ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ದೇವಾಲಯಗಳ ನಾಡು ಎಂದೇ ಪ್ರಖ್ಯಾತಿಯಾದ ತಾಲೂಕಿನಲ್ಲಿ ಗಂಗರ ಕಾಲದ 4 ಶಾಸನಗಳು, ಹೊಯ್ಸಳರ 46, ವಿಜಯನಗರ ಅರಸರ 19, ಮೈಸೂರು ದೊರೆಗಳ ಮೂರು ಶಾಸನಗಳು ಹಾಗೂ ಇತರೆ 113 ಶಾಸನಗಳು ದೊರೆತಿದ್ದು, ಸುಮಾರು 185 ಶಾಸನಗಳನ್ನು ಪತ್ತೆ ಹಚ್ಚಲಾಗಿದೆ.ಕೆ.ಆರ್.ಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾಗಿರುವ ಆರ್.ಕಿರಣ್ ಕುಮಾರ್ ಅವರು ಮಂಡ್ಯ ಜಿಲ್ಲೆಯ ಸ್ಮಾರಕ ಶಿಲ್ಪಗಳ ಪ್ರಬಂಧದ ವಿಷಯಕ್ಕೆ ಸಂಶೋಧನಾ ವಿದ್ಯಾರ್ಥಿಯಾಗಿ ಮೈಸೂರು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಸಿ.ಲೋಕೇಶ ಅವರ ಮಾರ್ಗದರ್ಶನದಲ್ಲಿ ತಾಲೂಕಿನ ಹಿರಿಯ ಸಾಹಿತಿ ಮಹಮ್ಮದ್ ಕಲೀಂಉಲ್ಲಾ ಅವರ ಸಹಕಾರದೊಂದಿಗೆ ತಾಲೂಕಿನ ಕಾರ್ಯ ಕ್ಷೇತ್ರದಲ್ಲಿ ತೊಡಗಿದ್ದ ವೇಳೆ ನಾಲ್ಕು ಅಪ್ರಕಟಿತ ವೀರಗಲ್ಲು ಶಾಸನಗಳು ಹಾಗೂ ಎರಡು ಇತರೆ ಶಾಸನಗಳು ದೊರೆತಿವೆ.
ಸಂತೆಬಾಚಹಳ್ಳಿಯ ಡಾ.ನಂಜುಂಡಸ್ವಾಮಿ ಅವರು ಮಂಡ್ಯ ಜಿಲ್ಲೆಯ ಶಾಸನ ಮತ್ತು ಸಂಸ್ಕೃತಿ ಬಗ್ಗೆ ಸಮಗ್ರವಾಗಿ ಅಧ್ಯಯನ ಮಾಡಿ ಪ್ರಕಟ ಮಾಡಿದ್ದು, ಶಾಸನ ಓದಲು ಸಂಪೂರ್ಣವಾಗಿ ಸಹಕರಿಸಿದ್ದಾರೆ. ನಾಲ್ಕು ವೀರಗಲ್ಲು ಶಾಸನಗಳಲ್ಲಿ ಎರಡು ವೀರಗಲ್ಲು ಶಾಸನಗಳು ಗಂಗರ ಕಾಲದ್ದಾಗಿದ್ದು ಇನ್ನೆರಡು ಹೊಯ್ಸಳರ ಕಾಲಕ್ಕೆ ಸೇರಿದೆ. ಇತರೆ ಶಾಸನಗಳಲ್ಲಿ ಒಂದು ಹೊಯ್ಸಳರ ಕಾಲದ ತಮಿಳು ಧಾನ ಶಾಸನವಾಗಿದೆ. ಮತ್ತೊಂದು ಶಾಸನ ವಿಜಯನಗರ ಕಾಲದ ಶಾಸನವಾಗಿದೆ.ತಾಲೂಕಿನ ಬ್ಯಾಡರಹಳ್ಳಿ ಸುರೇಶ್ ಅವರ ಜಮೀನಿನಲ್ಲಿ ದೊರೆತಿರುವ ಒಂದನೇ ವೀರಗಲ್ಲು ಶಾಸನವು ಮೂರು ಹಂತದ ತುರುಗೋಳ್ ಶಾಸನವಾಗಿದೆ. ಸುಮಾರು 5.10 ಅಡಿ ಉದ್ದ ಮತ್ತು 4 ಅಡಿ ಅಗಲ ಮತ್ತು 15 ಸೆಂ.ಮಿ. ದಪ್ಪವಿದ್ದು ಈ ಶಾಸನದ ಸಾರವು 10ನೇ ಶತಮಾನದ ಗಂಗರ ಶಾಸನವಾಗಿದೆ.
