ಗೃಹ ರಕ್ಷಕ ವಿಭಾಗದಲ್ಲಿ 187 ಮಂದಿ ಕರ್ತವ್ಯ ನಿರ್ವಹಣೆ: ಸುಂದರ್ ರಾಜ್

| Published : Dec 03 2024, 12:30 AM IST

ಗೃಹ ರಕ್ಷಕ ವಿಭಾಗದಲ್ಲಿ 187 ಮಂದಿ ಕರ್ತವ್ಯ ನಿರ್ವಹಣೆ: ಸುಂದರ್ ರಾಜ್
Share this Article
  • FB
  • TW
  • Linkdin
  • Email

ಸಾರಾಂಶ

300 ಮಂದಿ ನೇಮಕದಲ್ಲಿ 187 ಮಂದಿ ಮಾತ್ರ ಗೃಹ ರಕ್ಷಕ ದಳದಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದಾರೆ ಎಂದು ಕೆ.ಎಸ್‌. ಸುಂದರರಾಜ್‌ ಹೇಳಿದರು. ಗೃಹ ರಕ್ಷಕ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಜಿಲ್ಲೆಯಲ್ಲಿ ಈ ಹಿಂದೆ 500 ಮಂದಿ ಗೃಹರಕ್ಷಕರನ್ನು ನಿಯೋಜಿಸಿಕೊಳ್ಳಲು ಅವಕಾಶ ಇತ್ತು, ಆದರೆ ಯಾರೂ ಸಹ ಗೃಹರಕ್ಷಕರಾಗಿ ಕರ್ತವ್ಯ ನಿರ್ವಹಿಸಲು ಮುಂದೆ ಬರದಿರುವ ಹಿನ್ನೆಲೆ 200 ಜನರನ್ನು ಕಡಿಮೆ ಮಾಡಿ, 300 ಮಂದಿ ನೇಮಕದಲ್ಲಿ 187 ಮಂದಿ ಮಾತ್ರ ಗೃಹರಕ್ಷಕದಳ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕೆ.ಎಸ್.ಸುಂದರರಾಜ್ ತಿಳಿಸಿದ್ದಾರೆ.

ಜಿಲ್ಲಾ ಗೃಹ ರಕ್ಷಕದಳ ವತಿಯಿಂದ ನಗರದ ಜಿಲ್ಲಾ ಗೃಹರಕ್ಷಕದಳ ಕಚೇರಿಯಲ್ಲಿ ಸೋಮವಾರ ನಡೆದ ‘ಗೃಹ ರಕ್ಷಕದಳ ದಿನಾಚರಣೆ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೇರೆ ಬೇರೆ ಜಿಲ್ಲೆಗಳಲ್ಲಿ ಗೃಹರಕ್ಷಕದಳದಲ್ಲಿ ಕರ್ತವ್ಯ ನಿರ್ವಹಿಸಲು ಸ್ವಯಂ ಪ್ರೇರಣೆಯಿಂದ ಮುಂದೆ ಬರುತ್ತಾರೆ. ಆ ನಿಟ್ಟಿನಲ್ಲಿ ವೃತ್ತಿಯನ್ನು ಗೌರವಿಸಿ ಬದುಕು ಕಟ್ಟಿಕೊಳ್ಳುವತ್ತ ಗಮನಹರಿಸಬೇಕು ಎಂದು ಸಲಹೆ ಮಾಡಿದರು.

ಗೃಹರಕ್ಷಕ ಸಿಬ್ಬಂದಿಗೆ ಕರ್ತವ್ಯ ನಿರ್ವಹಿಸುವ ದಿನಕ್ಕೆ 500 ರು. ನೀಡಲಾಗುತ್ತದೆ. ಗೃಹರಕ್ಷಕರು ಪೊಲೀಸರಂತೆ ಕರ್ತವ್ಯ ನಿರ್ವಹಿಸುವುದನ್ನು ಕಾಣುತ್ತೇವೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಇತ್ತೀಚಿನ ದಿನಗಳಲ್ಲಿ ಪದವಿ ಪಡೆದವರು ಸಹ ಗೃಹರಕ್ಷಕದಳ ಹುದ್ದೆಗೆ ಬರುತ್ತಾರೆ. ಯಾವುದೇ ಕೆಲಸವನ್ನು ಶ್ರದ್ಧೆಯಿಂದ ನಿರ್ವಹಿಸಿ, ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳುವತ್ತ ಗಮನಹರಿಸಬೇಕು ಎಂದು ಸುಂದರ ರಾಜ್ ಅವರು ಸಲಹೆ ಮಾಡಿದರು.

