ಸಾರಾಂಶ
ಮಂಜುನಾಥ್ ಮೃತದೇಹ ಸೋಲದೇವನಹಳ್ಳಿ ಅರಣ್ಯ ಪ್ರದೇಶದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ದಾಬಸ್ಪೇಟೆ: ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಲದೇವನಹಳ್ಳಿ ಅರಣ್ಯ ಪ್ರದೇಶದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಯೂಟ್ಯೂಬರ್ ಶವ ಪತ್ತೆಯಾಗಿದೆ.
ಬೆಂಗಳೂರು ನಗರ ಜಿಲ್ಲೆ ದಾಸರಹಳ್ಳಿಯ ಮಂಜುನಾಥ ನಗರದ ನಿವಾಸಿ ಮಂಜುನಾಥ್(38) ಆತ್ಮಹತ್ಯೆ ಮಾಡಿಕೊಂಡವರು. ಈತ ಬೆಂಗಳೂರಿನ ಬಾಗಲುಗುಂಟೆಯಲ್ಲಿ ಟಿವಿ11 ಎಂಬ ಯೂಟ್ಯೂಬ್ ಚಾನಲ್ ನಡೆಸುತ್ತಿದ್ದ. ಗುರುವಾರ ಮಧ್ಯರಾತ್ರಿ ಫೇಸ್ಬುಕ್ ಲೈವ್ಗೆ ಬಂದು, ಚಕ್ರಬಡ್ಡಿ ವ್ಯವಹಾರ ಮಾಡುತ್ತಿರುವ ಪೊಲೀಸರು, ನನಗೆ ಮತ್ತು ಯೂಟ್ಯೂಬ್ನಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ನಾನು ಪೊಲೀಸರ ಬಗ್ಗೆ ಮಾತನಾಡಿದ್ದೇನೆಂದು ನನ್ನ ಮೇಲೆ ಎಫ್ ಐಆರ್ ಮಾಡಬೇಡಿ ಎಂದು ಲೈವ್ ಕೊನೆಗೊಳಿಸಿದ್ದನೆನ್ನಲಾಗಿದೆ.
ಮರುದಿನ ಬೆಳಗ್ಗೆ ಮಂಜುನಾಥ್ ಮೃತದೇಹ ಸೋಲದೇವನಹಳ್ಳಿ ಅರಣ್ಯ ಪ್ರದೇಶದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ನೆಲಮಂಗಲ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ನನ್ನ ಸಾವಿಗೆ ಯಾರೂ ಕಾರಣರಲ್ಲ, ನಾನು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದೇನೆ, ಕ್ಷಮಿಸಿ ಬಿಡಿ ಎಂಬುದಾಗಿ ಬರೆದಿರುವ ಡೆತ್ನೋಟ್ ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.