ದೈವಬಲ ಇದ್ದವರಿಗೆ ಮರಳು ಗಣಿಗಾರಿಕೆ ಟೆಂಡರ್‌

| Published : Jun 10 2025, 04:09 AM IST

ದೈವಬಲ ಇದ್ದವರಿಗೆ ಮರಳು ಗಣಿಗಾರಿಕೆ ಟೆಂಡರ್‌
Share this Article
  • FB
  • TW
  • Linkdin
  • Email

ಸಾರಾಂಶ

ಆರ್ಥಿಕ ಬಲಾಢ್ಯರಿಗಿಂತ ದೈವಬಲ ಹೊಂದಿದ್ದವರು ಈ ಬಾರಿಯ ಮರಳು ಗಣಿಗಾರಿಕೆ ಟೆಂಡರ್ ಪಡೆಯುವುದು ನಿಶ್ಚಿತವಾಗಿದೆ. ಟೆಂಡರನಲ್ಲಿ ಭಾಗಿಯಾಗಿರುವ 274 ಜನರ ದಾಖಲೆ ಪರಿಶೀಲನೆ ಕಷ್ಟಕರ. ಪ್ರತಿಯೊಬ್ಬ ಟೆಂಡರ್‌ದಾರರ ದಾಖಲೆ ಕನಿಷ್ಠ ನೂರರಿಂದ ನೂರೈವತ್ತು ಪುಟಗಳಿದ್ದು ಇವುಗಳ ಪರಿಶೀಲನೆ ನಡೆಸಿ ಮತ್ತೊಂದು ಸಭೆ ನಡೆಸಿ ಜಿಲ್ಲಾಧಿಕಾರಿಗಳ ಅನುಮೋದನೆಗೆ ಕಳುಹಿಸಿದ ನಂತರ ಟೆಂಡರ್‌ದಾರರು ಏಕಧರ ನಮೂದಿಸಿದ್ದರೆ ಲಾಟರಿ ಮೂಲಕ ಟೆಂರ್‌ದಾರರ ಘೋಷಣೆ ಮಾಡಲಾಗುವುದು ಎಂದು ಇಲಾಖೆ ಸ್ವಷ್ಟಪಡಿಸಿದೆ.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಆರ್ಥಿಕ ಬಲಾಢ್ಯರಿಗಿಂತ ದೈವಬಲ ಹೊಂದಿದ್ದವರು ಈ ಬಾರಿಯ ಮರಳು ಗಣಿಗಾರಿಕೆ ಟೆಂಡರ್ ಪಡೆಯುವುದು ನಿಶ್ಚಿತವಾಗಿದೆ.

೨೦೨೩ಕ್ಕೆ ಕೊನೆಗೊಂಡ ಮರಳು ಗಣಿಗಾರಿಕೆ ಟೆಂಡರ್ ಸುದೀರ್ಘ ೨ ವರ್ಷದ ನಂತರ ೨೦೨೫ ಮೇ ತಿಂಗಳಿನಲ್ಲಿ ಮತ್ತೊಮ್ಮೆ ಮರಳು ಗಣಿಗಾರಿಕೆ ಟೆಂಡರ್‌ಗೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಮೇ ತಿಂಗಳ 9ರಂದು ನಡೆದ ಟೆಂಡರ್ ಪ್ರಕ್ರಿಯೆ ಅಂತಿಮಗೊಂಡು ಈಗಾಗಲೇ ಮತ್ತೊಂದು ತಿಂಗಳ ಸನಿಹಕ್ಕೆ ಬಂದಿದ್ದರೂ ಟೆಂಡರ್ ತೆರೆಯುವ ಸೂಚನೆಗಳೇ ಕಾಣದಾಗಿದೆ. ಮೇ 25ರಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸಭೆ ನಡೆಸಿ ಟೆಂಡರ್‌ದಾರರ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲು ತಿರ್ಮಾನಿಸಲಾಗಿತ್ತು. ಇದರಂತೆ ಕಳೆದ ಹದಿನೈದು ದಿನಗಳಿಂದ ದಾಖಲೆ ಪರಿಶೀಲನೆ ನಡೆದಿದ್ದು, ಟೆಂಡರನಲ್ಲಿ ಭಾಗಿಯಾಗಿರುವ 274 ಜನರ ದಾಖಲೆ ಪರಿಶೀಲನೆ ಕಷ್ಟಕರ. ಪ್ರತಿಯೊಬ್ಬ ಟೆಂಡರ್‌ದಾರರ ದಾಖಲೆ ಕನಿಷ್ಠ ನೂರರಿಂದ ನೂರೈವತ್ತು ಪುಟಗಳಿದ್ದು ಇವುಗಳ ಪರಿಶೀಲನೆ ನಡೆಸಿ ಮತ್ತೊಂದು ಸಭೆ ನಡೆಸಿ ಜಿಲ್ಲಾಧಿಕಾರಿಗಳ ಅನುಮೋದನೆಗೆ ಕಳುಹಿಸಿದ ನಂತರ ಟೆಂಡರ್‌ದಾರರು ಏಕಧರ ನಮೂದಿಸಿದ್ದರೆ ಲಾಟರಿ ಮೂಲಕ ಟೆಂರ್‌ದಾರರ ಘೋಷಣೆ ಮಾಡಲಾಗುವುದು ಎಂದು ಇಲಾಖೆ ಸ್ವಷ್ಟಪಡಿಸಿದೆ.

