳಿ ನಡೆಸಿದೆ. ಇದರಿಂದ ಬೆಚ್ಚಿದ ಪ್ರಧಾನಿ ನವಾಜ್ ಷರೀಫ್ ಹಾಗೂ ಸೇನಾ ಮುಖ್ಯಸ್ಥ ಅಸೀಂ ಮುನೀರ್ ಬಂಕರ್ನಲ್ಲಿ ಅವಿತಿದ್ದಾರೆ. ಪಾಕ್ನ ಸಿಯಾಲ್ಕೋಟ್, ರಾವಲ್ಪಿಂಡಿ, ಕರಾಚಿ, ಇಸ್ಲಾಮಾಬಾದ್ ಸೇರಿ ಅನೇಕ ನಗರಗಳು ಭಾರತದ ಪ್ರತಿದಾಳಿಗೆ ತತ್ತರಿಸಿವೆ. ಭಾರತದ ದಾಳಿಯಿಂದ ಬಚಾವಾಗಲು ಪಾಕಿಸ್ತಾನದ ಬಹುತೇಕ ಕಡೆ ರಾತ್ರಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು.
ಭಾರತ ತಿರುಗಿ ಬೀಳಲು ಕಾರಣವೂ ಇದೆ. ಗುರುವಾರ ರಾತ್ರಿ ಪಾಕಿಸ್ತಾನವು ಗಡಿ ನಿಯಂತ್ರಣ ರೇಖೆ ಹಾಗೂ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಪಂಜಾಬ್, ಜಮ್ಮು-ಕಾಶ್ಮೀರ ಹಾಗೂ ರಾಜಸ್ಥಾನದ ಮೇಲೆ ನೂರಾರು ಕ್ಷಿಪಣಿ, ಡ್ರೋನ್ ಹಾಗೂ ರಾಕೆಟ್ ಮೂಲಕ ದಾಳಿ ಮಾಡಿದೆ. ಹೀಗಾಗಿ ಭಾರತ ತಿರುಗಿಬಿದ್ದಿದೆ. ನೌಕಾಪಡೆ ಕೂಡ ಅಖಾಡಕ್ಕೆ ಇಳಿದಿದ್ದು, ಕರಾಚಿ ಬಂದರು ಭಾರತದ ಐಎನ್ಎಎಸ್ ವಿಕ್ರಾಂತ್ ದಾಳಿಯಿಂದ ನಾಶವಾಗಿದೆ ಎನ್ನಲಾಗಿದೆ.
ಪಾಕ್ಗೆ ಭಾರತ ತಿರುಗೇಟು:
ಗುರುವಾರ ರಾತ್ರಿ ಜಮ್ಮು ವಿಮಾನ ನಿಲ್ದಾಣ, ಕೆಲವು ಮಿಲಿಟರಿ ನೆಲೆಗಳು ಸೇರಿದಂತೆ ಜಮ್ಮುವಿನ ಹಲವಾರು ಸ್ಥಳಗಳು ಹಾಗೂ ರಾಜಸ್ಥಾನ ಮತ್ತು ಪಂಜಾಬ್ನ ಕೆಲವು ಭಾಗಗಳ ಮೇಲೆ ರಾಕೆಟ್, ಡ್ರೋನ್ ಹಾಗೂ ಕ್ಷಿಪಣಿ ದಾಳಿ ನಡೆಸಿದೆ. ಆದರೆ ಭಾರತವು ಈ ಮೂರೂ ರಾಜ್ಯಗಳ ಪ್ರಮುಖ ನಗರಗಳಲ್ಲಿ ಸಂಪೂರ್ಣ ವಿದ್ಯುತ್ ಕಡಿತಗೊಳಿಸಿದೆ ಹಾಗೂ ಎಸ್-400 ವಾಯುರಕ್ಷಣಾ ವ್ಯವಸ್ಥೆ 8 ಪಾಕ್ ಕ್ಷಿಪಣಿ ಹಾಗೂ 2 ಡ್ರೋನ್ ನಾಶ ಮಾಡಿದೆ. ಈ ಮೂಲಕ ಹಾನಿಯನ್ನು ತಡೆದಿದೆ.
ಆದರೆ ಭಾರತ ಇಷ್ಟಕ್ಕೇ ಸುಮ್ಮನಾಗದೇ ಗುರುವಾರ ರಾತ್ರಿ ಕೂಡ ಲಾಹೋರ್ ಹಾಗೂ ಸಿಯಾಲ್ಕೋಟ್ ಮೇಲೆ ಕ್ಷಿಪಣಿ ದಾಳಿ ಮಾಡಿದೆ. ಜೊತೆಗೆ ಮೊದಲ ಬಾರಿಗೆ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ಮತ್ತು ಪಾಕಿಸ್ತಾನದ ಪಂಜಾಬ್ ವಾಯುನೆಲೆಗಳ ಮೇಲೂ ಭಾರತದ ಸೇನೆ ದಾಳಿ ನಡೆಸಿದೆ.
