ಉಗ್ರರ ನೆಲೆಗೆ ನುಗ್ಗಿ ಅವರನ್ನು ಹೊಡೆದಿದ್ದೇವೆ: ಮೋದಿ

| Published : Apr 12 2024, 01:07 AM IST / Updated: Apr 12 2024, 04:42 AM IST

ಉಗ್ರರ ನೆಲೆಗೆ ನುಗ್ಗಿ ಅವರನ್ನು ಹೊಡೆದಿದ್ದೇವೆ: ಮೋದಿ
Share this Article
  • FB
  • TW
  • Linkdin
  • Email

ಸಾರಾಂಶ

‘ದುರ್ಬಲ ಕಾಂಗ್ರೆಸ್‌ ಸರ್ಕಾರದಿಂದ ನಮ್ಮ ದೇಶದ ಗಡಿಯಲ್ಲಿ ಸರಿಯಾದ ರಸ್ತೆ ಕೂಡ ನಿರ್ಮಿಸಲು ಸಾಧ್ಯವಾಗಲಿಲ್ಲ. ಆದರೆ ಬಲಿಷ್ಠ ಬಿಜೆಪಿ ಸರ್ಕಾರ ಇಂದು ಮನೆಗೇ ನುಗ್ಗಿ ಉಗ್ರರನ್ನು ಹೊಡೆಯುತ್ತಿದೆ.

 ಋಷಿಕೇಶ್‌ :  ‘ದುರ್ಬಲ ಕಾಂಗ್ರೆಸ್‌ ಸರ್ಕಾರದಿಂದ ನಮ್ಮ ದೇಶದ ಗಡಿಯಲ್ಲಿ ಸರಿಯಾದ ರಸ್ತೆ ಕೂಡ ನಿರ್ಮಿಸಲು ಸಾಧ್ಯವಾಗಲಿಲ್ಲ. ಆದರೆ ಬಲಿಷ್ಠ ಬಿಜೆಪಿ ಸರ್ಕಾರ ಇಂದು ಮನೆಗೇ ನುಗ್ಗಿ ಉಗ್ರರನ್ನು ಹೊಡೆಯುತ್ತಿದೆ. ತನ್ಮೂಲಕ ಭಾರತದ ತಿರಂಗಾದಿಂದ ಜನರಿಗೆ ಸುರಕ್ಷತೆಯ ಗ್ಯಾರಂಟಿ ಲಭಿಸುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.

ಕಾಂಗ್ರೆಸ್‌ನದು ದುರ್ಬಲ ಸರ್ಕಾರವಾಗಿತ್ತು, ನಮ್ಮದು ಬಲಿಷ್ಠ ಸರ್ಕಾರವಾಗಿದೆ ಎಂದು ಮೋದಿ ಗುರುವಾರ ಉತ್ತರಾಖಂಡದಲ್ಲಿ ನಡೆಸಿದ ಲೋಕಸಭೆ ಚುನಾವಣೆಯ ಪ್ರಚಾರ ಸಮಾವೇಶದಲ್ಲಿ ವಾಗ್ದಾಳಿ ನಡೆಸಿದರು.

‘ಫಿರ್‌ ಏಕ್‌ ಬಾರ್‌ ಮೋದಿ ಸರ್ಕಾರ್‌ ಎಂಬ ಘೋಷಣೆ ಇಡೀ ದೇಶದಲ್ಲಿ ಕೇಳಿಸುತ್ತಿದೆ. ಬಲಿಷ್ಠ ಹಾಗೂ ಸ್ಥಿರ ಸರ್ಕಾರವನ್ನು ಚುನಾಯಿಸಿದ್ದರ ಲಾಭವೇನು ಎಂಬುದು ಜನರಿಗೆ ತಿಳಿಯುತ್ತಿದೆ. ದೇಶದಲ್ಲಿ ದುರ್ಬಲ ಸರ್ಕಾರವಿದ್ದಾಗಲೆಲ್ಲ ಶತ್ರುಗಳು ಹಾಗೂ ಭಯೋತ್ಪಾದಕರು ಅದರ ಲಾಭ ಪಡೆದುಕೊಳ್ಳುತ್ತಿದ್ದರು. ಆದರೆ ಬಲಿಷ್ಠ ಮೋದಿ ಸರ್ಕಾರದಲ್ಲಿ ನಮ್ಮ ಪಡೆಗಳು ಭಯೋತ್ಪಾದಕರನ್ನು ಅವರ ಮನೆಗೇ ನುಗ್ಗಿ ಹೊಡೆಯುತ್ತಿವೆ’ ಎಂದು ಹೇಳಿದರು.

ಗಡಿಯುದ್ದಕ್ಕೂ ರಸ್ತೆ, ಸುರಂಗ:

‘ಬಲಿಷ್ಠ ಬಿಜೆಪಿ ಸರ್ಕಾರಕ್ಕೆ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂಪಡೆಯುವ ಧೈರ್ಯವಿತ್ತು. ತ್ರಿವಳಿ ತಲಾಖ್‌ ನಿಷೇಧಿಸುವ, ಮಹಿಳೆಯರಿಗೆ ಶಾಸನ ಸಭೆಯಲ್ಲಿ ಮೀಸಲಾತಿ ನೀಡುವ ಹಾಗೂ ಒನ್‌ ರ್ಯಾಂಕ್‌ ಒನ್‌ ಪೆನ್ಷನ್‌ ಜಾರಿಗೊಳಿಸುವ ಬದ್ಧತೆಯನ್ನು ಬಿಜೆಪಿ ತೋರಿತು. ಆದರೆ ದುರ್ಬಲ ಕಾಂಗ್ರೆಸ್‌ ಸರ್ಕಾರಕ್ಕೆ ಗಡಿಯಲ್ಲಿ ರಸ್ತೆ ನಿರ್ಮಿಸಲು ಕೂಡ ಸಾಧ್ಯವಾಗಲಿಲ್ಲ. ನಾವಿಂದು ದೇಶದ ಗಡಿಯುದ್ದಕ್ಕೂ ರಸ್ತೆ ಹಾಗೂ ಸುರಂಗಗಳನ್ನು ನಿರ್ಮಿಸಿದ್ದೇವೆ. ಭ್ರಷ್ಟರು ದೇಶವನ್ನು ಲೂಟಿ ಹೊಡೆಯುವುದನ್ನು ತಪ್ಪಿಸಿದ್ದೇವೆ’ ಎಂದು ಮೋದಿ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌ ನಾಯಕರಿಗೆ ಅವರ ಕುಟುಂಬವೇ ಮೊದಲು. ಆದರೆ ಮೋದಿಗೆ ನೀವೆಲ್ಲರೂ ಮೊದಲು. ಭಾರತವೇ ನನಗೆ ಕುಟುಂಬ. ನಾನು ನನ್ನ ಬದುಕಿನ ಪ್ರಮುಖ ಘಟ್ಟವನ್ನು ಉತ್ತರಾಖಂಡದಲ್ಲಿ ಕಳೆದಿದ್ದೇನೆ. ಈ ರಾಜ್ಯದಲ್ಲಿ ರಸ್ತೆ, ರೈಲ್ವೆ ಹಾಗೂ ವಿಮಾನದ ಸಂಪರ್ಕ ಉತ್ತಮಗೊಳಿಸಲು ನಿರಂತರವಾಗಿ ಶ್ರಮಿಸುತ್ತಿದ್ದೇನೆ ಎಂದೂ ಮೋದಿ ತಿಳಿಸಿದರು.