ಸಾರಾಂಶ
ದೆಹಲಿಯ ಮೊಹಲ್ಲಾ ಕ್ಲಿನಿಕ್ಗಳಲ್ಲಿ ನಕಲಿ ರೋಗಿಗಳ ಹೆಸರಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿದ್ದ ಪ್ರಕರಣವನ್ನು ಸಿಬಿಐ ತನಿಖೆಗೆ ದೆಹಲಿ ಉಪರಾಜ್ಯಪಾಲ ವಿ .ಕೆ ಸಕ್ಸೆನಾ ಆದೇಶಿಸಿದ್ದಾರೆ.
ನವದೆಹಲಿ: ದೆಹಲಿಯಲ್ಲಿ ರಾಜ್ಯ ಸರ್ಕಾರ ಮತ್ತು ಉಪರಾಜ್ಯಪಾಲರ ತಿಕ್ಕಾಟ ಮುಂದುವರೆದಿದೆ. ದಿಲ್ಲಿಯ ಮೊಹಲ್ಲಾ ಕ್ಲಿನಿಕ್ಗಳಲ್ಲಿ ‘ನಕಲಿ ರೋಗಿಗಳಿಗೆ’ ವಿವಿಧ ಟೆಸ್ಟ್ ಮಾಡಿರುವುದಾಗಿ ತೋರಿಸಿ ಹಣ ಮಾಡಿಕೊಂಡ ಆರೋಪದ ಬಗ್ಗೆ ಸಿಬಿಐ ತನಿಖೆಗೆ ಉಪರಾಜ್ಯಪಾಲ ವಿ.ಕೆ ಸಕ್ಸೇನಾ ಆದೇಶಿಸಿದ್ದಾರೆ
ದೆಹಲಿಯ 7 ಮೊಹಲ್ಲ ಕ್ಲಿನಿಕ್ಗಳಲ್ಲಿ ಕಳೆದ ವರ್ಷ ವೈದ್ಯರೇ ಬಂದಿರಲಿಲ್ಲ. ಆದರೆ ಅವರು ಇದ್ದಾರೆಂದು ದಾಖಲೆಯಲ್ಲಿ ತೋರಿಸಿ ಸಂಬಳ ಪಡೆದುಕೊಂಡಿದ್ದರು. ಅಲ್ಲದೆ ಅವರ ಅನುಪಸ್ಥಿತಿಯಲ್ಲಿ ಅನಧಿಕೃತ ಸಿಬ್ಬಂದಿಯು ರೋಗಿಗಳಿಗೆ ಕೆಲವು ಔಷಧಗಳನ್ನು ಪಡೆದುಕೊಳ್ಳುವಂತೆ ಮತ್ತು ಕೆಲವು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವಂತೆ ಸೂಚಿಸಿ ಜೀವದ ಜೊತೆ ಚೆಲ್ಲಾಟವಾಡಿದ್ದರು. ಜೊತೆಗೆ ನೈಜವಾಗಿ ರೋಗಿಗಳು ಇಲ್ಲದಿದ್ದರೂ ತೋರಿಕೆಗಾಗಿ ನಕಲಿ ರೋಗಿಗಳಿಗೆ ವೈದ್ಯಕೀಯ ಪರೀಕ್ಷೆ ಮಾಡಿರುವುದಾಗಿ ದಾಖಲೆ ಸೃಷ್ಟಿಸಿರುವುದಾಗಿಯೂ ಆರೋಪ ಕೇಳಿಬಂದಿತ್ತು. ಈ ಆರೋಪಗಳಲ್ಲಿ ದೆಹಲಿ ಸರ್ಕಾರ 100 ಕೋಟಿ ರು.ಗೂ ಅಧಿಕ ಮೊತ್ತದ ಹಗರಣ ನಡೆಸಿ ಖಾಸಗಿ ಪ್ರಯೋಗಾಲಯಗಳಿಗೆ ಅಕ್ರಮ ಹಣ ವರ್ಗಾವಣೆ ಮಾಡಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಕುರಿತು ಕೇಂದ್ರೀಯ ತನಿಖಾ ದಳದ (ಸಿಬಿಐ) ತನಿಖೆಗೆ ಉಪರಾಜ್ಯಪಾಲರು ಸೂಚಿಸಿದ್ದಾರೆ.ಈ ಹಗರಣ ಬೆಳಕಿಗೆ ಬಂದ ಮರುಕ್ಷಣವೇ ಏಳು ವೈದ್ಯರೂ ಸೇರಿದಂತೆ 26 ಮಂದಿಯನ್ನು ದೆಹಲಿ ಸರ್ಕಾರ ಅಮಾನತುಗೊಳಿಸಿತ್ತು. ಅಲ್ಲದೆ ಎಫ್ಐಆರ್ ಕೂಡ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಇದಕ್ಕೂ ಮೊದಲು ಉಪರಾಜ್ಯಪಾಲ ವಿ.ಕೆ.ಸಕ್ಸೇನಾ ಅವರು ಮೊಹಲ್ಲಾ ಕ್ಲಿನಿಕ್ಗಳಲ್ಲಿ ಕಳಪೆ ಗುಣಮಟ್ಟದ ಔಷಧಗಳನ್ನು ಪೂರೈಕೆ ಮಾಡುತ್ತಿರುವುದರ ಕುರಿತು ತನಿಖೆ ಮಾಡಲು ಸಿಬಿಐಗೆ ವಹಿಸಿದ್ದರು.