ಐಎನ್ಎಸ್ ವಿಕ್ರಾಂತ್ ಹಡಗಿನ ದಾಳಿಯಿಂದ ಕರಾಚಿ ಬಂದರಿನಲ್ಲಿ ಹಲವಾರು ಭಾರಿ ಸ್ಫೋಟಗಳು ಸಂಭವಿಸಿವೆ. 8-12 ದೊಡ್ಡ ಸ್ಫೋಟಗಳ ಸುದ್ದಿ ಇದೆ. ಕರಾಚಿಯಲ್ಲಿ ವಿದ್ಯುತ್ ವ್ಯತ್ಯಯವಾಗಿದ್ದು, ಮೊಬೈಲ್ ಸಿಗ್ನಲ್ ಕೂಡ ಅಸ್ತವ್ಯಸ್ತವಾಗಿದೆ.
ಬೆಳಗ್ಗೆ ಒಂದು ಹಂತದ ದಾಳಿ-ಪ್ರತಿದಾಳಿ:
ಗುರುವಾರ ಬೆಳಗ್ಗೆ ಭಾರತವು ಪಾಕಿಸ್ತಾನದಿಂದ ತನ್ನ 15 ನಗರಗಳತ್ತ ಬಂದ ಕ್ಷಿಪಣಿಗಳು ಹಾಗೂ ಡ್ರೋನ್ಗಳನ್ನು ತನ್ನ ಎಸ್-400 (ಸುದರ್ಶನ ಚಕ್ರ) ವಾಯುರಕ್ಷಣಾ ವ್ಯವಸ್ಥೆ ಬಳಸಿ ಹೊಡೆದುರುಳಿಸಿದೆ. ಇದರ ಬೆನ್ನಲ್ಲೇ ಲಾಹೋರ್ ಸೇರಿದಂತೆ 3 ಪಾಕ್ ನಗರಗಳ ವಾಯುರಕ್ಷಣಾ ವ್ಯವಸ್ಥೆಯನ್ನು ಶಕ್ತಿಶಾಲಿ ಹಾರ್ಪಿ ಡ್ರೋನ್ ಪ್ರಯೋಗಿಸಿ ನಾಶ ಮಾಡಿದೆ.
ಭಾರತ- ಪಾಕಿಸ್ತಾನ ವಾರ್
ಭಾರತದ 15 ನಗರ
ಗುರಿಯಾಗಿಸಿ ದಾಳಿ
ಇಸ್ಲಾಮಾಬಾದ್: ಆಪರೇಷನ್ ಸಿಂದೂರಕ್ಕೆ ಪ್ರತೀಕಾರಕ್ಕೆ ಹಾತೊರೆಯುತ್ತಿದ್ದ ಪಾಕಿಸ್ತಾನ ಬುಧವಾರ ರಾತ್ರಿ ಶ್ರೀನಗರ, ಚಂಡೀಗಢ ಸೇರಿ ಉತ್ತರ ಹಾಗೂ ಪಶ್ಚಿಮ ಭಾರತದ 15 ನಗರಗಳ ಮಿಲಿಟರಿ ನೆಲೆ ಮತ್ತು ವಾಯು ರಕ್ಷಣಾ ವ್ಯವಸ್ಥೆಗಳನ್ನು ಗುರಿಯಾಗಿರಿಸಿಕೊಂಡು ಕ್ಷಿಪಣಿ, ಡ್ರೋನ್ ಬಳಸಿ ದಾಳಿ ನಡೆಸಲು ಯತ್ನಿಸಿದೆ.
ಗಡೀಲೆ ಪಾಕ್ ಅಸ್ತ್ರ
ತಡೆದ ಸುದರ್ಶನ
ನವದೆಹಲಿ: ಭಾರತದ 15 ನಗರಗಳನ್ನು ಗುರಿಯಾಗಿ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯನ್ನು ಭಾರತದ ವಾಯುರಕ್ಷಣಾ ವ್ಯವಸ್ಥೆಯಾದ ಸುದರ್ಶನ ಚಕ್ರ ಗಡಿಯಲ್ಲೇ ತಡೆದು ಪಾಕಿಸ್ತಾನಕ್ಕೆ ಪಾಠ ಕಲಿಸಿದೆ. ಈ ಮೂಲಕ ಒಂದೇ ಒಂದು ಕ್ಷಿಪಣಿ ಭಾರತ ಪ್ರವೇಶಿಸದಂತೆ ಭದ್ರತೆ ಒದಗಿಸಿದೆ.
