ಏ.1ರಂದು ಸಿದ್ದಗಂಗಾದಲ್ಲಿ ಶಿವಕುಮಾರ ಶ್ರೀಗಳ 117 ನೇ ಜಯಂತಿ

| Published : Mar 30 2024, 12:45 AM IST

ಸಾರಾಂಶ

ಕರ್ನಾಟಕ ರತ್ನ, ತ್ರಿವಿಧ ದಾಸೋಹಿ, ಕಾಯಕ ಯೋಗಿ, ನಡೆದಾಡುವ ದೇವರೆಂದೇ ನಾಡಿನಾದ್ಯಂತ ಹೆಸರುವಾಸಿಯಾಗಿದ್ದ ಸಿದ್ದಗಂಗೆಯ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಯವರ 117 ನೇ ಜಯಂತಿ ಹಾಗೂ ಗುರುವಂದನ ಮಹೋತ್ಸವ ಏ.1 ರಂದು ಸಿದ್ದಗಂಗಾ ಮಠದಲ್ಲಿ ನಡೆಯಲಿದೆ.

ಕನ್ನಡಪ್ರಭ ವಾರ್ತೆ ತುಮಕೂರುಕರ್ನಾಟಕ ರತ್ನ, ತ್ರಿವಿಧ ದಾಸೋಹಿ, ಕಾಯಕ ಯೋಗಿ, ನಡೆದಾಡುವ ದೇವರೆಂದೇ ನಾಡಿನಾದ್ಯಂತ ಹೆಸರುವಾಸಿಯಾಗಿದ್ದ ಸಿದ್ದಗಂಗೆಯ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಯವರ 117 ನೇ ಜಯಂತಿ ಹಾಗೂ ಗುರುವಂದನ ಮಹೋತ್ಸವ ಏ.1 ರಂದು ಸಿದ್ದಗಂಗಾ ಮಠದಲ್ಲಿ ನಡೆಯಲಿದೆ.ಶ್ರೀಮಠದಲ್ಲಿ ಅಂದು ಬೆಳಿಗ್ಗೆ 11 ಕ್ಕೆ ನಡೆಯಲಿರುವ ಶ್ರೀಗಳ 117ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವ ಸಮಾರಂಭವನ್ನು ಹರಿದ್ವಾರ ಪತಂಜಲಿ ಯೋಗಪೀಠದ ಸ್ವಾಮಿ ರಾಮದೇವ್ ಜೀ ಉದ್ಘಾಟಿಸಲಿದ್ದಾರೆ ಎಂದು ಸಿದ್ದಗಂಗಾ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಟಿ.ಕೆ. ನಂಜುಂಡಪ್ಪ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಸಮಾರಂಭದ ದಿವ್ಯ ನೇತೃತ್ವವನ್ನು ಸಿದ್ದಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ವಹಿಸುವರು. ಸುತ್ತೂರು ವೀರಸಿಂಹಾಸನ ಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಸಾನ್ನಿಧ್ಯವನ್ನು ಮುಂಡರಗಿ ಅನ್ನದಾನೇಶ್ವರ ಮಠಾಧ್ಯಕ್ಷರಾದ ಡಾ. ಶ್ರೀ ಅನ್ನದಾನೇಶ್ವರ ಸ್ವಾಮೀಜಿ, ಧಾರವಾಡ ಶ್ರೀ ಮುರುಘಾ ಮಠದ ಡಾ. ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಗದಗದ ವೀರೇಶ್ವರ ಪುಣ್ಯಾಶ್ರಮದ ಅಧ್ಯಕ್ಷರಾದ ಕಲ್ಲಯ್ಯ ಅಜ್ಜನವರು, ಸಿದ್ದಗಂಗಾ ಮಠದ ಉತ್ತರಾಧಿಕಾರಿ ಶಿವಸಿದ್ದೇಶ್ವರ ಸ್ವಾಮೀಜಿ ವಹಿಸುವರು ಎಂದರು.