ದೇವರ ಬಲಹೊಂದಿದ್ದವರಿಗೆ ಅವಕಾಶ:

ಈ ಬಾರಿಯ ಟೆಂಡರ್‌ನಲ್ಲಿ ಹಲವು ಆರ್ಥಿಕ ಬಲಾಢ್ಯರು 26 ಮರಳು ಗಣಿಗಾರಿಕೆ ಪ್ರದೇಶಕ್ಕೂ ಭಾಗವಹಿಸಿದ್ದಾರೆ. ಸಣ್ಣ ಹಾಗೂ ಮಾಧ್ಯಮ ಆರ್ಥಿಕತೆ ಹೊಂದಿರುವ ಜನರು ಗುಂಪು ರಚಿಸಿಕೊಂಡು ಷೇರು ಸಂಗ್ರಹಿಸಿ ಎರಡರಿಂದ ಮೂರು ಗಣಿ ಕೇಂದ್ರಗಳಿಗೆ ಟೆಂಡರ್‌ ಹಾಕಿದ್ದಾರೆ. ಒಟ್ಟಾರೆ ತಮ್ಮ ಹಣ ಬಲದ ಸಾಮರ್ಥ್ಯಕ್ಕೆ ತಕ್ಕಂತೆ ಹಲವರು ಟೆಂಡರ್‌ನಲ್ಲಿ ಭಾಗವಹಿಸಿದ್ದಾರೆ. ಆದರೆ, ಈ ಬಾರಿ ಮನಬಂದಂತೆ ದರ ಸೂಚನೆಗೆ ಅವಕಾಶ ಇಲ್ಲದಿರುವುದು ಟೆಂಡರ್ ಪಡೆದೇ ತೀರಬೇಕು ಎಂಬ ಹಂಬಲವಿರುವ ಹಲವರಿಗೆ ನಿರಾಸೆ ಮೂಡಿಸುವುದು ನಿಶ್ಚಿತವಾಗಿದೆ. ಟೆಂಡರ್ ನಿಯಮದಂತೆ 255ರಿಂದ 475 ರು. ದರದಲ್ಲಿ ಪ್ರತಿ ಮೆಟ್ರಿಕ್ ಟನ್ ಮರಳನ್ನು ನದಿಯಿಂದ ತೆಗೆದು ಸರ್ಕಾರ ಸೂಚಿಸಿದ ಪ್ರದೇಶಕ್ಕೆ ಟೆಂಡರ್‌ದಾರರು ಸಾಗಿಸಬೇಕಿದೆ. ಆದರೆ, ಟೆಂಡರ್ ಪಡೆದೇ ತಿರಬೇಕು ಎಂಬ ಹಪಾಹಪಿಯಿಂದ ಬಹುತೇಕ ಟೆಂಡರ್‌ದಾರರು ಕನಿಷ್ಠ ಮೊತ್ತವಾದ 255 ರು. ಗಳಿಗೆ ಟೆಂಡರ್ ಸೂಚಿಸಿದ್ದಾರೆ. ಇದರಿಂದಾಗಿ ಅನಿವಾರ್ಯವಾಗಿ ಟೆಂಡರ್ ಲಾಟರಿ ಮೂಲಕ ಬಿಕರಿಯಾಗುವುದು ನಿಶ್ಚಿತವಾಗಿದೆ. ಇದರಿಂದಾಗಿ ಈ ಬಾರಿ ದೈವಬಲ ಹೊಂದಿದ್ದವರಿಗೆ ಮರಳು ಗಣಿಗಾರಿಕೆ ಕೇಂದ್ರಗಳು ದೊರಕುವುದು ನಿಶ್ಚಿತವಾಗಿದೆ.ಕಳೆದ ಬಾರಿಗಿಂತ ಭಿನ್ನ:

೨೦೧೭ರ ಮರಳು ಟೆಂಡರ್‌ಗಿಂತ ವಿಭಿನ್ನವಾಗಿರುವ ೨೦೨೫ರ ಮರಳು ಟೆಂಡರ್‌ನಲ್ಲಿ ಹಲವು ವಿಶೇಷಗಳಿದ್ದು ಹೇಮಾವತಿ ನದಿ ಹರಿಯುವ ಆಲೂರು-ಬೇಲೂರು ಹಾಗೂ ಸಕಲೇಶಪುರ ತಾಲೂಕಿನ ೨೬ ಮರಳುಗಣಿಗಾರಿಕೆ ಪ್ರದೇಶಗಳ ಪೈಕಿ ೬ ಎಕರೆಯಿಂದ ೩೦ ಎಕರೆವರಗೆ ಟೆಂಡರ್‌ ಅವಕಾಶ ನೀಡಲಾಗಿತ್ತು. ಸಾಕಷ್ಟು ಸಣ್ಣ, ಮಧ್ಯಮ ಹಾಗೂ ಬೃಹತ್ ಮರಳುಗಣಿಗಾರಿಕೆ ಪ್ರದೇಶಗಳನ್ನು ಗಣಿ ಇಲಾಖೆ ಸೂಚಿಸಿತ್ತು. ಇದರಿಂದಾಗಿ ತಮ್ಮ ಆರ್ಥಿಕ ಸಾಮರ್ಥ್ಯಕ್ಕೆ ತಕ್ಕಂತೆ ಗಣಿ ಪ್ರದೇಶಗಳನ್ನು ಟೆಂಡರ್‌ದಾರರ ಪಡೆದಿದ್ದರು. ಆದರೆ, ಈ ಬಾರಿ ೨೬ ಮರಳುಗಣಿಗಾರಿಕೆ ಪ್ರದೇಶಗಳು ಒಂದೇ ಗಾತ್ರದಲ್ಲಿದ್ದ ತಲಾ ೧೨.೫ ಎಕರೆ ಪ್ರದೇಶದಲ್ಲಿ ಪ್ರತಿಯೊಂದು ಗಣಿಗಾರಿಕೆ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಅವಕಾಶ ನೀಡಲಾಗಿದೆ. ಇದರಿಂದಾಗಿ ಹಲವು ಗಣಿ ಪ್ರದೇಶದಲ್ಲಿ ಯಥೇಚ್ಛವಾಗಿ ಮರಳು ದೊರೆತರೆ ಕೆಲವು ಗಣಿ ಪ್ರದೇಶದ ಸೀಮಿತಪ್ರದೇಶದಲ್ಲಿ ಮಾತ್ರ ಮರಳು ದೊರಕುವುದರಿಂದ ಟೆಂಡರ್‌ದಾರರಿಗೆ ನಷ್ಟವಾಗುವ ಸಾಧ್ಯತೆ ದಟ್ಟವಾಗಿದೆ.ಕಳೆದ ಬಾರಿಯ ಮರಳು ಟೆಂಡರ್ ಪಡೆದ ವ್ಯಕ್ತಿ ನೇರವಾಗಿ ಮಾರಾಟದ ಹಕ್ಕು ಹೊಂದಿದ್ದರೆ ಈ ಬಾರಿ ಮರಳು ಮಾರಾಟದ ಹಕ್ಕು ಸರ್ಕಾರವೇ ಉಳಿಸಿಕೊಂಡಿರುವುದು ಈ ಬಾರಿಯ ವಿಶೇಷಗಳಲ್ಲಿ ಒಂದಾಗಿದೆ.ಕೈಬದಲಾವಣೆ ಸಾಧ್ಯತೆ:

ಟೆಂಡರ್‌ನಲ್ಲಿ ಪಾಲ್ಗೊಂಡಿರುವ ಪ್ರತಿ ವ್ಯಕ್ತಿ ಪ್ರತಿ ಮರಳುಗಣಿಗಾರಿಕೆ ಕೇಂದ್ರಕ್ಕೆ ಶೇ. ೫ ಕನಿಷ್ಠ ಭದ್ರತಾ ಠೇವಣಿ ಇಟ್ಟು ಟೆಂಡರ್‌ನಲ್ಲಿ ಭಾಗವಹಿಸಿದ್ದಾರೆ. ಇದರಿಂದಾಗಿ ಪ್ರತಿ ಮರಳು ಟೆಂಡರ್‌ದಾರ ಪ್ರತಿ ಮರಳುಗಣಿಗಾರಿಕಾ ಪ್ರದೇಶಕ್ಕಾಗಿ ಕನಿಷ್ಠ ೧೦ರಿಂದ ೧೫ ಲಕ್ಷ ಕನಿಷ್ಠ ಠೇವಣಿ ಪಾವತಿಸಿದ್ದಾರೆ. ಇದಲ್ಲದೆ. ಟೆಂಡರ್ ಪಡೆದ ವ್ಯಕ್ತಿ ಮರಳುಗಾರಿಕ ಪ್ರದೇಶದಲ್ಲಿ ದೊರಕುವ ಮರಳಿನ ಸಾಂದ್ರತೆಗೆ ತಕ್ಕಂತೆ ಶೇ ೨.೫ ದರದಲ್ಲಿ ಮುಂಗಡ ಹಣವನ್ನು ಸರ್ಕಾರಕ್ಕೆ ಸಲ್ಲಿಸಬೇಕಿದೆ. ಇದರಂತೆ ಪ್ರತಿ ಮರಳುಗಣಿಗಾರಿಕೆ ಪ್ರದೇಶಕ್ಕೆ ಈ ಮೊತ್ತ ೩೦ ಲಕ್ಷದಿಂದ ಒಂದು ಕೋಟಿವರೆಗೂ ತಲುಪಲಿರುವುದರಿಂದ ಟೆಂಡರ್‌ನಲ್ಲಿ ಭಾಗವಹಿಸಿರುವ ಬಹುತೇಕರು ಈ ಮೊತ್ತ ಪಾವತಿಸುವುದು ಅಸಾಧ್ಯವಾಗಿದೆ. ಆದ್ದರಿಂದ, ಲಾಟರಿ ಮೂಲಕ ಮರಳುಗಣಿಗಾರಿಕೆ ಟೆಂಡರ್ ದೊರೆತರು ಟೆಂಡರ್ ತಮ್ಮದಾಗಿಸಿಕೊಳ್ಳುವುದು ಅಸಾಧ್ಯವಾಗಿದೆ. ಆದ್ದರಿಂದ, ಟೆಂಡರ್‌ನಲ್ಲಿ ಭಾಗವಹಿಸಿರುವವರ ಪಾಲಿಗೆ ಆರ್ಥಿಕವಾಗಿ ಬಲಢ್ಯರಾಗಿರುವ ವ್ಯಕ್ತಿಗಳೆ ಆಪತ್ಬಾಂಧವರಾಗಿ ನಿಲ್ಲಲಿದ್ದು ಯಾರದೂ ದಾಖಲೆಯಲ್ಲಿ ಟೆಂಡರ್ ನಡೆದರೂ ಮತ್ಯಾರೂ ಗಣಿಗಾರಿಕೆ ಮಾಲೀಕರಾಗುವ ಸಾಧ್ಯತೆ ಹೆಚ್ಚಿದ್ದು ಕೈಬದಲಾಗುವ ಸಾಧ್ಯತೆ ನಿಚ್ಚಳವಾಗಿದೆ.* ಹೇಳಿಕೆ1

ದಾಖಲೆ ಪರಿಶೀಲನೆ ಕಾರ್ಯ ನಡೆಯುತ್ತಿದ್ದು, ಇದಾದ ನಂತರ ಜಿಲ್ಲಾಧಿಕಾರಿಗಳ ಅನುಮೋದನೆಗೆ ಕಳುಹಿಸಿ ಏಕದರ ಸೂಚಿಸಿದ್ದರೆ ಲಾಟರಿ ಮೂಲಕ ಟೆಂಡರ್‌ದಾರರ ಆಯ್ಕೆ ಮಾಡಲಾಗುವುದು.

- ನಾಗರಾಜ್, ಗಣಿ ವಿಜ್ಞಾನಿ* ಹೇಳಿಕೆ2

ಟೆಂಡರ್ ನಡೆದು ತಿಂಗಳೇ ಕಳೆದರೂ ಟೆಂಡರ್ ತೆರೆಯಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಮೀನಾಮೇಷ ಎಣಿಸುತಿದ್ದಾರೆ. ಟೆಂಡರ್ ಏನೇ ಆಗಲಿ ಶೀಘ್ರವೆ ಓಪನ್ ಮಾಡಲಿ.

- ಪ್ರಜ್ವಲ್, ಟೆಂಡರ್‌ದಾರ====

ಫೋಟೋ:

೬ ಹೇಮಾವತಿ ನದಿಯ ಮರಳ ಒಡಲು.