ಸಾರಾಂಶ
ಪಶ್ಚಿಮ ಬಂಗಾಳದಲ್ಲಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಭಾರೀ ಜಯ ಸಾಧಿಸುವುದಾಗಿ ಹೇಳಿಕೊಂಡಿದ್ದ ಬಿಜೆಪಿಯನ್ನು ಮಣಿಸಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಭರ್ಜರಿ ಜಯದತ್ತ ಕೊಂಡೊಯ್ಯುವಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಯಶಸ್ವಿಯಾಗಿದ್ದಾರೆ.
42 ಲೋಕಸಭೆ ಕ್ಷೇತ್ರಗಳಿರುವ ಬಂಗಾಳದಲ್ಲಿ 31 ಸೀಟುಗಳನ್ನು ಟಿಎಂಸಿ ಗೆದ್ದಿದ್ದರೆ, ಬಿಜೆಪಿ ಕೇವಲ 10 ಸೀಟುಗಳನ್ನು ಗೆದ್ದಿದೆ. ಕಾಂಗ್ರೆಸ್ ಪಕ್ಷ ಕೇವಲ 1 ಕ್ಷೇತ್ರಕ್ಕೆ ತೃಪ್ತಿಪಟ್ಟುಕೊಂಡಿದೆ. ಇದು 2014ರಲ್ಲಿ ಗೆದ್ದಿದ್ದ 34 ಸೀಟುಗಳ ಬಳಿಕ ಟಿಎಂಸಿಗೆ ಎರಡನೇ ದೊಡ್ಡ ಜಯವಾಗಿದೆ. ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಟಿಎಂಸಿ 22 ಸೀಟು, ಬಿಜೆಪಿ 18 ಹಾಗೂ ಕಾಂಗ್ರೆಸ್ 2 ಸೀಟುಗಳನ್ನು ಗೆದ್ದಿದ್ದವು. ಈ ಬಾರಿ ಟಿಎಂಸಿ ತನ್ನ ಸಾಧನೆಯನ್ನು ಭಾರೀ ಪ್ರಮಾಣದಲ್ಲಿ ಸುಧಾರಿಸಿಕೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವ ಅಮಿತ್ ಶಾ ಅವರು ಬಂಗಾಳವನ್ನು ಈ ಸಲ ಬಹಳ ಗಂಭೀರವಾಗಿ ತೆಗೆದುಕೊಂಡಿದ್ದರು. ಹೀಗಾಗಿ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಚಾರ ಸಮಾವೇಶಗಳನ್ನು ನಡೆಸಿದ್ದರು. ಅವು ನಿರೀಕ್ಷಿತ ಫಲ ನೀಡಿಲ್ಲ.
ಇನ್ನು, ಟಿಎಂಸಿಗೂ ಮುನ್ನ ಮೂರು ದಶಕಗಳ ಕಾಲ ರಾಜ್ಯವನ್ನು ಆಳಿದ ಎಡಪಕ್ಷಗಳು ಹೀನಾಯವಾಗಿ ಸೋತಿವೆ. ಸಿಪಿಎಂ ಕಳೆದ ಚುನಾವಣೆಯಂತೆ ಈ ಬಾರಿಯೂ ಒಂದೇ ಒಂದು ಸ್ಥಾನ ಗಳಿಸಿಲ್ಲ.
ಬಹರಾಂಪುರ ಕ್ಷೇತ್ರದಲ್ಲಿ ಲೋಕಸಭೆಯ ಕಾಂಗ್ರೆಸ್ ಪಕ್ಷದ ನಾಯಕನಾಗಿದ್ದ ಅಧೀರ್ ರಂಜನ್ ಚೌಧರಿ ಹಾಗೂ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ನಡುವೆ ರೋಚಕ ಸಮರ ನಡೆದು, ಅಧೀರ್ ಪರಾಭವಗೊಂಡಿದ್ದಾರೆ. ತನ್ಮೂಲಕ ಏಳನೇ ಬಾರಿ ಲೋಕಸಭೆ ಪ್ರವೇಶಿಸುವ ಅವರ ಕನಸು ಭಗ್ನವಾಗಿದೆ.
ಸಂದೇಶ್ಖಾಲಿ ಹಿಂಸಾಚಾರದಿಂದಾಗಿ ಈ ಬಾರಿ ಬಂಗಾಳದ ಚುನಾವಣೆ ಪ್ರಚಾರ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಅಲ್ಲದೆ, ಈ ಸಲದ ಚುನಾವಣೆಯ ಏಳು ಹಂತಗಳಲ್ಲಿ ಪ್ರತಿ ಬಾರಿಯ ಮತದಾನದ ದಿನವೂ ಹಿಂಸಾಚಾರ ನಡೆದ ಏಕೈಕ ರಾಜ್ಯ ಪಶ್ಚಿಮ ಬಂಗಾಳವಾಗಿತ್ತು.
ಗೆದ್ದ ಪ್ರಮುಖರು: ಅಭಿಷೇಕ್ ಬ್ಯಾನರ್ಜಿ, ಮಹುವಾ ಮೊಯಿತ್ರಾ, ಶತ್ರುಘ್ನ ಸಿನ್ಹಾ, ಸುದೀಪ್ ಬಂಡೋಪಾಧ್ಯಾಯ, ಕೀರ್ತಿ ಆಜಾದ್
ಸೋತ ಪ್ರಮುಖರು: ರೇಖಾ ಪಾತ್ರ, ಲಾಕೆಟ್ ಚಟರ್ಜಿ, ಸುಕಾಂತ ಮಜುಮ್ದಾರ್, ಎಸ್.ಎಸ್.ಅಹ್ಲುವಾಲಿಯಾ