ಡಂಬಳ: ಕಾಂಗ್ರೆಸ್‌ ಶಾಸಕ ಜಿ.ಎಸ್. ಪಾಟೀಲ ಅವರ ಪ್ರಯತ್ನದ ಫಲವಾಗಿ ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ 17ನೇ ಬಜೆಟ್‌ನಲ್ಲಿ ಡಂಬಳದಲ್ಲಿ ₹150 ಕೋಟಿ ವೆಚ್ಚದಲ್ಲಿ ತೋಟಗಾರಿಕೆ ಕಾಲೇಜು ಸ್ಥಾಪಿಸುವುದಾಗಿ ಘೋಷಣೆ ಮಾಡಿರುವುದು ಕೃಷಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ತೋಟಗಾರಿಕೆ ಕಾಲೇಜು ಸ್ಥಾಪನೆಗಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ಅವರ ಮೇಲೆ ಶಾಸಕ ಜಿ.ಎಸ್. ಪಾಟೀಲರು ನಿರಂತರ ಒತ್ತಡ ಹೇರಿದ್ದ ಫಲ ಬಜೆಟ್‌ನಲ್ಲಿ ಘೋಷಣೆಯಾಗಿದೆ. ಶಾಸಕರ ಪ್ರಯತ್ನಕ್ಕೆ ಜಿಲ್ಲೆಯ ರೈತರು, ಯುವಕರು, ಕೃಷಿ ಆಸಕ್ತರು ಹರ್ಷ ವ್ಯಕ್ತಪಡಿಸಿದ್ದಾರೆ.

ಬರದ ನಾಡಿಗೆ ನೀರು: ಮುಂಡರಗಿ ತಾಲೂಕು ಮಳೆ ಕೊರತೆಯಿಂದ ಬರದ ನಾಡಾಗಿತ್ತು. ಈ ಭಾಗದ ಕೆರೆಗಳು ಬತ್ತಿದ್ದವು. ಜಮೀನುಗಳಲ್ಲಿ ಬೆಳೆ ಇಲ್ಲದೆ ರೈತರು ಸಾಲದ ಸುಳಿಯಲ್ಲಿ ಸಿಲುಕಿ ಕಾರವಾರ, ಗೋವಾ, ಬೆಂಗಳೂರು, ಮಂಗಳೂರು ಸೇರಿದಂತೆ ವಿವಿಧ ಕಡೆ ಗುಳೆ ಹೋಗುವುದು ಅನಿವಾರ್ಯವಾಗಿತ್ತು. 2013ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯದ ಚುಕ್ಕಾಣಿ ಹಿಡಿಯುತ್ತಿದ್ದಂತೆ ರೈತರಿಗೆ ಮಾತು ಕೊಟ್ಟಂತೆ ಸಾವಿರಾರು ಕೋಟಿ ವೆಚ್ಚದಲ್ಲಿ ಸಿಂಗಟಾಲೂರು ಏತ ನೀರಾವರಿ ಯೋಜನೆ ಜಾರಿಗೊಳಿಸಿದರು. ಬಳಿಕ ಇದೇ ಯೋಜನೆಯಡಿ ಡಂಬಳದ ವಿಕ್ಟೋರಿಯಾ ಮಹಾರಾಣಿ ಕೆರೆ ಭರ್ತಿ ಮಾಡಿಸಿದರು. ಆಗ ಕೆರೆಗೆ ಬಾಗಿನ ಅರ್ಪಿಸಲು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರೆಸಿ ಅವರಿಂದ ಕೆರೆಗೆ ಬಾಗಿನ ಅರ್ಪಿಸುವಂತೆ ಮಾಡಿದ್ದು ಶಾಸಕರ ಹೆಗ್ಗಳಿಕೆ.

ಶಾಸಕರ ಈ ಪ್ರಯತ್ನವನ್ನು ಡಿ.ಡಿ. ಮೋರನಾಳ, ಅಬ್ದುಲಸಾಬ ಕಲಕೇರಿ, ಬಸವರಡ್ಡಿ ಬಂಡಿಹಾಳ, ಪುಲಕೇಶಗೌಡ ಪಾಟೀಲ, ರವಿ ದೊಡ್ಡಮನಿ, ಸೋಮಪ್ಪ ಹೈತಾಪುರ, ರಾಮಣ್ಣ ಮೇಗಲಮನಿ, ಹೇಮಣ್ಣ ಪೂಜಾರ, ಅಸ್ಲಂ ಕೊಪ್ಪಳ ಇತರರು ಸ್ವಾಗತಿಸಿದ್ದಾರೆ.

ಸಾಕಷ್ಟು ಪ್ರಯತ್ನ: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಸಹಕಾರದಿಂದ ₹150 ಕೋಟಿ ವೆಚ್ಚದಲ್ಲಿ ತೋಟಗಾರಿಕೆ ಕಾಲೇಜನ್ನು ಬಜೆಟ್‌ನಲ್ಲಿ ಘೋಷಣೆ ಮಾಡಿಸಲು ಸಾಕಷ್ಟು ಪ್ರಯತ್ನ ಪಟ್ಟಿದ್ದೇನೆ. ಅಲ್ಲದೇ ಸಿಂಗಟಾಲೂರು ಏತ ನೀರಾವರಿ ಮೂಲಕ ಹತ್ತಾರು ಕೆರೆಗಳನ್ನು ತುಂಬಿಸಲಾಗಿದೆ ಎಂದು ರೋಣ ಕ್ಷೇತ್ರದ ಶಾಸಕ, ಖನಿಜ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಜಿ.ಎಸ್. ಪಾಟೀಲ್ ತಿಳಿಸಿದರು.