ಸಿದ್ದಗಂಗಾ ಮಠದ ಆಡಳಿತಾಧಿಕಾರಿ ವಿಶ್ವನಾಥ್ ಮಾತನಾಡಿ, ಶ್ರೀಗಳ ಕಾಲ ನಂತರ ಊರೂರಲ್ಲಿ ಭಕ್ತರು ಶ್ರೀಗಳ ಜಯಂತಿಯನ್ನು ಆಚರಣೆ ಮಾಡುತ್ತಾ ದಾಸೋಹ ವ್ಯವಸ್ಥೆ ಮಾಡುತ್ತಿದ್ದಾರೆ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಜಯಂತ್ಯುತ್ಸವಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೂ 1 ಲಕ್ಷಕ್ಕೂ ಅಧಿಕ ಮಂದಿ ಶ್ರೀಗಳ ಜಯಂತಿ ಮತ್ತು ಗುರುವಂದನಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.ಸಿದ್ದಗಂಗಾ ಮಠದಲ್ಲಿ ಬರುವ ಭಕ್ತರಿಗೆ ದಾಸೋಹ ವ್ಯವಸ್ಥೆಗೆ ಮೊದಲ ಪ್ರಾಶಸ್ತ್ಯ ನೀಡುವುದು ಶ್ರೀಗಳ ಪರಮ ಧ್ಯೇಯ. ಭಕ್ತರು ಸಂತೃಪ್ತಿಯಿಂದ ಕುಳಿತು ಊಟ ಮಾಡಬೇಕು ಎಂಬುದು ಸಹ ಶ್ರೀಗಳ ಇಚ್ಛೆ. ಹಾಗಾಗಿ 6 ಕಡೆ ದಾಸೋಹ ವ್ಯವಸ್ಥೆ ಮಾಡಲಾಗಿದ್ದು, ಎಲ್ಲ ಕಡೆಯಲ್ಲೂ ಟೇಬಲ್, ಚೇರ್, ಬಾಳೆ ಎಲೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.ಒಂದೇ ಬಾರಿಗೆ 30 ಸಾವಿರ ಮಂದಿ ಭಕ್ತರು ಕುಳಿತು ಊಟ ಮಾಡುವ ವ್ಯವಸ್ಥೆಯನ್ನು ಮಾಡಲಾಗಿದ್ದು, ಬೆಳಿಗ್ಗೆಯಿಂದ ರಾತ್ರಿವರೆಗೂ ದಾಸೋಹ ನಡೆಯಲಿದೆ ಎಂದು ಅವರು ತಿಳಿಸಿದರು.ಬೆಳಗಿನ ಉಪಾಹಾರಕ್ಕೆ ಉಪ್ಪಿಟ್ಟು, ಕೇಸರಿ ಬಾತ್, ಕಾಫಿ, ಟೀ ಇರುತ್ತದೆ. ಮಧ್ಯಾಹ್ನ ಊಟಕ್ಕೆ ಸಿಹಿಬೂಂದಿ, ಖಾರ ಬೂಂದಿ, ಹಪ್ಪಳ, ಉಪ್ಪಿನಕಾಯಿ, ಮಜ್ಜಿಗೆ, ಪಲ್ಯ, ಪಾಯಸ, ಚಿತ್ರಾನ್ನ, ಅನ್ನಸಾಂಬರು ಇರುತ್ತದೆ ಎಂದು ಅವರು ಮಾಹಿತಿ ನೀಡಿದರು.ಶ್ರೀಗಳ ಪ್ರತಿಮೆ ಉತ್ಸವ:ಅಂದು ಬೆಳಗ್ಗೆ 8 ಗಂಟೆಗೆ ಶ್ರೀಗಳ ಪ್ರತಿಮೆ ಉತ್ಸವವು ಶ್ರೀಮಠದ ಆವರಣದಲ್ಲಿ ನಡೆಯಲಿದೆ. ನಂತರ ಶ್ರೀಗಳ ಜಯಂತಿಗೆ ಆಗಮಿಸುವ ಅತಿಥಿಗಳನ್ನು ಪೂರ್ಣ ಕುಂಭದೊಂದಿಗೆ ಕಾರ್ಯಕ್ರಮದ ವೇದಿಕೆಗೆ ಕರೆದೊಯ್ಯಲಾಗುವುದು ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಎಸ್ಐಟಿ ಸಿಇಓ ಡಾ. ಶಿವಕುಮಾರಯ್ಯ, ಶ್ರೀಮಠದ ಹೆಚ್ಚುವರಿ ಆಡಳಿತಾಧಿಕಾರಿ ಮಲ್ಲಿಕಾರ್ಜುುನಯ್ಯ ಉಪಸ್ಥಿತರಿದ್ದರು.