ಸಾರಾಂಶ
ಬರಗಾಲ ಘೋಷಣೆಯಾದ ಸಂದರ್ಭದಲ್ಲಿ ಉದ್ಯೋಗ ಖಾತ್ರಿ ಯೋಜನೆಯನ್ನು 150 ದಿನಕ್ಕೆ ಹೆಚ್ವಿಸಲು ಅವಕಾಶವಿದೆ. ಆದರೆ ಕೇಂದ್ರ ಸರ್ಕಾರ ಇದಕ್ಕೆ ಸ್ಪಂದಿಸುತ್ತಿಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ರಾಜ್ಯದಲ್ಲಿನ 3 ಲಕ್ಷ ಕುಟುಂಬಗಳು 100 ದಿನ ಉದ್ಯೋಗ ಪಡೆದಿವೆ
ಗದಗ: ಬರಗಾಲ ಘೋಷಣೆಯಾದ ಸಂದರ್ಭದಲ್ಲಿ ಉದ್ಯೋಗ ಖಾತ್ರಿ ಯೋಜನೆಯನ್ನು 150 ದಿನಕ್ಕೆ ಹೆಚ್ವಿಸಲು ಅವಕಾಶವಿದೆ. ಆದರೆ ಕೇಂದ್ರ ಸರ್ಕಾರ ಇದಕ್ಕೆ ಸ್ಪಂದಿಸುತ್ತಿಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.ಅವರು ಮಂಗಳವಾರ ಗದಗ ನಗರದಲ್ಲಿ ಪ್ರಗತಿ ಪರಿಶೀಲನಾ ಸಭೆಗೆ ಆಗಮಿಸಿದ ವೇಳೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.ತೀವ್ರ ಬರಗಾಲ ಸೃಷ್ಟಿಯಾಗಿ ಜನರು ಉದ್ಯೋಗ ಹುಡುಕಿಕೊಂಡು ಬೇರೆಡೆ ಹೋಗುವುದನ್ನು ತಪ್ಪಿಸಲು ಇನ್ನೂ 50 ದಿನ ಹೆಚ್ಚುವರಿ ಉದ್ಯೋಗ ಕೊಡಬಹುದು, ಇದಕ್ಕೆ ಅವಕಾಶವಿದೆ. ಈ ಬಗ್ಗೆಯೂ ಕೇಂದ್ರಕ್ಕೆ ಮತ್ತೊಮ್ಮೆ ವಿನಂತಿಸುತ್ತೇವೆ. ಈಗಾಗಲೇ ರಾಜ್ಯದಲ್ಲಿನ 3 ಲಕ್ಷ ಕುಟುಂಬಗಳು 100 ದಿನ ಉದ್ಯೋಗ ಪಡೆದಿವೆ. ಆದರೆ ಇನ್ನು ಹೆಚ್ಚಿನ ಉದ್ಯೋಗದ ಅವಶ್ಯಕತೆ ಇದೆ ಎಂದರು.
ಬರ ಪರಿಹಾರಕ್ಕೆ ರಾಜ್ಯ ಸರ್ಕಾರ ಹೆಚ್ಚುವರಿ ಹಣ ಬಿಡುಗಡೆ ಮಾಡುವಂತೆ ಬಿಜೆಪಿ ಒತ್ತಾಯ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿನ 223 ತಾಲೂಕುಗಳು ಬರ ಅಂತಾ ಘೋಷಣೆ ಮಾಡಿದ್ದೇವೆ. ಬರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೂ ಮನವಿ ಸಲ್ಲಿಸಿದ್ದೇವೆ ಎಂದರು.ಕೇಂದ್ರ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕು. ಕೇಂದ್ರದ ಸಚಿವರನ್ನು ಭೇಟಿ ಮಾಡುವ ಪ್ರಯತ್ನ ನಿರಂತರ ಮಾಡಿದ್ದೇವೆ. ಸಚಿವರು ಸಿಗುತ್ತಿಲ್ಲ, ಕೇಂದ್ರ ಕೃಷಿ ಕಾರ್ಯದರ್ಶಿ, ಗೃಹ ಕಾರ್ಯದರ್ಶಿಗಳನ್ನ ಈಗಾಗಲೇ ಭೇಟಿ ಮಾಡಿದ್ದೇವೆ ಎಂದರು.ಕಾರ್ಯದರ್ಶಿಗಳಲ್ಲಿ ಆದಷ್ಟು ಬೇಗ ಹಣ ಬಿಡುಗಡೆ ಮಾಡುವಂತೆ ಮನವಿಯನ್ನೂ ಮಾಡಿದ್ದೇವೆ. ಕೇಂದ್ರ, ಸಚಿವರು ಅವಕಾಶ ಕೊಟ್ಟರೆ ಭೇಟಿಯಾಗುತ್ತೇವೆ ಎಂದು ಸಂದೇಶ ಕೊಟ್ಟಿದ್ದೇವೆಕೇಂದ್ರ ಮಂತ್ರಿಗಳ ಅಪಾಯಿಂಟ್ಮೆಂಟ್ ನಿರಂತರವಾಗಿ ಕೇಳುತ್ತಿದ್ದೇವೆ, ಆದರೆ ಇದುವರೆಗೂ ನಮಗೆ ಸ್ಪಂದನೆ ಸಿಕ್ಕಿಲ್ಲ ಎಂದು ಆರೋಪಿಸಿದರು. ಕೇಂದ್ರದ ಹಣ ಬಂದ ತಕ್ಷಣವೇ ಅದನ್ನು ಬರಗಾಲದಿಂದ ತೊಂದರೆಯಲ್ಲಿರುವ ಜನರಿಗೆ ತಲುಪಿಸುತ್ತೇವೆ.ರಾಜ್ಯ ಸರ್ಕಾರ ಈಗಾಗಲೇ 250 ಕೋಟಿ ರು. ಬಿಡುಗಡೆ ಮಾಡಿದ್ದು, ಎಲ್ಲಾ ಜಿಲ್ಲಾಧಿಕಾರಿಗಳ ಖಾತೆಗೆ ಬರಗಾಲ ನಿರ್ವಹಣೆಗಾಗಿ ಜಮೆ ಮಾಡಲಾಗಿದೆ. ಈ ಹಣದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ, ಮೇವು ಖರೀದಿ ಸೇರಿದಂತೆ ತಕ್ಷಣವೇ ಸ್ಪಂದಿಸಲು ಬೇಕಾದಾಗ ಬಳಸಲು ಸೂಚಿಸಲಾಗಿದೆ ಎಂದರು.