ಲಾಹೋರ್ ಏರ್ಡಿಫೆನ್ಸ್
ವ್ಯವಸ್ಥೆ ಪೂರ್ಣ ಧ್ವಂಸ
ನವದೆಹಲಿ: ತನ್ನ ಮಿಲಿಟಿರಿ ಗುರಿಯಾಗಿಸಿ ಪಾಕಿಸ್ತಾನ ನಡೆಸಿದ ದಾಳಿ ಯತ್ನಕ್ಕೆ ತಿರುಗೇಟು ನೀಡುವ ಸಲುವಾಗಿ ಭಾರತೀಯ ಸೇನಾಪಡೆ ಪಾಕಿಸ್ತಾನದ ಲಾಹೋರ್ ವಿಮಾನ ನಿಲ್ದಾಣ ಬಳಿ ಇದ್ದ ಚೀನಾ ನೀಡಿದ್ದ ವಾಯುರಕ್ಷಣಾ ವ್ಯವಸ್ಥೆ ಮೇಲೆ ದಾಳಿ ನಡೆಸಿ ಅದನ್ನು ಪೂರ್ಣವಾಗಿ ಧ್ವಂಸಗೊಳಿಸಿದೆ.
ರಾಜಸ್ಥಾನ, ಪಂಜಾಬ್,
ಕಾಶ್ಮೀರ ಪಾಕ್ ಗುರಿ
ನವದೆಹಲಿ: ಗುರುವಾರ ಸಂಜೆ ಪಾಕಿಸ್ತಾನ ಸೇನೆ, ಭಾರತದ ಕಾಶ್ಮೀರ, ಪಂಜಾಬ್, ರಾಜಸ್ಥಾನದ ಗಡಿ ಪ್ರದೇಶಗಳ ಮೇಲೆ ಭಾರೀ ಪ್ರಮಾಣದ ರಾಕೆಟ್, ಕ್ಷಿಪಣಿ, ಡ್ರೋನ್ಗಳನ್ನು ಬಳಸಿ ದಾಳಿಗೆ ಯತ್ನಿಸಿದೆ. ಈ ವೇಳೆ ಪಾಕಿಸ್ತಾನದ ಎಫ್ 16 ಸೇರಿ ಹಲವು ಯುದ್ಧ ವಿಮಾನಗಳನ್ನು ಭಾರತ ಹೊಡೆದುರುಳಿಸಿದೆ.
ಇಸ್ಲಾಮಾಬಾದ್, ಕರಾಚಿ
ಮೇಲೆ ಭಾರತದ ದಾಳಿ
ನವದೆಹಲಿ: ಸೇನಾ ನೆಲೆ, ನಾಗರಿಕರ ಮೇಲೆ ಪಾಕ್ ದಾಳಿ ಯತ್ನಕ್ಕೆ ಎದಿರೇಟು ನೀಡುವ ಸಲುವಾಗಿ ಭಾರತೀಯ ಸೇನೆ ಗುರುವಾರ ರಾತ್ರಿ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್, ಸಿಯಾಲ್ಕೋಟ್, ಲಾಹೋರ್, ರಾವಲ್ಪಿಂಡಿ, ಪಂಜಾಬ್ನ ವಾಯುನೆಲೆ ಮೇಲೆ ಭಾರೀ ಪ್ರಮಾಣದ ದಾಳಿ ನಡೆಸಿದೆ.
ಪತನಗೊಂಡ ಪಾಕ್
ಪ್ಲೇನ್ ಪೈಲಟ್ ಸೆರೆ
ಜೈಸಲ್ಮೇರ್: ಭಾರತದ ದಾಳಿಗೆ ಪತನಗೊಂಡ ಪಾಕಿಸ್ತಾನದ ಎಫ್ 16 ವಿಮಾನದ ಪೈಲಟ್ ಒಬ್ಬ ಭಾರತದ ವಾಯುಪ್ರದೇಶದೊಳಗೆ ಬಿದ್ದಿದ್ದಾನೆ. ಈತನನ್ನು ಭಾರತೀಯ ಸೇನೆ ಸೆರೆಹಿಡಿದಿದೆ ಎಂದು ವರದಿಗಳು ತಿಳಿಸಿವೆ. ಆತನ ಗುರುತನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಲಾಗಿದೆ.
ಐಪಿಎಲ್ ಪಂದ್ಯಾವಳಿ
ರದ್ಧತಿ ಬಗ್ಗೆ ಚಿಂತನೆ
ನವದೆಹಲಿ: ಭಾರತ- ಪಾಕ್ ನಡುವೆ ಸಂಘರ್ಷ ತೀವ್ರವಾಗಿರುವ ಹಿನ್ನೆಲೆಯಲ್ಲಿ ದೇಶವ್ಯಾಪಿ ಆಯೋಜನೆಗೊಂಡಿರುವ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗಳನ್ನು ರದ್ದುಗೊಳಿಸುವ ಬಗ್ಗೆ ಕೇಂದ್ರ ಸರ್ಕಾರ ಮತ್ತು ಬಿಸಿಸಿಐ ಚಿಂತನೆ ನಡೆಸಿವೆ. ಗುರುವಾರದ ಪಂಜಾಬ್-ಡೆಲ್ಲಿ ನಡುವಿನ ಧರ್ಮಶಾಲಾ ಪಂದ್ಯ ರದ್ದುಪಡಿಸಲಾಗಿದೆ.
