ಧಾರವಾಡ:

ಇಲ್ಲಿಯ ಆರ್.ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಜೂ. 21ರಂದು ಬೆಳಗ್ಗೆ 6.45ಕ್ಕೆ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಯೋಜಿಸಲಾಗುವುದು. 1000 ಯೋಗಾಪಟುಗಳು ಭಾಗವಹಿಸಲಿದ್ದು, ಬೇಕಾದ ಸಿದ್ಧತೆ ಕೈಗೊಳ್ಳಲು ಜಿಲ್ಲಾಧಿಕಾರಿ ಸ್ನೇಹಲ್ ಆರ್. ನಿರ್ದೇಶಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಯೋಗವನ್ನು ಕೇವಲ ಒಂದೇ ದಿನಕ್ಕೆ ಸೀಮಿತಗೊಳಿಸದೇ ಪ್ರತಿದಿನ ಯೋಗಾಸನ ಮಾಡುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಆರೋಗ್ಯ ರಕ್ಷಣೆಗೆ ಯೋಗ ಅತ್ಯುತ್ತಮ ಸಾಧನವಾಗಿದ್ದು, ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಯೋಗ ಅಳವಡಿಸಿಕೊಳ್ಳಬೇಕು ಎಂದರು.

ಯೋಗ ಫೆಡರೇಷನ್, ಯೋಗ ಒಕ್ಕೂಟ, ಯೋಗ ತರಬೇತಿ ಸಂಸ್ಥೆ, ಎನ್‌ಸಿಸಿ, ಎನ್ನೆಸ್ಸೆಸ್‌ ಹಾಗೂ ಶಾಲಾ ಕಾಲೇಜುಗಳಿಂದ ಜನರು ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಯೋಗ ನಡೆಯುವ ಸ್ಥಳದಲ್ಲಿ ಆ್ಯಂಬುಲೆನ್ಸ್‌, ಕುಡಿಯುವ ನೀರು ಹಾಗೂ ಇನ್ನಿತರ ಮೂಲಸೌಕರ್ಯ ಒದಗಿಸಬೇಕು. ಮಹಾನಗರ ಪಾಲಿಕೆಯಿಂದ ಸ್ವಚ್ಛತೆ ಹಾಗೂ ನೀರಿನ ವ್ಯವಸ್ಥೆ ಹಾಗೂ ವ್ಯವಸ್ಥಿತವಾಗಿ ಕಾರ್ಯಕ್ರಮ ನಡೆಯಲು ಅಗತ್ಯ ಕ್ರಮಕೈಗೊಳ್ಳುವಂತೆ ತಿಳಿಸಿದರು.

ಎಲ್ಲ ಇಲಾಖೆಯ ಅಧಿಕಾರಿ, ಸಿಬ್ಬಂದಿ, ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರು ತಮಗೆ ಅನುಕೂಲಕರ ಸಮಯದಲ್ಲಿ ಆನ್‌ಲೈನ್ ಮೂಲಕ ಯೋಗ ತರಬೇತಿ ಪಡೆಯಬಹುದು. ಆನ್‌ಲೈನ್ ವೆಬ್‌ಸೈಟ್ https://moa.habit.yoga?ref=Karnataka ಮೂಲಕ ಯೋಗ ತರಬೇತಿಗೆ ನೋಂದಾಯಿಸಿಕೊಂಡು ಯೋಗಾಭ್ಯಾಸ ಮಾಡಬಹುದು ಎಂದು ಹೇಳಿದರು.


ಜಿಲ್ಲೆಯ ಎಲ್ಲ ಆಯುಷ್ ವೈದ್ಯಾಧಿಕಾರಿಗಳು ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಯೋಗ ತರಬೇತಿದಾರರ ಸಹಕಾರದೊಂದಿಗೆ ನಿತ್ಯ ಯೋಗಾಭ್ಯಾಸದ ಆನ್‌ಲೈನ್ ತರಗತಿಗಳನ್ನು ಜೂ. 22ರಿಂದ ಜೂ. 21, 2027ರ ವರೆಗೆ ಆಯೋಜಿಸಲಾಗಿದೆ. ಎಲ್ಲ ಆಯುಷ್ ವೈದ್ಯಾಧಿಕಾರಿಗಳು ತಮ್ಮ ಚಿಕಿತ್ಸಾಲಯ ಆಸ್ಪತ್ರೆ ವ್ಯಾಪ್ತಿಯಲ್ಲಿನ ಸಾರ್ವಜನಿಕರು, ಐಟಿ ಉದ್ಯೋಗಿಗಳಿಗೆ, ಯುವಜನತೆಗೆ ಹಾಗೂ ವೃತ್ತಿಪರರಿಗೆ ಯೋಗ ತಲುಪಿಸುವ ದೃಷ್ಟಿಯಿಂದ ವಾಯ್-ಬ್ರೇಕ್ ಎಂಬ ಆ್ಯಪ್‌ ಡೌನ್‌ಲೋಡ್ ಮಾಡಿಕೊಂಡು ಯೋಗ ಅನುಸರಿಸಲು ಪ್ರೇರೇಪಿಸಬೇಕೆಂದು ಸೂಚಿಸಿದರು.

ಸಭೆಯಲ್ಲಿ ವೈಧಾಧಿಕಾರಿ ಡಾ. ಶಶಿಧರ ತಳಕಲ್, ಡಿಸಿಪಿ ರವೀಶ ಸಿ.ಆರ್., ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಜಿಲ್ಲಾ ಆಯುಷ್ ಅಧಿಕಾರಿ ಡಾ. ಗಣೇಶ ಕಬಾಡೆ, ಪತಂಜಲಿ ಯೋಗ ಸಮಿತಿ, ಎನ್‌ಎಸ್‌ಎಸ್ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್‌ ಸಂಸ್ಥೆಯ ಮುಖ್ಯಸ್ಥರು ಇದ್ದರು.