ಸತ್ಯ ವಾಕ್ಯ (ರಾಚ ಮಲ್ಲ) ಆಳ್ವಿಕೆಕಾಲ (ಬಹುಶ: 974-985)ಶ್ರೀ ಮಾರ ಕುಡಿಯಣ್ಣನು ತುರುಗೋಳಿನಲ್ಲಿ ಕಾದಿ ತುರುಗಳು ಹಿಂದಿರುಗಿಸಿ ಸತ್ತಿದ್ದಾನೆ. ಲಿಪಿಯಲ್ಲಿ ಪಾ ಅತಿಶೆ ಬಾ ಅತಿಶೆ ಪದಗಳಿದ್ದು, ಇದರರ್ಥ ಯಾವುದು ಸ್ಥಳ ಇರಬಹುದು. ಇದು 10ನೇ ಶತಮಾನದ ಗಂಗರ ಲಿಪಿ ಎಂದು ಹೇಳಬಹುದು.ಇನ್ನೊಂದು ವಿರಗಲ್ಲು ಶಾಸನ ತಾಲೂಕಿನ ಹಾಲತಿ ಗ್ರಾಮಕ್ಕೆ ಹೋಗುವ ದಾರಿಯ ರಸ್ತೆಯಲ್ಲಿ ಗೌರಮ್ಮರ ಹೊಲದಲ್ಲಿ ದೊರೆತ ವೀರಗಲ್ಲು ಶಾಸನವಾಗಿದೆ. ಸುಮಾರು 4.8 ಅಡಿ ಉದ್ದ, 3.4ಅಡಿ ಅಗಲ ಮತ್ತು 18 ಸೆಂ.ಮಿ. ದಪ್ಪವಿದೆ. ವೀರರ ಗುಡಿಯಾಗಿದ್ದು ಮೇಲ್ಚಾವಣಿ ಮುರಿದುಹೋಗಿದೆ. ಇದೂ ಸಹ ಮೂರಂತದ ವೀರಗಲ್ಲು ಶಾಸನವಾಗಿದೆ. ಪ್ರಮುಖ ದಂಡನಾಯಕನ ವೀರಗಲ್ಲು ಶಾಸನವಾಗಿದ್ದು ಲಿಪಿ ಮತ್ತು ವೀರಗಲ್ಲು ಲಕ್ಷಣಗಳ ಆಧಾರದ ಮೇಲೆ ಗಂಗರ ಕಾಲದ್ದಾಗಿದೆ. ಕೆಲವು ಅಕ್ಷರಗಳು ಮಾತ್ರ ಉಳಿದಿದ್ದು, ಇನ್ನುಳಿದವು ಅಳಿಸಿವೆ ಕ್ರಿಸ್ತಶಕ 10ನೇ ಶತಮಾನ ಎಂದು ಹೇಳಬಹುದು.
ಮೂರನೇ ವೀರಗಲ್ಲು ಶಾಸನವು ಬೆಳ್ಳೂರು ಹೋಬಳಿಯ ನಾಲ್ಕು ಸಾಲುಗಳ ಶಾಸನವಾಗಿದ್ದು ಕಾಡಅಂಕನಹಳ್ಳಿಯಲ್ಲಿ ದೊರೆತಿದೆ. ಮೂರು ಹಂತದ ವೀರಗಲ್ಲಾಗಿದ್ದು ವೀರರ ಗುಡಿಯಾಗಿದೆ. ಸುಮಾರು 5.2 ಅಡಿ ಉದ್ದ, 2.8ಅಡಿ ಅಗಲ ಮತ್ತು 1ಅಡಿ ದಪ್ಪವಿದೆ. ಶಾಸನ ಪದ್ಯದ ರೂಪದಲ್ಲಿದ್ದು ’ಬೀರಗಲ್ಲು’ ಎಂಬ ಪದ ಓದಲು ಮೇಲ್ನೋಟಕ್ಕೆ ಕಾಣುತ್ತದೆ. ಲಿಪಿ ಆಧಾರದ ಮೇಲೆ ಹೊಯ್ಸಳರ ಕಾಲದ ಶಾಸನವಾಗಿದ್ದು ಪ್ರಮುಖ ದಂಡನಾಯಕನಿಗೆ ಸೇರಿದ ಶಾಸನವೆಂದು ಲಿಪಿಯಿಂದ ಹೇಳಬಹುದಾಗಿದೆ (11-12ನೇ ಶತಮಾನ ಎಂದು ಹೇಳಬಹುದು)ಇದೇ ಗ್ರಾಮದ ಕಾಳಿಂಗನಹಳ್ಳಿಗೆ ಹೋಗುವ ರಸ್ತೆ ಎಡ ಭಾಗದಲ್ಲಿ ಮತ್ತೊಂದು ಶಾಸನ ದೊರೆತಿದೆ. ಇದು ಸುಮಾರು 3.8 ಅಡಿ ಉದ್ದ, 1.9ಅಡಿ ಅಗಲ ಮತ್ತು 15 ಸೆಂ.ಮೀ. ದಪ್ಪವಿದೆ. ಅದರ ಪಕ್ಕದಲ್ಲಿರುವ ಎರಡು ವೀರಗಲ್ಲುಗಳ ಲಿಪಿಯ ಆಧಾರದ ಮೇಲೆ ಹೊಯ್ಸಳರ ಕಾಲದ ವೈಷ್ಣವ ಧರ್ಮದ ತಮಿಳು ಭಾಷೆಯ ದಾರಾ ಶಾಸನವಾಗಿದೆ. ಶಾಸನದ ಕಲ್ಲಿನಲ್ಲಿ ಸೂರ್ಯ, ಚಂದ್ರ, ಶಂಖ ಚಕ್ರ ಇದ್ದು ಹದಿನಾಲ್ಕು ಸಾಲುಗಳಿಂದ ಕೂಡಿದೆ. ಶಾಸನದ ಪಡಿ ಹೆಚ್ಚು ತೆಗೆಯಬೇಕಾಗಿರುವುದರಿಂದ ಶಾಸನ ಸಂಪೂರ್ಣವಾಗಿ ಓದಿದ ನಂತರ ಮಾಹಿತಿ ತಿಳಿಯಬಹುದಾಗಿದೆ. (11-12ನೇ ಶತಮಾನ ಎಂದು ಹೇಳಬಹುದು.
