ಸಾರಾಂಶ
ಲಖನೌ/ ನವದೆಹಲಿ: ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಭಾರೀ ಹಿನ್ನಡೆಯಾದ ಬೆನ್ನಲ್ಲೇ ಇದೀಗ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ರಾಜ್ಯದ ನಾಯಕರು ಬಂಡಾಯವೆದ್ದಿದ್ದಾರೆ ಎಂಬ ಬಲವಾದ ಸುದ್ದಿ ಹರಿದಾಡಿದೆ. ಅದಕ್ಕೆ ಪುಷ್ಟಿ ನೀಡುವಂತೆ ಉಪ ಮುಖ್ಯಮಂತ್ರಿ ಕೇಶವಪ್ರಸಾದ್ ಮೌರ್ಯ ಅವರು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಮತ್ತು ಪಕ್ಷದ ರಾಜ್ಯಾಧ್ಯಕ್ಷ ಭೂಪೇಂದ್ರ ಚೌಧರಿ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ನಡ್ಡಾ ಅವರನ್ನು ದೆಹಲಿಯಲ್ಲಿ ಪ್ರತ್ಯೇಕವಾಗಿ ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ್ದಾರೆ.
ಈ ವೇಳೆ ಇತ್ತೀಚಿನ ಹಿನ್ನಡೆ ಕಾರಣ ರಾಜ್ಯಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡುವ ಪ್ರಸ್ತಾಪವನ್ನು ಚೌಧರಿ ಮಂಡಿಸಿದರು ಎನ್ನಲಾಗಿದೆ. ‘ಆದರೆ ವರಿಷ್ಠರು, ಪಕ್ಷದ ನಾಯಕತ್ವದ ಬಗ್ಗೆ ಯಾವುದೇ ಬಹಿರಂಗ ಹೇಳಿಕೆ ನೀಡದಂತೆ ಉತ್ತರ ಪ್ರದೇಶದ ಎಲ್ಲಾ ನಾಯಕರಿಗೂ ತಾಕೀತು ಮಾಡಿದರು ಹಾಗೂ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ. ಶೀಘ್ರ ನಡೆಯಲಿರುವ 10 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಳ ಮೇಲೆ ಗಮನ ಹರಿಸಿ ಎಂದೂ ತಿಳಿಸಿದರು’ ಎಂದು ಮೂಲಗಳು ಹೇಳಿವೆ.ಆದರೂ, ಸದ್ಯದಲ್ಲೇ ನಡೆಯಲಿರುವ 10 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಬಳಿಕ ಉತ್ತರ ಪ್ರದೇಶದ ಬಿಜೆಪಿಯಲ್ಲಿ ‘ದೊಡ್ಡ ಬದಲಾವಣೆ’ ಆಗಲಿದೆ ಎಂದು ಹೇಳಲಾಗುತ್ತಿದೆ. ಪಕ್ಷ ಸಂಘಟನೆಯಲ್ಲಿ ಈ ಬದಲಾವಣೆ ಮಾಡಲು ಖುದ್ದು ಪ್ರಧಾನಿ ನರೇಂದ್ರ ಮೋದಿ ಬಯಸಿದ್ದಾರೆ ಎಂದು ವರದಿಗಳು ಹೇಳಿವೆ.
ಇದರ ನಡುವೆ, ಮೋದಿ ಹಾಗೂ ಕೇಂದ್ರ ಸಚಿವ ಅಮಿತ್ ಶಾ ಅವರು ದಿಲ್ಲಿಯಲ್ಲಿ ಬುಧವಾರ ಸಂಜೆ ಮಾತುಕತೆ ನಡೆಸಿದ್ದಾರೆ. ಇನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯಪಾಲೆ ಆನಂದಿಬೆನ್ ಪಟೇಲ್ರನ್ನು ಭೇಟಿಯಾಗಿ ಚರ್ಚಿಸಿರುವುದು ಕುತೂಹಲ ಮೂಡಿಸಿದೆ.ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೂಡ ಸದ್ಯದಲ್ಲೇ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿಯನ್ನು ಬದಲಿಸಲಾಗುತ್ತದೆ ಎಂದು ಲೋಕಸಭೆ ಚುನಾವಣೆ ಮುನ್ನ ಹೇಳಿದ್ದರು. ಆ ಹೇಳಿಕೆ ಮಾಸುವ ಮುನ್ನವೇ ಈ ವಿದ್ಯಮಾನ ನಡೆದಿದೆ.
