ಸಾರಾಂಶ
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ವಿದ್ಯಾರ್ಥಿಗಳು ಜೀವನದಲ್ಲಿ ಎಷ್ಟೇ ಉನ್ನತ ಸ್ಥಾನಕ್ಕೇರಿದರೂ ಕೂಡ ತಮಗೆ ವಿದ್ಯೆ ಕಲಿಸಿದ ಗುರುಗಳನ್ನು ಗೌರವದಿಂದ ಕಾಣಬೇಕೆಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎಚ್.ಎಲ್.ದಿವಾಕರ್ ಕರೆ ನೀಡಿದ್ದಾರೆ.ಶುಕ್ರವಾರ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ, ಶೇ.100 ಫಲಿತಾಂಶ ಪಡೆಯಲು ಕಾರಣರಾದ ಸಂಸ್ಥೆಯ ಉಪನ್ಯಾಸಕ ವೃಂದ ಹಾಗೂ ಶಿಕ್ಷಣದಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಕಳೆದ 35 ವರ್ಷಗಳಿಂದ ಸಂಘಟನೆ ವಾರ್ಷಿಕವಾಗಿ ಈ ಕಾರ್ಯಕ್ರಮ ಹಮ್ಮಿಕೊಂಡು ಬಂದಿದ್ದು, ಶಿಕ್ಷಣ ಸಂಘಟನೆ ಮತ್ತು ಹೋರಾಟದಲ್ಲಿ ನಾವು ಜಯ ಕಾಣಬೇಕಾದರೆ ಉತ್ತಮ ಶಿಕ್ಷಣ ಅಗತ್ಯ. ಸಂಘಟನೆಯು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ವಿರುದ್ಧ ನಡೆಯುವ ಯಾವುದೇ ದೌರ್ಜನ್ಯಗಳನ್ನು ಕಾನೂನಿನ ಮೂಲಕ ಎದುರಿಸುತ್ತಿದೆ ಎಂದರು.ಸುಂಟಿಕೊಪ್ಪ ಪೊಲೀಸ್ ಠಾಣೆ ಎಎಸ್ಐ ಸುರೇಶ್ ಉದ್ಘಾಟಿಸಿ ಮಾತನಾಡಿ, ಮಕ್ಕಳು ಅತಿಯಾದ ಮೊಬೈಲ್ ಬಳಕೆಯಿಂದ ದೂರವಿರಿ. ಮಾದಕ ವಸ್ತು ಸೇರಿದಂತೆ ದುಶ್ಚಟಗಳಿಗೆ ಬಲಿಯಾಗದೆ, ಶಿಕ್ಷಣಕ್ಕೆ ಆದ್ಯತೆ ನೀಡುವ ಮೂಲಕ ಶಿಕ್ಷಣ ಸಾಧನೆ ದೇಶದ ಉತ್ತಮ ಪ್ರಜೆಗಳಾಗಿ ಮೂಡಿಬರಬೇಕೆಂದು ಕರೆ ನೀಡಿದರು.
ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್ಕುಮಾರ್ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ದೇಶಕ್ಕೆ ಸಂವಿಧಾನ ನೀಡಿದ್ದು ಮಾತ್ರವಲ್ಲದೆ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಪರಿಕಲ್ಪನೆ ಜಾರಿಗೆ ಬರುವಂತೆ ಮಾಡಿದ ಮಹನೀಯರು ಎಂದರು.ಗ್ರಾ.ಪಂ.ಸದಸ್ಯ ರಫೀಕ್ಖಾನ್ ಮಾತನಾಡಿದರು.
ಪ್ರಾಂಶುಪಾಲ ಶ್ರೀಲತಾ ಅಧ್ಯಕ್ಷತೆ ವಹಿಸಿದ್ದರು.ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಿದ 6 ಮಂದಿ ವಿದ್ಯಾರ್ಥಿ ವಿದ್ಯಾರ್ಥಿನಿಯರಾದ ಕಲಾ ವಿಭಾಗದಲ್ಲಿ ಶ್ವೇತಾ ಮತ್ತು ತುಳಸಿ, ವಿಜ್ಞಾನ ವಿಭಾಗದಲ್ಲಿ ಸಫ್ರಾನಾ ಕೆ.ಎಂ., ಯಶಸ್ವಿನಿ, ವಾಣಿಜ್ಯ ವಿಭಾಗದಲ್ಲಿ ಕವಿತ, ಸನೂಷ ಅವರನ್ನು ಸನ್ಮಾನಿಸಲಾಯಿತು.
ಕಾಲೇಜಿನ ಪ್ರಾಚಾರ್ಯರು ಮತ್ತು ಉಪನ್ಯಾಸಕರನ್ನು ಗೌರವಿಸಲಾಯಿತು.ಗ್ರಾ.ಪಂ.ಉಪಾಧ್ಯಕ್ಷೆ ಶಿವಮ್ಮ, ಸದಸ್ಯರಾದ ಶಬ್ಬೀರ್, ಸೋಮನಾಥ್, ಜಿಲ್ಲಾ ಸಂಘಟನಾ ಸಂಚಾಲಕ ಹಿರಿಯ ಸಲಹೆಗಾರ ಈರಪ್ಪ, ದುರ್ಗಯ್ಯ, ಉಪನ್ಯಾಸಕರಾದ ಈಶ, ಸುನೀತಾ, ಗಿರೀಶ್, ಕೆ.ಸಿ.ಕವಿತ, ಕವಿತ ಭಕ್ತ್, ಸಂಧ್ಯಾ, ಅನುಷಾ, ಕನಕ, ಸೀಮಾ, ಅಭಿಷೇಕ್ ಮತ್ತಿತರರು ಇದ್ದರು.