ಡ್ರೋನ್ ದಾಳಿ: 4 ಪಾಕ್ ಯೋಧರಿಗೆ ಗಾಯ
ಇಸ್ಲಾಮಾಬಾದ್: ಆಪರೇಷನ್ ಸಿಂದೂರದ ಮಾರನೇ ದಿನ ಭಾರತ ನಡೆಸಿದ ಮತ್ತೊಂದು ದಾಳಿಯಲ್ಲಿ ಪಾಕಿಸ್ತಾನದ ನಾಲ್ವರು ಯೋಧರು ಗಾಯಗೊಂಡಿದ್ದಾರೆ ಹಾಗೂ ಈವರೆಗೆ ಭಾರತ ಹಾರಿಬಿಟ್ಟ ಇಸ್ರೇಲ್ ನಿರ್ಮಿತ 25 ಹೆರೋಪ್ ಡ್ರೋನ್ಗಳನ್ನು ನಾವು ಹೊಡೆದುರುಳಿಸಿದ್ದೇವೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ.
ಲಾಹೋರ್ ಸಮೀಪ ಡ್ರೋನ್ ದಾಳಿಯಿಂದಾಗಿ ನಾಲ್ವರು ಯೋಧರು ಗಾಯಗೊಂಡಿದ್ದಾರೆ. ಆದರೆ, ಲಾಹೋರ್, ಗುಜರನ್ವಾಲಾ, ಚಕ್ವಾಲಾ, ಬಹಾವಲ್ಪುರ, ಮಿಯಾನೋ, ಕರಾಚಿ, ಛೋರ್, ರಾವಲ್ಪಿಂಡಿ, ಅಟ್ಟೋಕ್ ಮೇಲೆ ಹಾರಿಬಿಟ್ಟ ಡ್ರೋನ್ಗಳನ್ನು ಹೊಡೆದುರುಳಿಸಲಾಗಿದೆ ಎಂದು ಪಾಕಿಸ್ತಾನದ ಸೇನಾ ವಕ್ತಾರ ಲೆ.ಜನರಲ್ ಅಹ್ಮದ್ ಷರೀಫ್ ಚೌಧರಿ ಹೇಳಿದ್ದಾರೆ.
ಗಡಿಯಲ್ಲಿ ಹೈ ಅಲರ್ಟ್: 2ನೇ ದಿನವೂ 3 ರಾಜ್ಯಗಳಲ್ಲಿ ಶಾಲೆ ಬಂದ್
ಚಂಡೀಗಢ: ಭಾರತ ಮತ್ತು ಪಾಕಿಸ್ತಾನ ನಡುವಿನ ಪ್ರಕ್ಷುಬ್ಧ ವಾತಾವರಣ ಹಿನ್ನೆಲೆ ಪಂಜಾಬ್ನ ಆರು ಗಡಿ ಜಿಲ್ಲೆಗಳು, ರಾಜಸ್ಥಾನದ ಗಡಿ ಜಿಲ್ಲೆ ಹಾಗೂ ಜಮ್ಮು-ಕಾಶ್ಮೀರದ ಎಲ್ಲ ಶಾಲೆಗಳು ಗುರುವಾರ ಕೂಡ ಬಂದ್ ಆಗಿದ್ದವು
ಭಾರತೀಯ ಸೇನೆ ಪಾಕಿಸ್ತಾನ ವಿರುದ್ಧ ನಡೆಸಿದ ಆಪರೇಷನ್ ಸಿಂದೂರ ಬೆನ್ನಲ್ಲೆ ಪಾಕ್ ಗಡಿಗೆ ಹೊಂದಿಕೊಂಡಿರುವ ಪಂಜಾಬ್ನ ಫಿರೋಜ್ಪುರ, ಪಠಾಣ್ಕೋಟ್, ಫಾಜಿಲ್ಕಾ, ಅಮೃತಸರ, ಗುರುದಾಸ್ಪುರ ಮತ್ತು ತರ್ನ್ ತರನ್ ಜಿಲ್ಲೆಗಳಲ್ಲಿರುವ ಶಾಲೆಗಳನ್ನು ಮೇ 8ರಿಂದ 11ರ ವರೆಗೆ ಮುಚ್ಚಲಾಗುವುದು ಎಂದು ಸರ್ಕಾರ ಹೇಳಿದೆ.