ಯೋಗಿಯಿಂದಾಗಿ ಲೋಕಸಭೆಯಲ್ಲಿ ಹಿನ್ನಡೆ:ಕಳೆದ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಕೇವಲ 36 ಸ್ಥಾನಗಳನ್ನು ಗೆದ್ದಿತ್ತು. ವಿಪಕ್ಷಗಳ ಇಂಡಿಯಾ ಮೈತ್ರಿಕೂಟ 43 ಸ್ಥಾನಗಳನ್ನು ಗೆದ್ದಿತ್ತು. 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 64 ಸ್ಥಾನಗಳನ್ನು ಗೆದ್ದಿತ್ತು. ಲೋಕಸಭೆ ಚುನಾವಣೆಯಲ್ಲಿ ಆದ ಹಿನ್ನಡೆ ಬೆನ್ನಲ್ಲೇ ರಾಜ್ಯದಲ್ಲಿ ಯೋಗಿ ಆದಿತ್ಯನಾಥ್ ನಾಯಕತ್ವದ ವಿರುದ್ಧ ಅಪಸ್ವರ ಎದ್ದಿದೆ. ಯೋಗಿ ಕಾರ್ಯಶೈಲಿಯೇ ಚುನಾವಣೆಯಲ್ಲಿ ಹಿನ್ನಡೆಗೆ ಕಾರಣ ಎಂದು ಸೋತ ನಾಯಕರು ಆರೋಪಿಸಿದ್ದಾರೆ.
ಇದರ ನಡುವೆ ಡಿಸಿಎಂ ಮೌರ್ಯ ಕಳೆದ ವಾರ ಹೇಳಿಕೆ ನೀಡಿ, ‘ಸರ್ಕಾರಕ್ಕಿಂತ ಪಕ್ಷ ಸಂಘಟನೆಯೇ ಮುಖ್ಯ’ ಎಂದಿದ್ದರು. ಇದು ಯೋಗಿ ವಿರುದ್ಧದ ಬಂಡಾಯದ ಸುಳಿವು ನೀಡಿತ್ತು.ಈ ನಡುವೆ, ರಾಜ್ಯದ ಸಚಿವರ ಜೊತೆ ಸಭೆ ನಡೆಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೂಡಲೇ ಉಪ ಚುನಾವಣೆಗೆ ಎಲ್ಲರೂ ಒಗ್ಗಟ್ಟಿನಿಂದ ಸಿದ್ಧತೆ ಮಾಡಿಕೊಳ್ಳಲು ಸೂಚಿಸಿದ್ದಾರೆ.
ಎಸ್ಪಿ-ಮೌರ್ಯ ಏಟು-ತಿರುಗೇಟು:ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರೂ ಬುಧವಾರ ಇದೇ ರೀತಿಯ ಹೇಳಿಕೆ ನೀಡಿದ್ದು, ಬಿಜೆಪಿಯಲ್ಲಿ ಎದ್ದಿರುವ ಭಿನ್ನಮತದಿಂದ ರಾಜ್ಯದ ಆಡಳಿತ ಹಳ್ಳ ಹಿಡಿದಿದೆ. ಬಿಜೆಪಿ ಮುಳುಗುವ ಹಡಗು ಎಂದು ಆರೋಪಿಸಿದ್ದಾರೆ. ಆದರೆ, ‘ಸಮಾಜವಾದಿ ಪಾರ್ಟಿ ಹಗಲುಗನಸು ಕಾಣುತ್ತಿದೆ. ಆ ಪಕ್ಷ ಎಂದಿಗೂ ಮತ್ತೆ ಅಧಿಕಾರಕ್ಕೆ ಮರಳದು’ ಎಂದು ಕೇಶವಪ್ರಸಾದ ಮೌರ್ಯ ತಿರುಗೇಟು ನೀಡಿದ್ದಾರೆ.