ಗೃಹರಕ್ಷಕರು ಹಬ್ಬ ಹರಿದಿನಗಳು, ಜಾತ್ರೆಗಳು, ವಿಶೇಷ ಸಂದರ್ಭಗಳಲ್ಲಿ ಹಾಗೂ ವಿವಿಧ ಇಲಾಖೆಗಳ ಜೊತೆ ನಿಕಟ ಸಂಪರ್ಕ ಹೊಂದಿ ಕರ್ತವ್ಯ ನಿರ್ವಹಿಸುತ್ತಾರೆ ಎಂದು ಸುಂದರರಾಜ್ ಅವರು ಹೇಳಿದರು.

ಗೃಹರಕ್ಷಕರಲ್ಲಿ ಶಿಸ್ತು, ಸಮಯಪ್ರಜ್ಞೆ ಕಾಣಬಹುದು. ಆ ದಿಸೆಯಲ್ಲಿ ಸಮಾಜ ಗೃಹರಕ್ಷಕರನ್ನು ಗುರುತಿಸುತ್ತದೆ. ಕೊಡಗು ಜಿಲ್ಲೆಯಲ್ಲಿ ಗೃಹರಕ್ಷಕರು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ಮಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರು ಮಾತನಾಡಿ ಗೃಹರಕ್ಷಕರು ಸಮಾಜದ ಒಳಿತಿಗಾಗಿ ಕೆಲಸ ನಿರ್ವಹಿಸುತ್ತಾರೆ. ಆ ನಿಟ್ಟಿನಲ್ಲಿ ತಮ್ಮ ಆರೋಗ್ಯವನ್ನು ನೋಡಿಕೊಂಡು ಉತ್ತಮವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಗೃಹರಕ್ಷಕರು ಪೊಲೀಸರ ಜೊತೆ ಕರ್ತವ್ಯ ನಿಷ್ಠೆ ಹಾಗೂ ಸಮಯಪ್ರಜ್ಞೆಯಿಂದ ಕಾರ್ಯನಿರ್ವಹಿಸುತ್ತಾರೆ, ಇದೊಂದು ರೀತಿ ಪರೋಪಕಾರದ ಕೆಲಸವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪೊಲೀಸ್ ಇನ್ಸ್ಪೆಕ್ಟರ್ ರವಿ ಅವರು ಮಾತನಾಡಿ, ಗೃಹರಕ್ಷಕರು ಸಹ ಪೊಲೀಸರಷ್ಟೇ ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸುತ್ತಾರೆ. ಸಂಚಾರ ನಿಯಂತ್ರಣದಲ್ಲಿ ಹೆಚ್ಚಿನ ಕೆಲಸ ನಿರ್ವಹಿಸುತ್ತಾರೆ ಎಂದು ಹೇಳಿದರು.

ಪ್ರಸಕ್ತ ವರ್ಷದಲ್ಲಿ ಗೃಹರಕ್ಷಕರಾಗಿ ಉತ್ತಮ ಸೇವೆ ಸಲ್ಲಿಸಿದ 10 ಮಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಾಗೆಯೇ ಮುಂಬಡ್ತಿ ಹೊಂದಿದ 8 ಮಂದಿ ಗೃಹರಕ್ಷಕರಿಗೆ ಸನ್ಮಾನಿಸಲಾಯಿತು. ಹಾಗೆಯೇ ನಿವೃತ್ತರಾದ ಗೃಹರಕ್ಷಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಗೃಹರಕ್ಷಕದಳ ವಿಭಾಗದ ವಿಶ್ವನಾಥ, ಕವನ್ ಕುಮಾರ್, ಪುಟ್ಟರಾಜು, ತ್ಯಾಗರಾಜು, ಲೋಕೇಶ್ ಇತರರು ಇದ್ದರು. ಪ್ರಕೃತಿ ಮತ್ತು ತಂಡದವರು ಪ್ರಾರ್ಥಿಸಿದರು. ಗೃಹರಕ್ಷಕರಾದ ಮದಬ್ ಬೈರಗಿ ಸ್ವಾಗತಿಸಿದರು. ಲವಿ ಕೆ.ಎಫ್.ಅವರು ನಿರೂಪಿಸಿ, ವಂದಿಸಿದರು. ಸಭಾ ಕಾರ್ಯಕ್ರಮಕ್ಕೂ ಮೊದಲು ಗೃಹರಕ್ಷಕದಳದ ಪಿಎಸ್‌ಐ ಅಕ್ಷಯ್ ಕುಮಾರ್ ಅವರು ಗೌರವ ವಂದನೆ ಸಲ್ಲಿಸಿದರು.