ಸಾರಾಂಶ
ಸಿಂದಗಿಯಿಂದ ಬೆಂಗಳೂರಿಗೆ 2 ಸ್ಲೀಪರ್ ಬಸ್ ಸೇವೆ ಆರಂಭಗೊಂಡಿದ್ದು, ಶಾಸಕ ಅಶೋಕ ಮನಗೂಳಿ ಅವರು ಸಿಂದಗಿ ಬಸ್ ನಿಲ್ದಾಣದಲ್ಲಿ ಸೇವೆ ಚಾಲನೆ ನೀಡಿದರು.
ಸಿಂದಗಿ: ಸಿಂದಗಿಯಿಂದ ಬೆಂಗಳೂರಿಗೆ ಪ್ರಯಾಣ ಮಾಡಲು ಸಾರಿಗೆ ಇಲಾಖೆಯಿಂದ 2 ಸ್ಲೀಪರ್ ಬಸ್ಸುಗಳನ್ನು ಮಂಜೂರು ಮಾಡಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಅವರು ಪಟ್ಟಣದ ಬಸ್ ನಿಲ್ದಾಣದಲ್ಲಿ ಸಿಂದಗಿ-ಬೆಂಗಳೂರು ನೂತನ 2 ಸ್ಲೀಪರ್ ಬಸ್ಸುಗಳಿಗೆ ಚಾಲನೆ ನೀಡಿ ಮಾತನಾಡಿದರು. ಈ ಭಾಗದ ಜನತೆಯ ಬಹುದಿನಗಳ ಬೇಡಿಕೆಯಾಗಿತ್ತು. ಸಿಂದಗಿಯಿಂದ ಹಲವಾರು ಜನ ತಮ್ಮ ಕಾರ್ಯಗಳಿಗೆ ಬೆಂಗಳೂರಿಗೆ ನಿತ್ಯ ಪ್ರಯಾಣ ಮಾಡಲಿದ್ದಾರೆ. ಆದರೆ ಖಾಸಗಿ ಬಸ್ಸುಗಳಲ್ಲಿ ಬಸ್ಸಿನ ದರ ತಟಸ್ಥವಾಗಿರುವುದಿಲ್ಲ. ಹಬ್ಬ ಮತ್ತು ರಜಾದಿನಗಳು ಬಂದರೆ ದರದಲ್ಲಿ ತುಂಬಾ ಜಾಸ್ತಿ ಏರಿಕೆಯನ್ನು ಕಾಣುತ್ತೇವೆ. ಇದರಿಂದ ಪ್ರಯಾಣಿಕರಿಗೆ ಬಹಳಷ್ಟು ತೊಂದರೆಯಾಗಿತ್ತು. ಇದರ ಪರಿಹಾರಕ್ಕಾಗಿ ಸಾರಿಗೆ ಇಲಾಖೆಗೆ ಮನವಿ ಸಲ್ಲಿಸಿ ಈ ಯೋಜನೆಯನ್ನು ರೂಪಿಸಿದ್ದೇವೆ. ಪ್ರಯಾಣಿಕರು ಇದರ ಲಾಭವನ್ನು ಪಡೆದುಕೊಳ್ಳಬೇಕು ಎಂದರು.ಈ ವೇಳೆ ಸಾರಿಗೆ ಇಲಾಖೆಯ ಸಿಂದಗಿ ಘಟಕದ ವ್ಯವಸ್ಥಾಪಕ ರೇವಣಸಿದ್ದ ಖೈನೂರ ಮಾತನಾಡಿ, ಪ್ರತಿ ದಿನ 1 ಬಸ್ಸು ಪ್ರಯಾಣವನ್ನು ಬೆಳೆಸುತ್ತದೆ. ರಾತ್ರಿ 7.30 ಗಂಟೆಗೆ ಸಿಂದಗಿ ಮಾರ್ಗವಾಗಿ ಹೂವಿನಹಿಪ್ಪರಗಿ, ಮುದ್ದೇಬಿಹಾಳದಿಂದ ಬೆಂಗಳೂರಗೆ ಬಸ್ಸು ಸಂಚರಿಸಲಿದೆ ಎಂದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಅರವಿಂದ ಹಂಗರಗಿ, ಪ್ರವೀಣ ಕಂಠಿಗೊಂಡ, ಕುಮಾರ ದೇಸಾಯಿ ಇಲಾಖೆಯ ಆನಂದ ಬಡಿಗೇರ ಸಂತೋಷ ಹತ್ತರಕಿ, ಶಿವುಕುಮಾರ ಮರಬಿ, ಮಹಾದೇವ ಹೊನ್ನಳ್ಳಿ ಸೇರಿದಂತೆ ಇತರರು ಇದ್ದರು.