ಬೆಳ್ಳೂರು ಹೋಬಳಿ ಕತ್ರಿಗುಪ್ಪೆ ಗ್ರಾಮದ ವಿಜಯಲಕ್ಷ್ಮಿ ರವರ ಹೊಲದಲ್ಲಿ ವಿಜಯನಗರ ಕಾಲದ ಶಾಸನ ದೊರೆತಿದ್ದು, ಶಾಸನ ಕಲ್ಲಿನ ಅರ್ಧ ಭಾಗ ಮಣ್ಣಿನಲ್ಲಿ ಹುದುಗಿದ್ದು ಅರ್ಧ ಭಾಗದ ಶಾಸನ ಸಾಲು ದೊರೆತಿದೆ. ಎಪಿ ಆಧಾರದ ಮೇಲೆ ವಿಜಯನಗರ ಕಾಲಕ್ಕೆ ಸೇರಿದ್ದು ಎಂದು ಹೇಳಬಹುದು.ನಿವೃತ್ತ ಶಿಕ್ಷಕ ಮಹಮ್ಮದ್ ಕಲೀಂಉಲ್ಲಾ ಅವರು ಹವ್ಯಾಸಿ ಸಂಶೋಧಕರಾಗಿ ಸ್ಮಾರಕ ಶಿಲ್ಪಗಳ ಉಳಿವಿಗೆ ಸದಾ ಶ್ರಮಿಸುತ್ತಿದ್ದಾರೆ. ಸುಮಾರು 25 ವರ್ಷಗಳ ಹಿಂದೆ ಚರಂಡಿಯಲ್ಲಿ ಬಿದ್ದಿದ್ದ ವೀರಗಲ್ಲು ಶಾಸನವನ್ನು ಸಂರಕ್ಷಿಸಿ ವೀರಭದ್ರಸ್ವಾಮಿ ದೇವಾಲಯದ ಪಕ್ಕದಲ್ಲಿ ಇರಿಸಿದ್ದಾರೆ. ಲಿಪಿ ಮತ್ತು ಬಳಸಿರುವ ಕಲ್ಲಿನ ಆಧಾರದ ಮೇಲೆ ಹೊಯ್ಸಳರ ಕಾಲಕ್ಕೆ ಸೇರಿದ್ದು. ಲಿಪಿಯ ಕೆಲವು ಅಕ್ಷರಗಳು ಪತ್ತೆಯಾಗಿವೆ. ಇನ್ನುಳಿದವು ಸಂಪೂರ್ಣವಾಗಿ ಅಳಿಸಿವೆ. ಶಾಸನ ಓದಲು ಸಾಧ್ಯವಿಲ್ಲ ಆದರೂ ಶಾಸನೊಕ್ತ ವೀರಗಲ್ಲು ಎಂದು ಹೇಳಬಹುದು. ಮೂರು ಹಂತದ ವೀರಗಲ್ಲಾಗಿದ್ದು ಶಿಲ್ಪಕಲಾ ದೃಷ್ಟಿಯಿಂದ ಸುಂದರವಾಗಿದ್ದು, ಯುದ್ಧದ ಹೋರಾಟದ ದೃಶ್ಯ ಸ್ವರ್ಗದ ಕಲ್ಪನೆ ಶಿವ ಸಾನಿಧ್ಯವನ್ನು ಚಿತ್ರಿಸಲಾಗಿದೆ.